ಗುರುಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಯವರ ಅದೃಷ್ಟ ಶುರು

By Suvarna NewsFirst Published Apr 8, 2021, 4:42 PM IST
Highlights

ಗ್ರಹಗಳು ರಾಶಿ ಪರಿವರ್ತನೆಯಾದಾಗ ಎಲ್ಲ ರಾಶಿಗಳ ಮೇಲೂ ಪ್ರಭಾವ ಬೀರುತ್ತದೆ. ಕೆಲವು ರಾಶಿಯವರಿಗೆ ಶುಭಫಲ ದೊರೆತರೆ ಮತ್ತೆ ಕೆಲವು ರಾಶಿಯವರಿಗೆ ಅಶುಭ ಪ್ರಭಾವಗಳಾಗುತ್ತವೆ. ಗುರು ಗ್ರಹವು ಇದೇ ಏಪ್ರಿಲ್ 6ರಂದು ಕುಂಭ ರಾಶಿಯನ್ನು ಪ್ರವೇಶಿಸಿದೆ. ಇದರಿಂದ ಕೆಲವು ರಾಶಿಯವರಿಗೆ ಅತ್ಯಂತ ಶುಭವಾಗಲಿದೆ. ಹಾಗಾಗಿ ಆ ರಾಶಿಗಳ ಬಗ್ಗೆ ತಿಳಿಯೋಣ..

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಪ್ರತಿ ವ್ಯಕ್ತಿಯ ಜೀವನದಲ್ಲಿ ಜಾತಕದ ಪ್ರಭಾವ ಹೆಚ್ಚಿರುತ್ತದೆ. ಜೀವನದ ಆಗು-ಹೋಗುಗಳಿಗೆ ಜಾತಕದ ಗ್ರಹ ನಕ್ಷತ್ರಗಳು ಮತ್ತು ದೆಸೆ ಕಾರಣವಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಗ್ರಹ ನಕ್ಷತ್ರಗಳ ಸ್ಥಿತಿ ಉತ್ತಮವಾಗಿದ್ದರೆ ಎಲ್ಲವೂ ಅನುಕೂಲವಾಗಿರುತ್ತದೆ. ಗ್ರಹ ಮತ್ತು ನಕ್ಷತ್ರಗಳ ರಾಶಿ ಪರಿವರ್ತನೆಯಿಂದ ಜೀವನದಲ್ಲಿ ಏರು-ಪೇರುಗಳನ್ನು ಕಾಣಬೇಕಾಗುತ್ತದೆ. ಕೆಲವು ಬಾರಿ ಶುಭ ಫಲಗಳು ದೊರೆತರೆ ಮತ್ತೆ ಕೆಲವು ಬಾರಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಈ ಬಾರಿ ಏಪ್ರಿಲ್ 6ರಂದು ಗುರುಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಪರಿವರ್ತನೆ ಹೊಂದಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುಗ್ರಹವನ್ನು ಅತ್ಯಂತ ಶುಭಫಲವನ್ನು ನೀಡುವ ಗ್ರಹವೆಂದು ಹೇಳಲಾಗುತ್ತದೆ. ಗುರುಗ್ರಹವು ಜ್ಞಾನ, ಧರ್ಮ ಮತ್ತು ವಿವಾಹ ಕಾರಕನಾಗಿದ್ದಾನೆ. ಗುರು ಗ್ರಹವು ಕರ್ಕಾಟಕ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿದ್ದರೆ, ಮಕರ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಗುರುಗ್ರಹದ ಸ್ಥಿತಿ ಉತ್ತಮವಾಗಿದ್ದರೆ, ಅಂತಹ ವ್ಯಕ್ತಿಗಳ ಜೀವನ ಸುಖಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. 

ಗುರುಗ್ರಹವು ಒಂದು ರಾಶಿಯಲ್ಲಿ ಸುಮಾರು 13 ತಿಂಗಳುಗಳ ಕಾಲ ಗೋಚರಿಸುತ್ತದೆ. ಮಕರ ರಾಶಿಯಿಂದ ಪರಿವರ್ತನೆ ಹೊಂದಿ ಶನಿ ಅಧಿಪತಿಯಾದ ಕುಂಭ ರಾಶಿಗೆ ಪ್ರವೇಶಿಸಿದೆ. ಈ ಪರಿವರ್ತನೆಯು ಎಲ್ಲ ರಾಶಿಚಕ್ರಗಳ ಮೇಲೆ ಶುಭಾಶುಭ ಪರಿಣಾಮವನ್ನು ಬೀರಲಿದೆ. ಇದರಿಂದ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದ್ದು, ಆ ರಾಶಿಗಳು ಯಾವುವು? ಎಂದು ತಿಳಿಯೋಣ...

ಇದನ್ನು ಓದಿ : ಗುರು ಗ್ರಹದ ರಾಶಿ ಪರಿವರ್ತನೆ- ಹೀಗಿದ್ದರೆ ಜಾತಕದಲ್ಲಿ ರಾಜಯೋಗ... 

ಮೇಷ ರಾಶಿ
ಗುರುಗ್ರಹವು ಕುಂಭ ರಾಶಿ ಪ್ರವೇಶಿಸಿರುವುದು ಮೇಷ ರಾಶಿಯವರಿಗೆ ಒಳಿತನ್ನು ಮಾಡಲಿದೆ. ಇದು ಶುಭ ಸಂಕೇತವೆಂದು ಹೇಳಲಾಗುತ್ತದೆ. ಕೆಲಸ – ಕಾರ್ಯಗಳಲ್ಲಿ ಸಫಲತೆಯನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಆದಾಯದ ಮೂಲವೂ ಹೆಚ್ಚುವುದಲ್ಲದೆ, ಒಂದಕ್ಕಿಂತ ಹೆಚ್ಚು ಆದಾಯ ಮೂಲವು ವೃದ್ಧಿಯಾಗುವ ಸಂಕೇತವಿದೆ. ಇದರಿಂದ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ಏಕಾದಶ ಸ್ಥಾನದಲ್ಲಿ ಅಂದರೆ ಹನ್ನೊಂದನೇ ಮನೆಯಲ್ಲಿರುವ ಗುರುವಿನಿಂದ ಅಪಾರ ಧನಲಾಭವಾಗುವ ಯೋಗವಿದೆ.

ವೃಷಭ ರಾಶಿ
ಈ ರಾಶಿಯ ವ್ಯಕ್ತಿಗಳಿಗೆ ಗುರುಗ್ರಹವು ಅತ್ಯಂತ ಶುಭವನ್ನು ಉಂಟುಮಾಡಲಿದೆ. ಉತ್ತಮ ಅವಕಾಶಗಳು ಕೈ ಸೇರಲಿವೆ ಮತ್ತು ಜೀವನದಲ್ಲಿ ಶುಭಫಲಗಳನ್ನು ಕಾಣಬಹುದಾಗಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದಾಗಿದೆ.

ಇದನ್ನು ಓದಿ: ಜಗತ್ತು ಕಾಯೋ ಶಿವನಿಗಿದೆ 8 ಸಂತಾನ, ಯಾರು ಯಾರೆಂದು ಇಲ್ಲಿದೆ ಡೀಟೇಲ್..! 

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಗುರುಗ್ರಹದ ಉತ್ತಮ ಪರಿಣಾಮದಿಂದಾಗಿ ಪಿತೃವರ್ಗದಿಂದ ಅಥವಾ ಇನ್ನಿತರ ಕಡೆಗಳಿಂದ ಆಕಸ್ಮಿಕ ಧನಲಾಭವಾಗಲಿದೆ. ಕೆಲವು ದಿನಗಳ ನಂತರ ಗುರುವು ಮಕರ ರಾಶಿಯನ್ನು ಪ್ರವೇಶಿಸಿದಾಗ ಸಪ್ತಮ ಭಾವವನ್ನು ಪ್ರಭಾವಿತಗೊಳಿಸುವುದರಿಂದ ಉದ್ಯೋಗದಲ್ಲಿ ಉತ್ತಮ ಯಶಸ್ಸು ದೊರೆಯಲಿದೆ.  ಉತ್ತಮ ಧನಲಾಭವು ಆಗಲಿದೆ. ಕುಟುಂಬದಲ್ಲಿ ಗೌರವಾದರಗಳು ಹೆಚ್ಚಲಿದ್ದು, ಉತ್ತಮ ಯೋಗವುಂಟಾಗಲಿದೆ.

ತುಲಾ ರಾಶಿ
ಗುರುಗ್ರಹದ ರಾಶಿ ಪರಿವರ್ತನೆಯಿಂದ ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಯಾವುದೇ ಅಡೆ-ತಡೆಗಳಿಲ್ಲದೆ ಸರಾಗವಾಗಿ ಮುಗಿಯುತ್ತವೆ. ಇದರಿಂದ ಆದಾಯ ಮತ್ತು ಸಂಪತ್ತು ವೃದ್ಧಿಸಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುವ ಸಂಭವವಿದೆ. ಪಿತೃ ಸಂಬಂಧಿತ ಲಾಭವನ್ನು ಪಡೆಯಬಹುದಾಗಿದ್ದು, ಆಸ್ತಿ, ಜಮೀನಿಗೆ ಸಂಬಂಧಿಸಿದ ತಗಾದೆಗಳಿಂದ ಮುಕ್ತಿ ಸಿಗುವುದಲ್ಲದೆ, ಲಾಭವಾಗಲಿದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರಿಗೆ ಸಂಗಾತಿ ಹಣದ ಮೇಲೆ ವ್ಯಾಮೋಹವಂತೆ! 

ಕುಂಭ ರಾಶಿ
ಗುರುವು ಕುಂಭ ರಾಶಿಯನ್ನು ಪ್ರವೇಶಿಸಿರುವುದರಿಂದ ಈ ರಾಶಿಯವರಿಗೆ ಅನುಕೂಲಗಳಾಗುತ್ತವೆ. ವ್ಯಾಪಾರ ಕ್ಷೇತ್ರದಲ್ಲಿ ಈ ವರೆಗೆ ಎದುರಾಗುತ್ತಿದ್ದ ಅಡೆ-ತಡೆಗಳು ದೂರವಾಗುತ್ತವೆ. ಮಾನಸಿಕ ಅಶಾಂತಿ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬರಲಿದೆ. ಸಮಾಜದಲ್ಲಿ ಗೌರವಾದರಗಳು ಹೆಚ್ಚುವುದಲ್ಲದೆ, ಆರ್ಥಿಕ ಕ್ಷಮತೆಯು ಹೆಚ್ಚಲಿದೆ. 
 

click me!