ಗುರುವಾರ ಹೀಗೆ ಮಾಡಿ ಜೀವನ-ಉದ್ಯೋಗದಲ್ಲಿ ಯಶಸ್ಸು ಗಳಿಸಿ..!

By Suvarna NewsFirst Published Jun 16, 2021, 6:51 PM IST
Highlights

ವಾರದ ಎಲ್ಲ ದಿನಗಳಿಗೂ ಒಬ್ಬೊಬ್ಬ ಅಧಿಪತಿ ದೇವರುಗಳಿರುತ್ತಾರೆ. ಆ ದಿನಗಳಲ್ಲಿ ದಿನಕ್ಕೆ ಅಧಿಪತಿಯಾದ ದೇವರನ್ನು ಆರಾಧಿಸಿದಲ್ಲಿ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಭಾನುವಾರದಂದು ಆದಿತ್ಯನನ್ನು ಅಂದರೆ ಸೂರ್ಯನಾರಾಯಣ ದೇವರನ್ನು ಪೂಜಿಸಿದರೆ ಶುಭವಾಗುತ್ತದೆ. ಹಾಗೆಯೇ ಗುರುವಾರದಂದು ಗುರು ಬೃಹಸ್ಪತಿಯನ್ನು ಮತ್ತು ವಿಷ್ಣುವನ್ನು ಆರಾಧಿಸಿದರೆ ಯಾವೆಲ್ಲ ಲಾಭಗಳಿವೆ ಎಂಬುದನ್ನು ತಿಳಿಯೋಣ...

ವಾರದ ಪ್ರತಿ ದಿನವೂ ವಿಶೇಷ ದಿನವೇ ಆಗಿರುತ್ತದೆ. ವಾರದ ಎಲ್ಲ ದಿನಗಳು ದೇವರ ಆರಾಧನೆಗೆ ಪ್ರಶಸ್ತವಾಗಿರುತ್ತದೆ. ಅಷ್ಟೇ ಅಲ್ಲದೆ, ಒಂದೊಂದು ದಿನ ಒಂದೊಂದು ದೇವರನ್ನು ಆರಾಧಿಸಿದರೆ ಆ ದೇವರ ಕೃಪೆ ಪ್ರಾಪ್ತವಾಗುವುದಲ್ಲದೆ, ಕಷ್ಟಗಳು ಪರಿಹಾರವಾಗುತ್ತವೆ.

ಬುಧವಾರದ ದಿನ ಗಣಪತಿಯನ್ನು ಭಜಿಸಿ, ಪೂಜಿಸಿದರೆ ಕೆಲಸಗಳು ವಿಘ್ನವಿಲ್ಲದೆ ಪೂರ್ಣಗೊಳ್ಳುತ್ತವೆ. ಶನಿವಾರ ಹನುಮಂತನನ್ನು ಮತ್ತು ಶನಿದೇವರನ್ನು ಆರಾಧಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ವಾರದ ಎಲ್ಲ ದಿನಗಳಿಗೆ ಒಬ್ಬೊಬ್ಬ ದೇವತೆಗಳು ಅಧಿಪತಿಗಳಾಗಿರುತ್ತಾರೆ. ಗುರುವಾರ ಗುರುದೇವನ ಆರಾಧನೆಗೆ ಪ್ರಶಸ್ತವಾದ ದಿನವಾಗಿರುತ್ತದೆ. ಹಾಗಾದರೆ ಗುರುವಾರ ಯಾವ್ಯಾವ ದೇವರನ್ನು ಆರಾಧಿಸಿದರೆ ಉದ್ಯೋಗದಲ್ಲಿ ಯಶಸ್ಸು ಲಭಿಸುತ್ತದೆ ಎಂಬುದನ್ನು ತಿಳಿಯೋಣ...

ಇದನ್ನು ಓದಿ : ಈ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು...! 

ಶ್ರೀ ಮಹಾವಿಷ್ಣುವಿನ ಪೂಜೆ
ಗುರುವಾರವು ಮಹಾವಿಷ್ಣುವನ್ನು ಮತ್ತು ಗುರು ಬೃಹಸ್ಪತಿಯನ್ನು ಆರಾಧಿಸಲು ಅತ್ಯಂತ ಉತ್ತಮವಾದ ದಿನವಾಗಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ವಾರದ ದಿನ ಶ್ರೀ ಮಹಾವಿಷ್ಣುವಿನ ಪೂಜೆ, ಅರ್ಚನೆ ಇತ್ಯಾದಿಗಳನ್ನು ಮಾಡುವುದರಿಂದ ಜೀವನದ ಕಷ್ಟಗಳು ದೂರವಾಗಿ, ಸುಖ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಕೆಲವು ಕಾರ್ಯಗಳನ್ನು ಗುರುವಾರದಂದು ಮಾಡಿದರೆ ಉದ್ಯೋಗ, ವ್ಯಾಪಾರ, ಶಿಕ್ಷಣ ಮತ್ತು ವಿವಾಹ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ಯಶಸ್ಸನ್ನು ಗಳಿಸಬಹುದಾಗಿದೆ. ಹಾಗಾದರೆ ಯಾವ ಕೆಲಸಕ್ಕೆ ಯಾವ ರೀತಿ ಆರಾಧಿಸಬೇಕೆಂದು? ನೋಡೋಣ...



ನೀರಿಗೆ ಅರಿಶಿಣ ಹಾಕಿ ಸ್ನಾನ ಮಾಡಿ
ಗುರುವಾರ ಪ್ರಾತಃಕಾಲದಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿದ ನಂತರ ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣವನ್ನು ಹಾಕಿಕೊಂಡು ಸ್ನಾನವನ್ನು ಮಾಡಬೇಕು. ತದನಂತರ ದೇವಗುರು ಬೃಹಸ್ಪತಿಯನ್ನು ಆರಾಧನೆ ಮಾಡಬೇಕು ಮತ್ತು ಗುರು ಕಥೆಯನ್ನು ಕೇಳಬೇಕು. ಪೂಜಿಸುವಾಗ ತುಪ್ಪದ ದೀಪವನ್ನು ಹಚ್ಚಬೇಕು, ನಂತರ "ಓಂ ಬ್ರೂಮ್ ಬೃಹಸ್ಪತಯೇ ನಮಃ" ಎಂಬ ಮಂತ್ರವನ್ನು ಪೂರ್ಣ ಶ್ರದ್ಧೆ ಮತ್ತು ಭಕ್ತಿಯಿಂದ 11 ಅಥವಾ 21 ಜಪಿಸಬೇಕು.

ಇದನ್ನು ಓದಿ : ಈ ಕನಸುಗಳು ಬಿದ್ದರೆ ದುಡ್ಡು ಬರೋದು ಗ್ಯಾರಂಟಿ..‍! 

ಬಾಳೆ ಗಿಡ ಪೂಜಿಸಿ
ಪ್ರತಿ ಗುರುವಾರ ಬಾಳೆ ಗಿಡವನ್ನು ಪೂಜಿಸಬೇಕು. ಆ ಸಂದರ್ಭದಲ್ಲೇ ಬಾಳೆ ಗಿಡಕ್ಕೆ ನೀರೆರೆದು ಹಳದಿ ಬಣ್ಣದ ಪುಷ್ಪವನ್ನು ಅರ್ಪಿಸಬೇಕು. ಈ ಕ್ರಮವನ್ನು ಹನ್ನೊಂದು ವಾರದಲ್ಲಿ ಬರುವ ಪ್ರತಿ ಗುರುವಾರದಂದು ಅನುಸರಿಸಿ ವ್ರತವನ್ನು ಪೂರ್ಣಗೊಳಿಸಬೇಕು. ಭೋಜನವನ್ನು ಸೇವಿಸುವಾಗ ಹಳದಿ ಬಣ್ಣದ ಪದಾರ್ಥಗಳನ್ನು ಸೇವಿಸಬೇಕು. ಅಷ್ಟೇ ಅಲ್ಲದೆ ಬಾಳೆಹಣ್ಣನ್ನು ದಾನವಾಗಿ ನೀಡಬೇಕು. ಮುಖ್ಯವಾಗಿ ಈ ದಿನ ವ್ರತವನ್ನು ಮಾಡುತ್ತಿರುವವರು ಬಾಳೆಹಣ್ಣನ್ನು ತಿನ್ನುವಂತಿಲ್ಲ.     

ಸಿಹಿ ಪದಾರ್ಥ ನೈವೇದ್ಯ
ಗುರವಾರ ವಿಷ್ಣುವಿನ ದೇವಸ್ಥಾನದಲ್ಲಿ ಸಿಹಿ ಪದಾರ್ಥವನ್ನು ನೈವೇದ್ಯ ಮಾಡಬೇಕು. ಹಣೆಗೆ ಕೇಸರಿ ಅಥವಾ ಚಂದನದ ತಿಲಕವನ್ನು ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಉದ್ಯೋಗ, ಶಿಕ್ಷಣ ವಿವಾಹ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಬರುತ್ತಿರುವ ಅಡೆತಡೆಗಳು ನಿವಾರಣೆ ಆಗುತ್ತವೆ.  

ಹಳದಿ ಮಾಲೆ ಹಾಕಿ
ವ್ಯಾಪಾರದಲ್ಲಿ ನಷ್ಟ ವಾಗುತ್ತಿದೆ ಅಥವಾ ಅಡೆತಡೆಗಳು ಬರುತ್ತಿವೆ ಎಂದಾದರೆ ಗುರುವಾರದ ದಿನ ಪೂಜಾ ಕೋಣೆಯಲ್ಲಿ ಹಳದಿ ಮಾಲೆಯನ್ನು ಹಾಕಬೇಕು. ಅಷ್ಟೇ ಅಲ್ಲದೆ ಲಕ್ಷ್ಮೀನಾರಾಯಣನನ್ನು ಆರಾಧಿಸಬೇಕು.

ಈ ವಾರದಂದು ತಲೆ ಸ್ನಾನ ಬೇಡ
ಮನೆಯಲ್ಲಿರುವ ದಾರಿದ್ರ್ಯವನ್ನು ಓಡಿಸಬೇಕೆಂದರೆ ಗುರುವಾರದಂದು ಮನೆಯ ಸದಸ್ಯರು ತಲೆ ಸ್ನಾನವನ್ನು ಮಾಡಬಾರದು. ಅಷ್ಟೇ ಅಲ್ಲದೆ ಉಗುರು ಮತ್ತು ಕೂದಲನ್ನು ಕತ್ತರಿಸುವುದು ಸೇರಿದಂತೆ ಮುಂತಾದ ಕೆಲವು ಕಾರ್ಯಗಳನ್ನು ಮಾಡಬಾರದು.

ಇದನ್ನು ಓದಿ : ಪ್ರೀತಿ ಮತ್ತು ಸ್ನೇಹದಲ್ಲಿ ಈ 4 ರಾಶಿಯವರಿಗೆ ಹೆಚ್ಚು ಮೋಸವಂತೆ...!  

ಹೀಗೆ ಮಾಡಿದರೆ ಶುಭ ಫಲ
ಪ್ರೊಮೋಶನ್ ಅಥವಾ ಹೊಸ ಉದ್ಯೋಗಕ್ಕಾಗಿ ಅರಸುತ್ತಿರುವವರು ಅಥವಾ ಕಾರ್ಯ ಸ್ಥಳದಲ್ಲಿ ಸಮಸ್ಯೆ ಎದುರಿಸುತ್ತಿರುವವರು ಆಹಾರ, ಹಣ್ಣುಗಳು ಮತ್ತು ವಸ್ತ್ರಗಳನ್ನು ದಾನವಾಗಿ ನೀಡಬೇಕು. ಗುರುವಾರದಂದು ಹೀಗೆ ಮಾಡಿದರೆ ಶುಭ ಫಲ ಪ್ರಾಪ್ತವಾಗುತ್ತದೆ. 

ಗೋಧಿ/ಬೆಲ್ಲ ದಾನ ಮಾಡಿ
ಜೀವನದಲ್ಲಿ ಯಶಸ್ಸು ಸಿಗಬೇಕೆಂದರೆ ಗುರುವಾರದಂದು 800 ಗ್ರಾಂ ಗೋಧಿಯನ್ನು ಮತ್ತು ಅದೇ ಪ್ರಮಾಣದ ಬೆಲ್ಲವನ್ನು ಯಾವುದಾದರೂ ದೇವಸ್ಥಾನಕ್ಕೆ ದಾನವಾಗಿ ನೀಡಬೇಕು. ಹೀಗೆ ಮಾಡುವುದರಿಂದ ಗುರು ಬೃಹಸ್ಪತಿಯ ಕೃಪೆ ಪ್ರಾಪ್ತವಾಗುತ್ತದೆ. ಮನೆಯನ್ನು ನಿರ್ಮಿಸಬೇಕೆಂದು ಕೊಂಡಿದ್ದರೆ, ಜ್ಯೋತಿಷ್ಯದ ಪ್ರಕಾರ ಪ್ರತಿ ಗುರುವಾರ ಅಗತ್ಯವಿರುವವರಿಗೆ ಬೆಲ್ಲವನ್ನು ದಾನವಾಗಿ ನೀಡಿದರೆ ಇಷ್ಟಾರ್ಥಗಳು ಶೀಘ್ರವಾಗಿ ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ.

click me!