ನಿಮ್ಮದು ನರೇಂದ್ರ ಮೋದಿ ಜನ್ಮರಾಶಿ- ನಕ್ಷತ್ರವೇನಾ? ಹಾಗಾದ್ರೆ ಸದ್ಯ ನಿಮಗೆ ಸೋಲೇ ಇಲ್ಲ!

By Suvarna NewsFirst Published Jan 25, 2024, 4:07 PM IST
Highlights

ನರೇಂದ್ರ ಮೋದಿ ಅವರ ಜನ್ಮರಾಶಿ- ನಕ್ಷತ್ರಗಳು ಮೋದಿಯವರ ಪ್ರಭಾವ- ಅಧಿಕಾರದ ಗಳಿಕೆಯಲ್ಲಿ ಮಹತ್ತರ ಪಾತ್ರ ವಹಿಸಿವೆ. ನಿಮ್ಮದೂ ಅವರ ಜನ್ಮರಾಶಿ, ನಕ್ಷತ್ರವೇನಾ? ನೋಡಿಕೊಳ್ಳಿ.

ನರೇಂದ್ರ ಮೋದಿಯವರು ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪ್ರಧಾನಿ ಪದವಿಯಲ್ಲಿ ಮುಗಿಸಿ, ಇನ್ನೂ ಐದು ವರ್ಷಗಳ ಕಡೆಗೆ ದಾಪುಗಾಲು ಹಾಕುತ್ತಿದ್ದಾರೆ. ಹಲವಾರು ಸಮೀಕ್ಷೆಗಳು ಅವರು ಮುಂದಿನ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರಲಿದ್ದಾರೆ ಎಂದೇ ಹೇಳುತ್ತಿದ್ದಾರೆ. ಇದು ರಾಜಕೀಯ ಲೆಕ್ಕಾಚಾರವಾದರೆ, ಜ್ಯೋತಿಷಿಗಳೂ ಇದನ್ನೇ ಹೇಳುತ್ತಿದ್ದಾರೆ. ಹಾಗೆ ಹೇಳೋದಿಕ್ಕೆ ಇರೋ ಆಧಾರವೇನು? ಬೇರೇನಲ್ಲ, ಅವರ ಜನ್ಮರಾಶಿ- ನಕ್ಷತ್ರ, ಅವರ ಹುಟ್ಟಿದ ಗಳಿಗೆ ಇತ್ಯಾದಿ.

ನರೇಂದ್ರ ಮೋದಿಯವರು ಹುಟ್ಟಿದ್ದು 17.09.1950ರಂದು. ಹುಟ್ಟಿದ ಸಮಯ ಬೆಳಗ್ಗೆ 11:00 ಗಂಟೆಗೆ. ಹೀಗಾಗಿ ಅವರ ಜನ್ಮರಾಶಿ (ಅಥವಾ ಲಗ್ನ) ವೃಶ್ಚಿಕ, ಲಗ್ನಾಧಿಪತಿ ಕುಜ. ಜನ್ಮನಕ್ಷತ್ರ ಅನೂರಾಧಾ 2ನೇ ಪಾದ. ಜನ್ಮ ನಕ್ಷತ್ರದ ಅಧಿಪತಿ ಶನಿ. ಜನ್ಮರಾಶಿ ಅಧಿಪತಿ ಮಂಗಳ. ಗಣ- ದೇವಗಣ. ಜನ್ಮವಾರ ರವಿವಾರ. ಇದು ಅವರಿಗೆ ಹೇಗೆ ಅದೃಷ್ಟದಾಯಕವಾಗಿದೆ ನೋಡೋಣ.

Latest Videos

ಮೋದಿಯವರದು ಲಗ್ನ ವೃಶ್ಚಿಕ ಆಗಿದ್ದು ಅಲ್ಲಿ ಚಂದ್ರ, ಮಂಗಳ ಇದ್ದಾರೆ. ಕುಂಭ ರಾಶಿಯಲ್ಲಿ ಗುರು, ಸಿಂಹ ರಾಶಿಯಲ್ಲಿ ಶನಿ ಮತ್ತು ಶುಕ್ರ, ಕನ್ಯಾ ರಾಶಿಯಲ್ಲಿ ರವಿ, ಬುಧ ಮತ್ತು ಕೇತು ಇದ್ದಾರೆ. ಮೀನ ರಾಶಿಯಲ್ಲಿ ರಾಹು ಇರುತ್ತಾನೆ. ಇದರಿಂದ ಏನಾಗುತ್ತದೆಯೆಂದರೆ, ಪರಸ್ಪರ ಕೇಂದ್ರದಲ್ಲಿ ಚಂದ್ರ, ಗುರು ಇರುವುದರಿಂದ ʼಅಖಂಡ ಸಾಮ್ರಾಜ್ಯ ಯೋಗʼ ಪ್ರಾಪ್ತಿಯಾಗಿದೆ. ಹೀಗಾಗಿ ಇವರು ಒಂದು ಅಧಿಕಾರ ಸ್ಥಾನವನ್ನು ಹಿಡಿದರೆಂದರೆ ಬಹು ದೀರ್ಘ ಕಾಲ ಅವರನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಶನಿ ಹಾಗೂ ಮಂಗಳ ಗ್ರಹಗಳು ಗಟ್ಟಿಯಾಗಿ ಇವರ ಬೆಂಬಲಕ್ಕೆ ನಿಂತುಬಿಡುತ್ತವೆ.

ಇನ್ನೊಂದು ಯೋಗವೆಂದರೆ ʼಸನ್ಯಾಸಯೋಗʼ. ಇದು ಗುರು- ಶನಿ ಪರಿಸರ ದೃಷ್ಟಿಯಿಂದ ಉಂಟಾಗಿದೆ. ಮೋದಿಯವರ ವೈಯಕ್ತಿಕ ಜೀವನವನ್ನು ಬಲ್ಲವರಿಗೆ ಇದು ತಿಳಿದೇ ಇರುವಂಥದು. ಇದರ ಅರ್ಥ ಸನ್ಯಾಸಿಯಾಗುತ್ತಾರೆ ಎಂದಲ್ಲ. ಸಂಸಾರದಿಂದ ಆಚೆ ನಿಂತು ಸಾಧನೆ ಮಾಡಬಯಸುವವರಿಗೆ ಒಬ್ಬಂಟಿಯಾಗಿ ಮಹಾಸಾಧನೆ ಮಾಡಲು ಸಾಧ್ಯವಾಗುವುದು. ಸಂಸಾರದಲ್ಲಿದ್ದೇ ಸಾಧಿಸಬಯಸುವವರಿಗೂ ಸಾಧನೆ ಸಾಧ್ಯವಿದೆ. ಆದರೆ ತಮ್ಮ ಸಾಧನೆಯಲ್ಲಿ ಅವರು ಒಂಟಿಯಾಗಿಯೇ ಜಯಿಸಬಲ್ಲರು ಎಂದರ್ಥ.

ಇನ್ನಷ್ಟು ಯೋಗಗಳಿವೆ. ಲಗ್ನದಲ್ಲಿ ಚಂದ್ರ ಮತ್ತು ಮಂಗಳ ಇರುವುದರಿಂದ ʼಶಶಿಮಂಗಳʼ ಯೋಗ ಪ್ರಾಪ್ತಿ. ಜೊತೆಗೆ ʼರುಚಕ ಮಹಾಯೋಗʼ ಮತ್ತು ʼನೀಚಭಂಗ ರಾಜಯೋಗʼ ಪ್ರಾಪ್ತಿಯಾಗಿದೆ. ಇವರ ಜನ್ಮಕುಂಡಲಿಯಲ್ಲಿ ಉಚ್ಚರಾಶಿಯ ಬುಧನಿರುವುದರಿಂದ ʼಮಹಾ ಬುದ್ಧಿ ಯೋಗʼವಿದೆ. ದಶಮ ಸ್ಥಾನವಾದ ಸಿಂಹ ರಾಶಿಯಲ್ಲಿ ಶನಿ ಶುಕ್ರರು ಫಲ ನೀಡುವುದರಿಂದ ʼಕುಲದೀಪಕ ಯೋಗʼ ಪ್ರಾಪ್ತಿಯಾಗುತ್ತಿದೆ.

ಬೇಕಾದಾಗ ಹಣ ಕೊಡ್ತಾರೆ 'ಈ' ರಾಶಿಯವರು..ಆದರೆ ವಾಪಸ್ ಕೇಳೋದಿಲ್ಲ..!
 

ಇವರಿಗೆ ಸಾಡೇಸಾತಿ ಶನಿ ಫಲ ಕೂಡ ಇತ್ತು. 26.10.2020ರವರೆಗೆ ಸಾಡೇಸಾತಿ ಶನಿ ಇವರನ್ನು ಕಾಡುತ್ತಿತ್ತು. ಇದಕ್ಕೂ ಮುನ್ನ ಏಳುವರೆ ವರ್ಷಗಳಲ್ಲಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದರೂ, ಗುಜರಾತ್‌ ಗಲಭೆಯ ವಿಚಾರಣೆಯ ತೂಗುಗತ್ತಿ ಅವರ ಮೇಲೆ ತೂಗುತ್ತಲೇ ಇತ್ತು. ಆದರೆ ಶನಿಯು ಕಾಡಿದಂತೆಯೇ, ಬಿಟ್ಟು ಹೋಗುವಾಗ ಮಹಾ ವೈಭವವನ್ನೂ ಕೊಡುತ್ತಾನೆ. ಎಷ್ಟು ಇಳಿಸುತ್ತಾನೋ ಅದಕ್ಕೆ ಹತ್ತು ಪಟ್ಟು ಏರಿಸುತ್ತಾನೆ. ಶನೀಶ್ವರ ಬಿಟ್ಟು ಹೋಗುವ ಸಂದರ್ಭದಲ್ಲೇ ಮೋದಿ ಪ್ರಧಾನಿ ಪಟ್ಟ ಏರಿದರು!

ಸಿಂಹ ರಾಶಿಯಲ್ಲಿರುವ ಶನಿ ತನ್ನ ಕ್ಷೇತ್ರ ಕುಂಭ ರಾಶಿಯನ್ನು ನೋಡುವನು. ಅಖಂಡ ಸಾಮ್ರಾಜ್ಯ ಯೋಗಕ್ಕೆ ಕಾರಣನಾದ ಗುರು ದಶಮ ಸ್ಥಾನ ಸಿಂಹ ರಾಶಿ ನೋಡುವನು. ಹಾಗಾಗಿ ಶನಿ ಸ್ವಾಮಿಯು ʼಭಾಗ್ಯವಿಧಾತʼ. ಶನಿ ಎಂದರೆ ಜನ ಸಂಪತ್ತು, ಜನ ಸಂಪತ್ತು ಎಂದರೆ ಶನಿ. 140 ಕೋಟಿ ಭಾರತೀಯ ಪ್ರಜೆಗಳ ಮನಸ್ಸನ್ನು ಶನೀಶ್ವರನು ವಶೀಕರಿಸಿ ಮೋದಿಯವರಿಗೆ ಒಲಿಯುವಂತೆ ಮಾಡಿದ್ದಾನೆ. ಹೀಗಾಗಿ ಮೋದಿ ಎರಡನೇ ಬಾರಿ ಪ್ರಧಾನಿ ಪದವಿ ಏರಿದರು. ಮೂರನೇ ಬಾರಿಗೂ ಅವರ ಲಗ್ನ- ನಕ್ಷತ್ರ- ರಾಶಿ ಫಲ ಬಲವಾಗಿಯೇ ಇದೆ. ಕುಂದಿಲ್ಲ.

ರಾಮಾಯಣ; ರಾಮನಿಗೆ ಹೆಸರಿಟ್ಟಿದ್ದು ಯಾರು? ಊರ್ಮಿಳೆ ಏಕೆ 14 ವರ್ಷ ನಿದ್ರಿಸಿದಳು?

ವೃಶ್ಚಿಕ ರಾಶಿ- ಅನುರಾಧ ನಕ್ಷತ್ರದವರು ಇದರಿಂದ ಅರ್ಥ ಮಾಡಿಕೊಳ್ಳಬೇಕಾದ್ದೇನು? ನೀವು ಯಾವುದಾದರೂ ಕೆಲಸ ಕೈಗೆತ್ತಿಕೊಳ್ಳಲು ಮನಸ್ಸು ಮಾಡಿದರೆ ಹಿಂದೆಗೆಯಬೇಡಿ. ದೃಢ ನಿರ್ಧಾರದಿಂದ ಮಾಡಿ, ಗ್ರಹ ನಕ್ಷತ್ರಗಳು ನಿಮ್ಮ ಕೈಬಿಡುವುದಿಲ್ಲ. ಇದು ನಿಮ್ಮ ಸಮಯ. ನೀವು ಜಗತ್ತನ್ನೇ ಗೆಲ್ಲಬಲ್ಲಿರಿ. ಭವಿಷ್ಯ ನಿಮ್ಮ ಪರವಾಗಿದೆ.

click me!