ಈ ಅಧಿಕ ಮಾಸದಲ್ಲಿ ಹೀಗೆ ಮಾಡ್ಲೇಬೇಡಿ,,, ಪಾಪ ತಟ್ಟುತ್ತೆ..!

By Suvarna NewsFirst Published Sep 23, 2020, 7:32 PM IST
Highlights

ಅಧಿಕ ಮಾಸದಲ್ಲಿ ಮಾಡಿದ ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಫಲಪ್ರಾಪ್ತಿ ಎಂದು ಶಾಸ್ತ್ರದಲ್ಲಿ  ಉಲ್ಲೇಖಿಸಿದ್ದಾರೆ. ಪುಣ್ಯ ಪಡೆದು ಕೊಳ್ಳುವಂಥ ಉತ್ತಮ ಕಾರ್ಯಗಳನ್ನು ಮಾಡಬೇಕು. ಅಂದರೆ ದಾನ-ಧರ್ಮಗಳನ್ನು, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ  ಮಾಡಬೇಕು. ಭಜನೆ, ವ್ರತ, ಕೀರ್ತನೆ, ವಿಷ್ಣು ಸಹಸ್ರನಾಮ ಪಠಣ ಮಾಡುವುದರ ಮೂಲಕ ದೇವರ ಆರಾಧನೆಯನ್ನು ಮಾಡಬೇಕು. ಹಾಗೆಯೇ ಕೆಲವಷ್ಟು ಕಾರ್ಯಗಳನ್ನು ಅಧಿಕ ಮಾಸದಲ್ಲಿ ಮಾಡಿದರೆ ಮಹಾಪಾಪವೆಂದು ಹೇಳಲಾಗಿದೆ. ಹಾಗಾದರೆ ಅವು ಯಾವುವೆಂದು ತಿಳಿಯೋಣ...

ಪವಿತ್ರವಾದ ಅಧಿಕ ಮಾಸ ಈಗಾಗಲೇ ಪ್ರಾರಂಭವಾಗಿದೆ. ಈ ಮಾಸದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಭಗವಂತನನ್ನು ಆರಾಧಿಸಿ ಪೂಜಿಸಿದರೆ ಸಿಗುವ ಫಲ ಹತ್ತು ಪಟ್ಟು ಹೆಚ್ಚು ಎಂದು ನಂಬಲಾಗಿದೆ. ವಿಷ್ಣುವಿನ ಆರಾಧನೆಗೆ ಶ್ರೇಷ್ಠವಾದ ಅಧಿಕ ಮಾಸಕ್ಕೆ ಪುರುಷೋತ್ತಮ ಮಾಸ ಎಂದು ಸಹ ಕರೆಯುತ್ತಾರೆ.

ಅಧಿಕ ಮಾಸದಲ್ಲಿ ಮಂಗಳ ಕಾರ್ಯಗಳನ್ನು ನಡೆಸುವಂತಿಲ್ಲ, ಆದರೆ ದೇವರ ಪೂಜೆ, ಭಜನೆ, ಕೀರ್ತನೆ, ಪಾರಾಯಣಗಳಿಗೆ ಪ್ರಶಸ್ತವಾದ ಮಾಸ ಇದಾಗಿದೆ. ಶಾಸ್ತ್ರದ ಪ್ರಕಾರ ಅಧಿಕ ಮಾಸದಲ್ಲಿ ಭಗವಂತನ ಧ್ಯಾನ ಮಾಡುವುದು, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಮೋಕ್ಷ ಪಡೆಯುವ ಬಗ್ಗೆ ಚಿಂತನೆ ಮಾಡುವುದು ಉತ್ತಮವೆಂದು ತಿಳಿಸಿದ್ದಾರೆ. ಹಾಗೆಯೇ ಕೆಲವು ಕಾರ್ಯಗಳನ್ನು ಅಧಿಕ ಮಾಸದಲ್ಲಿ ಮಾಡುವುದರಿಂದ ಗಳಿಸಿದ ಪುಣ್ಯ ನಾಶವಾಗಿ, ದೇವತೆಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದರೆ ಅಂತಹ ಕಾರ್ಯಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ..

ಇದನ್ನು ಓದಿ: ಕೇತು ದೋಷದಿಂದ ಮುಕ್ತಿ ಪಡೆಯಲು ಹೀಗ್ ಮಾಡಿ ನೋಡಿ.. 

ವಿವಾಹ, ಉಪನಯನ, ಚೌಲದಂತಹ ಕಾರ್ಯಗಳನ್ನು ಮಾಡುವಂತಿಲ್ಲ
ಶಾಸ್ತ್ರದ ಪ್ರಕಾರ ಅಧಿಕ ಮಾಸದಲ್ಲಿ ದೈನಂದಿನ ಕಾರ್ಯಗಳ ಜೊತೆಗೆ ದೇವರ ಆರಾಧನೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಮಂಗಳ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದು ನಿಷಿದ್ಧವಾಗಿದೆ. ಪ್ರತಿ ಮಾಸದಲ್ಲೂ ಸೂರ್ಯನ ಸಂಕ್ರಮಣ ಪ್ರತ್ಯೇಕ ರಾಶಿಯಲ್ಲಿ ಆಗುತ್ತದೆ, ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣವಿರುವುದಿಲ್ಲ. ಹಾಗಾದಾಗ ಸೂರ್ಯ ಮತ್ತು ಚಂದ್ರನ ವೇಗದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಾತಾವರಣ ಎಂದಿನಂತೆ ಇರುವುದಿಲ್ಲ. ಅತಿವೃಷ್ಟಿ, ಅನಾವೃಷ್ಟಿ, ರೋಗ-ರುಜಿನಗಳ ಬಾಧೆ ಹೆಚ್ಚಾಗುವುದರಿಂದ ಆರೋಗ್ಯದ ಸಮಸ್ಯೆ ಕಾಡುವ ಸಂಭವ ಹೆಚ್ಚಿರುತ್ತದೆ. ಹಾಗಾಗಿ ಪುಣ್ಯ ಕಾರ್ಯಗಳನ್ನು ಮಾತ್ರ ಮಾಡಬೇಕು, ಶುಭ ಕಾರ್ಯಗಳನ್ನು ಮಾಡಬಾರದೆಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ವಿವಾಹ, ಉಪನಯನ, ಚೌಲದಂತಹ (ಗಂಡು ಮಕ್ಕಳ ಕೂದಲು ಮುಡಿ ಕೊಡುವುದು) ಕಾರ್ಯಗಳನ್ನು ಮಾಡುವಂತಿಲ್ಲ. 

ಮಾಂಸ ಮತ್ತು ಮದ್ಯ ಸೇವನೆ ವರ್ಜ್ಯ
ಅಧಿಕ ಮಾಸದಲ್ಲಿ ಮಾಂಸ ಮತ್ತು ಮದ್ಯವನ್ನು ಸೇವಿಸುವುದು ಪಾಪವೆಂದು ಹೇಳಲಾಗಿದೆ. ಜೀವದ ಹತ್ಯೆ ಮಾಡಿ ತಿನ್ನುವವರಿಗೆ ಘೋರ ನರಕ ಪ್ರಾಪ್ತವಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ಹೇಳಿರುವ ಕಾರಣ ಪವಿತ್ರವಾದ ಅಧಿಕಮಾಸದಲ್ಲಿ ಮಾಂಸ ಭಕ್ಷಣೆ ಮಾಡಿದರೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಇದನ್ನು ಓದಿ: ತುಲಾ ರಾಶಿ ಪ್ರವೇಶಿಸುತ್ತಿರುವ ಬುಧ, ಯಾವ ರಾಶಿಯವರಿಗೆ ಯಾವ ಶುಭ ಫಲ..! 

ಹೊಸತನ್ನು ಆರಂಭಿಸುವುದು ನಿಷಿದ್ಧ
ಅಧಿಕ ಮಾಸದಲ್ಲಿ ಆರಂಭಿಸಿದ ವ್ಯಾಪಾರ, ಉದ್ಯೋಗ ಮುಂತಾದವುಗಳಿಗೆ ಸಫಲತೆ ದೊರಕುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಈ ಮಾಸದಲ್ಲಿ ಯಾವುದೇ ಅಂಗಡಿ, ಮಳಿಗೆ, ವ್ಯಾಪಾರಕ್ಕೆ ಸಂಬಂಧಿಸಿದ ವಹಿವಾಟನ್ನು ಆರಂಭಿಸುವುದರಿಂದ ಅಂದುಕೊಂಡ ಫಲ ಸಿಗುವುದಿಲ್ಲ.

ಇವರಿಗೆ ಅಪಮಾನ ಮಾಡಬಾರದು
ಅಧಿಕ ಮಾಸದಲ್ಲಿ ದೇವರ ಆರಾಧನೆ ಮಾಡಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಹಾಗೆಯೇ ಗುರು-ಹಿರಿಯರಿಗೆ, ಪಿತೃ ದೇವತೆಗಳಿಗೆ, ಇಷ್ಟ ದೇವರಿಗೆ, ಅಧಿಪತಿ ಗ್ರಹಗಳಿಗೆ ಮತ್ತು ಸಂನ್ಯಾಸಿಗಳಿಗೆ ಅಪಮಾನ ಮಾಡಿದರೆ ಅದರಿಂದ ಮುಂದೆ ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಎಲ್ಲರಿಗೂ ಗೌರವ ನೀಡುವುದರ ಮೂಲಕ ದೇವರ ಕೃಪೆ ಪಡೆಯುವುದು ಉತ್ತಮ.

ಪೂಜೆ ಮತ್ತು ಆರಾಧನೆ ನಿಲ್ಲಿಸದಿರಿ
ಅಧಿಕ ಮಾಸದಲ್ಲಿ ಮಾಡಿದ ಪೂಜೆಗೆ ಅಧಿಕ ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗಾಗಿ ಒಂದು ದಿನವನ್ನು ಪೂಜೆ ಮಾಡದೆಯೇ, ಪುಣ್ಯ ಪಡೆವ ಕಾಲವನ್ನು ವ್ಯರ್ಥ ಮಾಡಬಾರದು. ಭಗವಂತನ ಆರಾಧನೆ ಹೆಚ್ಚೆಚ್ಚು ಮಾಡಿದರೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸುಲಭವಾಗಿ ಎದುರಿಸುವ ಶಕ್ತಿ ಸಿಗುವುದಲ್ಲದೇ, ಸುಖ-ಶಾಂತಿ ಸಹ ದೊರಕುತ್ತದೆ.


ಮಹಿಳೆಯರು ತಲೆ ಕೂದಲು ಕತ್ತರಿಸಿಕೊಳ್ಳಬಾರದು
ಅಧಿಕ ಮಾಸದಲ್ಲಿ ಮಹಿಳೆಯರು ತಲೆ ಕೂದಲು ಕತ್ತರಿಸಬಾರದೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ದೇವರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. 

ಇದನ್ನು ಓದಿ: ಅಧಿಕ ಮಾಸದಲ್ಲಿ ಈ ಕಾರ್ಯಗಳನ್ನು ಮಾಡಿ, ಅದೃಷ್ಟವಂತರಾಗಿ..! 

ಪಾಪ ಕರ್ಮಕ್ಕೆ ಪ್ರಚೋದನೆ
ಅಧಿಕ ಮಾಸದಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು, ಹಿಂಸೆಗಳಂಥ ಕೆಟ್ಟ ಕೆಲಸಗಳನ್ನು ಮಾಡಲು ದುಷ್ಟ ಗ್ರಹಗಳು ಪ್ರಚೋದಿಸುತ್ತವೆ. ಹಾಗಾಗಿ ಇಂಥ ಸನ್ನಿವೇಶಗಳ ಬಗ್ಗೆ ಎಚ್ಚರಿಕೆಯಿಂದರಬೇಕು. ನಿಮ್ಮ ಕೈಯಿಂದ ಪಾಪಕೃತ್ಯಗಳು ಆಗದಂತೆ ನೋಡಿಕೊಳ್ಳಿ. ಅಧಿಕ ಮಾಸದಲ್ಲಿ ಒಂದೊಮ್ಮೆ ಪಾಪಗಳನ್ನು ಮಾಡಿದ್ದೇ ಆದಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

click me!