ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ…

By Suvarna NewsFirst Published Sep 21, 2021, 1:14 PM IST
Highlights

ಪಿತೃಪಕ್ಷವು ಸೆಪ್ಟೆಂಬರ್ 20ರಿಂದ ಆರಂಭವಾಗಿದ್ದು, ಅಕ್ಟೋಬರ್ 6ರವರೆಗೆ ಇರಲಿದೆ. ಅಂದರೆ, ಭಾದ್ರಪದ ಮಾಸದ ಪೌರ್ಣಿಮೆಗೆ ಪ್ರಾರಂಭವಾಗಿ ಆಶ್ವಯುಜ ಮಾಸದ ಅಮಾವಾಸ್ಯೆಗೆ ಪಿತೃಪಕ್ಷ ಮುಗಿಯಲಿದೆ. ಈ 16 ದಿನದಲ್ಲಿ ಏನೆಲ್ಲ ಮಾಡಬೇಕು.. ಮಾಡಬಾರದು ಎಂಬ ಬಗ್ಗೆ ನೋಡೋಣ ಬನ್ನಿ…

ಹಿಂದೂ ಧರ್ಮದಲ್ಲಿ ಅನೇಕ ಸಂಪ್ರದಾಯ ಮತ್ತು ಆಚರಣೆಗಳಿವೆ. ಹುಟ್ಟಿದಾರಭ್ಯ ಮರಣಾ ನಂತರವೂ ಮಾಡ ಬೇಕಾದಂತಹ  ಅನೇಕ ಸಂಸ್ಕಾರಗಳನ್ನು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. 

ಪಿತೃಪಕ್ಷದಲ್ಲಿ ನಮ್ಮ ಪೂರ್ವಜರಿಗೆ ಜಲ ತರ್ಪಣ ನೀಡುವ ಮೂಲಕ ಅವರನ್ನು ಸಂತುಷ್ಟಿಗೊಳಿಸುವುದಾಗಿದೆ. ಪೂರ್ವಜರು ಮೃತ್ಯು ಹೊಂದಿದ ತಿಥಿಯಲ್ಲಿ ಅವರ ಶ್ರಾದ್ಧವನ್ನು ನೇರವೇರಿಸುವುದು ಸಹ ಒಂದು ಮಹತ್ವದ ಕಾರ್ಯವಾಗಿರುತ್ತದೆ. ತಂದೆ-ತಾಯಿ ಅಥವಾ ಪರಿವಾರದ ಇತರ ಸದಸ್ಯರು ಮೃತ್ಯು ಹೊಂದಿದ್ದಲ್ಲಿ ಅವರ ತೃಪ್ತಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. “ಶ್ರದ್ಧಯಾ ಇದಂ ಶ್ರಾದ್ಧಮ್” ಅಂದರೆ ಶ್ರದ್ಧೆಯಿಂದ ಮಾಡುವ ಕಾರ್ಯವೇ ಶ್ರಾದ್ಧವೆಂದು ಕರೆಸಿಕೊಳ್ಳುತ್ತದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರು ಮಿತವ್ಯಯಿಗಳು..

ಭಾದ್ರಪದ ಮಾಸದ ಪೌರ್ಣಿಮೆಗೆ ಪ್ರಾರಂಭವಾಗಿ ಆಶ್ವಯುಜ ಮಾಸದ ಅಮಾವಾಸ್ಯೆಗೆ ಪಿತೃಪಕ್ಷ ಮುಗಿಯಲಿದೆ. ಈ 16 ದಿನದಲ್ಲಿ ಅನೇಕ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪಿತೃಗಳ ಆತ್ಮಕ್ಕೆ ಶಾಂತಿ ಸಿಗಲಿದೆ. ಈ ವರ್ಷ ಪಿತೃಪಕ್ಷವು ಸೆಪ್ಟೆಂಬರ್ 20ರಿಂದ ಅಕ್ಟೋಬರ್ 6ರವರೆಗೆ ಇರಲಿದೆ. ಈ ಅವಧಿಯಲ್ಲಿ ಹಿಂದುಗಳು ಪೂರ್ವಜರ ಆತ್ಮಶಾಂತಿಗೋಸ್ಕರ ತರ್ಪಣ, ಪಿಂಡಪ್ರದಾನ ಮತ್ತು ಶ್ರಾದ್ಧಗಳಂತಹ ಆಚರಣೆಗಳನ್ನು ನೆರವೇರಿಸುತ್ತಾ, ಪಿತೃಪಕ್ಷದಲ್ಲಿ ಈ ಕಾರ್ಯಗಳನ್ನು ಮಾಡುವುದರಿಂದ ಪೂರ್ವಜರು ಸಂತೃಪ್ತರಾಗಿ ಅವರ ಆಶೀರ್ವಾದವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ ಯಶಸ್ಸು, ಸಂತೋಷ ಹಾಗೂ ಸಮೃದ್ಧಿಯನ್ನೂ ಪಡೆಯಬಹುದಾಗಿದೆ.


ಅನೇಕ ಶಾಸ್ತ್ರಗಳ ಪ್ರಕಾರ ಪಿತೃಪಕ್ಷದಲ್ಲಿ ಈ ತಪ್ಪುಗಳನ್ನು ಮಾಡಬಾರದಾಗಿದ್ದು, ಅಪ್ಪಿತಪ್ಪಿಯೂ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಹಿಂದು ಧರ್ಮಗ್ರಂಥಗಳ ಪ್ರಕಾರ ಪಿತೃಪಕ್ಷದ ಸಂದರ್ಭದಲ್ಲಿ ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ…

ಇದನ್ನು ಓದಿ: ಈ ನಾಲ್ಕು ರಾಶಿಯವರು ಬುದ್ಧಿವಂತರು ಜೊತೆಗೆ ಚತುರರು ಆಗಿರುತ್ತಾರಂತೆ

ಮಾಂಸಾಹಾರ ನಿಷಿದ್ಧ
ಪಿತೃಪಕ್ಷದ ಸಂದರ್ಭದಲ್ಲಿ ಸಂಪೂರ್ಣ ಸಸ್ಯಹಾರಿಗಳಾಗಿರಬೇಕು. ಯಾವುದೇ ಕಾರಣಕ್ಕೂ ಮಾಂಸಾಹರವನ್ನು ಸೇವನೆ ಮಾಡುವಂತಿಲ್ಲ. ಈ `16 ದಿನದಲ್ಲಿ ಮಾಂಸಾಹಾರ ಅಥವಾ ಮದ್ಯ ಸೇವನೆಯನ್ನು ಮಾಡಿದ್ದೇ ಆದಲ್ಲಿ ಪೂರ್ವಜರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಅಲ್ಲದೆ, ಇದರಿಂದ ಹೀಗೆ ಮಾಡಿದವರಿಗೆ ಸಮಸ್ಯೆಗಳು ಸಹ ಉಂಟಾಗುತ್ತವೆ. ಅದೇ ಕಾರಣಕ್ಕಾಗಿಯೇ ಸಸ್ಯಾಹಾರವನ್ನು ಇಂತಹ ಸಂದರ್ಭದಲ್ಲಿ ಸೇವನೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

ಕೂದಲು ಕತ್ತರಿಸುವಂತಿಲ್ಲ
ಮನೆಯಲ್ಲಿ ಶ್ರಾದ್ಧ ಮಾಡುವ ವ್ಯಕ್ತಿಯು ಪಿತೃಪಕ್ಷದ 16 ದಿನಗಳ ಕಾಲ ಕೂದಲುಗಳನ್ನು ಕತ್ತರಿಸುವುದು ಹಾಗೂ ಉಗುರು ತೆಗೆಯುವುದನ್ನು ಮಾಡುವಂತಿಲ್ಲ. ಇಷ್ಟೇ ಅಲ್ಲದೆ, ಕಟ್ಟುನಿಟ್ಟಾಗಿ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ. 

ಸೂರ್ಯಾಸ್ತದ ಬಳಿಕ ಆಚರಣೆ ಬೇಡ
ಸೂರ್ಯಾಸ್ತದ ಒಳಗೆ ಶ್ರಾದ್ಧ ಕಾರ್ಯಾದಿಗಳನ್ನು ಪೂರೈಸಬೇಕು. ಸೂರ್ಯಾಸ್ತದ ಬಳಿಕ ಶ್ರಾದ್ಧ ನೆರವೇರಿಸಿದರೆ ಅದು ಅಶುಭ ಎಂದು ಹೇಳಲಾಗಿದೆ. 

ಪ್ರಾಣಿಗಳಿಗೆ ಆಹಾರ ನೀಡಿ
ಪಿತೃಪಕ್ಷದ ಸಂದರ್ಭದಲ್ಲಿ ನಿಮ್ಮ ಮನೆ ಬಾಗಿಲಿಗೆ ಪ್ರಾಣಿ-ಪಕ್ಷಿಗಳು ಬಂದರೆ ಅವುಗಳಿಗೆ ಏನೂ ಆಹಾರ ನೀಡದೆ ಕಳುಹಿಸಬೇಡಿ. ಪೂರ್ವಜರು ಅವುಗಳ ರೂಪದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂಬ ನಂಬಿಕೆ ಇದೆ. ಪಿತೃಪಕ್ಷದ ಈ ಸಂದರ್ಭದಲ್ಲಿ ಗೋವುಗಳಿಗೆ ಹಾಗೂ ಕಾಗೆಗಳಿಗೆ ಆಹಾರವನ್ನು ನೀಡಬೇಕು. 

ಬಾಳೆ ಎಲೆ ಊಟ
ಈ ಪಿತೃಪಕ್ಷದಲ್ಲಿ ಬಾಳೆ ಎಲೆಯಲ್ಲಿ ಭೋಜನ ಮಾಡುವುದು ಶುಭ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಬ್ರಾಹ್ಮರಣನ್ನು ಕರೆಸಿ ಅವರಿಗೆ ಬಾಳೆ ಎಲೆಯ ಊಟದ ವ್ಯವಸ್ಥೆಯನ್ನು ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಹೀಗಾಗಿ ಸಾಧ್ಯವಾದರೆ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಉತ್ತಮ ಎನ್ನಲಾಗಿದೆ.   

ಇದನ್ನು ಓದಿ: ಆಶ್ಲೇಷಾ, ಮಘಾ, ಪೂರ್ವ ಮತ್ತು ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಜನಿಸಿದವರ ಗುಣವಿದು!

ಶುಭ ಸಮಾರಂಭಗಳು ಬೇಡ
ಮದುವೆ-ನಿಶ್ಚಿತಾರ್ಥದಂತಹ ಶುಭ ಕಾರ್ಯಗಳನ್ನು ಈ ಅವಧಿಯಲ್ಲಿ ಮಾಡುವುದಿಲ್ಲ. ಕಾರಣ, ಹೊಸ ಜೀವನಕ್ಕೆ ಕಾಲಿಡುತ್ತಿರುವ ಘಳಿಗೆಗೆ ಇದು ಒಳ್ಳೆಯ ಮುಹೂರ್ತವಲ್ಲ ಎಂದು ಹೇಳಲಾಗುತ್ತದೆ. ಹೊಸ ವಸ್ತುಗಳನ್ನು ಸಹ ಪಿತೃಪಕ್ಷದಲ್ಲಿ ಕೊಂಡುಕೊಳ್ಳುವ ಮನಸ್ಥಿತಿಯನ್ನು ಹೊಂದಬೇಡಿ. ಇಂತಹ ಸಂದರ್ಭದಲ್ಲಿ ಹೊಸ ವಸ್ತುಗಳನ್ನು ಕೊಳ್ಳದಿರುವುದೇ ಒಳಿತು ಎಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ.
 

click me!