ತಿಂಗಳಲ್ಲಿ ಐದೇ ದಿನ ಈರುಳ್ಳಿ- ಬೆಳ್ಳುಳ್ಳಿ ದೂರವಿಡಿ, ಲಕ್ಷ್ಮೀ ಆಶೀರ್ವಾದ ಸದಾ ನಿಮ್ಮ ಮೇಲೆ!

By Suvarna NewsFirst Published Jan 12, 2023, 3:23 PM IST
Highlights

ಹಿಂದೂ ಧರ್ಮದಲ್ಲಿ ಹಬ್ಬಹರಿದಿನಗಳಂದು, ವ್ರತವಿರುವಾಗ, ವಿಶೇಷ ದಿನಗಳಲ್ಲಿ ತಾಮಸಿಕ ಆಹಾರ ನಿಷಿದ್ಧವಾಗಿದೆ. ಇಂಥ ದಿನಗಳಲ್ಲಿ ಮಾಂಸಾಹಾರವಷ್ಟೇ ಅಲ್ಲದೆ ಈರುಳ್ಳಿ, ಬೆಳ್ಳುಳ್ಳಿ ಸೇವನೆ ಕೂಡಾ ಮಾಡಬಾರದು. ಅಂದ ಹಾಗೆ, ನೀವು ತಿಂಗಳಲ್ಲಿ ಕೇವಲ 5 ದಿನಗಳ ಕಾಲ ಈರುಳ್ಳಿ ಬೆಳ್ಳುಳ್ಳಿ ತ್ಯಜಿಸಿದರೆ ಸಾಕು, ತಾಯಿ ಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. 

ಧಾರ್ಮಿಕ ನಂಬಿಕೆಗಳ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸಿಕ ಆಹಾರವೆಂದು ಪರಿಗಣಿಸಲಾಗುತ್ತದೆ. ಪೂಜೆ-ಪುನಸ್ಕಾರ ಅಥವಾ ಉಪವಾಸ-ವ್ರತ ಇದ್ದರೆ, ಆ ದಿನಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದನ್ನು ಧಾರ್ಮಿಕವಾಗಿ ನಿಷೇಧಿಸಲಾಗಿದೆ. ತಿಂಗಳ ಐದು ದಿನಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಬಾರದು ಎಂದು ಶಾಸ್ತ್ರಗಳು ಸಲಹೆ ನೀಡುತ್ತವೆ. ಆಗ ಮಾತ್ರ ಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ.

ಈರುಳ್ಳಿ ಬೆಳ್ಳುಳ್ಳಿಯನ್ನು ಯಾವಾಗ ತಿನ್ನಬಾರದು?
ಹಿಂದೂ ಧರ್ಮದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು(Onion and garlic) ವಿಶೇಷ ದಿನಗಳಲ್ಲಿ ತಿನ್ನಬಾರದು ಎಂದು ಸಲಹೆ ನೀಡಲಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಹೊಂದಿರುವ ಆಹಾರಗಳನ್ನು ಸಾಮಾನ್ಯವಾಗಿ ಮಾಂಸಾಹಾರಕ್ಕೆ ಸಮ ಎಂದು ಪರಿಗಣಿಸಲಾಗುತ್ತದೆ. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಯಾವಾಗ ತಿನ್ನಬೇಕು ಮತ್ತು ಯಾವಾಗ ತಿನ್ನಬಾರದು ಎಂಬ ಬಗ್ಗೆ ಹೆಚ್ಚಿನವರಲ್ಲಿ ಗೊಂದಲವಿರುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿಂಗಳ ಐದು ದಿನಗಳಲ್ಲಿ ಮಾತ್ರ ತಪ್ಪಿಸಿದರೆ ಸಾಕು. ಶಾಸ್ತ್ರಗಳ ಪ್ರಕಾರ ಈ ಐದು ದಿನ ಈರುಳ್ಳಿ, ಬೆಳ್ಳುಳ್ಳಿ ತಿನ್ನದೇ ಇದ್ದರೆ ಲಕ್ಷ್ಮಿಯ ಕೃಪೆ(Ma Lakshmi Blessings) ನಿಮ್ಮದಾಗುವುದು. ಈ ಐದು ದಿನಗಳು ಯಾವೆಲ್ಲ ನೋಡೋಣ.

ಅಮಾವಾಸ್ಯೆ(New Moon Day)
ಅಮಾವಾಸ್ಯೆಯ ತಿಥಿಯು ನಮ್ಮನ್ನು ಅಗಲಿದ ಪೂರ್ವಜರಿಗೆ ಸಂಬಂಧಿಸಿದೆ. ಅವರನ್ನು ಸಮಾಧಾನಪಡಿಸಲು, ಈ ದಿನ ದಾನ ಮತ್ತು ಸ್ನಾನ ಮಾಡಲು ಹೇಳಲಾಗುತ್ತದೆ. ಇದಲ್ಲದೇ ಅಮಾವಾಸ್ಯೆಯಂದು ಶ್ರಾದ್ಧಕರ್ಮ, ಪಿಂಡಗಳನ್ನು ಇಡುವುದು ಶ್ರೇಯಸ್ಕರ. ಹಾಗಾಗಿ ಅಮಾವಾಸ್ಯೆಯಂದು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಬಾರದು. ಪರಿಣಾಮವಾಗಿ, ನೀವು ಅಗಲಿದ ಪೂರ್ವಜರ ಆಶೀರ್ವಾದವನ್ನು ಪಡೆಯುತ್ತೀರಿ. ಈ ದಿನ ಸಾಸಿವೆ ಎಣ್ಣೆಯ ದೀಪವನ್ನು ದಕ್ಷಿಣ ದಿಕ್ಕಿಗೆ ಹಚ್ಚಿ.

ರಾಶಿಗನುಗುಣವಾಗಿ ಪೂಜಿಸಿದರೆ ಪೂರ್ಣ ಫಲ, ನಿಮ್ಮ ರಾಶಿಗೆ ನೀವು ಯಾವ ದೇವರನ್ನು ಪೂಜಿಸಬೇಕು?

ಪೂರ್ಣಿಮಾ(Full Moon Day)
ಚಂದ್ರನು ಪೌರ್ಣಮಿಯಂದು ಪೂರ್ಣವಾಗಿ ಪ್ರಕಟವಾಗುತ್ತಾನೆ. ಹಿಂದೂ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಚಂದ್ರದೇವನು ಲಕ್ಷ್ಮಿ ದೇವಿಯ ಸಹೋದರ. ಅದಕ್ಕಾಗಿಯೇ ಯಾವುದೇ ಹುಣ್ಣಿಮೆಯ ದಿನದಂದು ಲಕ್ಷ್ಮಿ ಪೂಜೆಯನ್ನು ಮಾಡಬಹುದು. ನೀವು ಸಾತ್ವಿಕ ಆಹಾರವನ್ನು ಸೇವಿಸಿದರೆ ಮತ್ತು ಪೂರ್ಣಿಮೆಯ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತ್ಯಜಿಸಿದರೆ, ನೀವು ಮಾ ಲಕ್ಷ್ಮಿಯ ಅನುಗ್ರಹವನ್ನು ಪಡೆಯಬಹುದು.

ಏಕಾದಶಿ(Ekadashi)
ಏಕಾದಶಿ ತಿಥಿಯು ನಾರಾಯಣನಿಗೆ ಸಮರ್ಪಿತವಾಗಿದೆ. ಈ ದಿನ ಅನೇಕರು ಉಪವಾಸ ಮಾಡುತ್ತಾರೆ. ಸಂಪೂರ್ಣ ಉಪವಾಸ ಮಾಡಲು ಸಾಧ್ಯವಾಗದಿದ್ದರೂ ಏಕಾದಶಿಯಂದು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನದಿರುವುದು ಉತ್ತಮ. ಈ ದಿನ ತಾಮಸಿಕ ಆಹಾರವನ್ನು ಸೇವಿಸಬೇಡಿ. ಆಗ ನಾರಾಯಣನು ತೃಪ್ತನಾಗುತ್ತಾನೆ. ನಾರಾಯಣ ಪ್ರಸನ್ನನಾಗಿದ್ದರೆ ಪತ್ನಿ ಲಕ್ಷ್ಮೀದೇವಿಯು ನಿಮ್ಮ ಬಗ್ಗೆ ಪ್ರಸನ್ನಳಾಗುತ್ತಾಳೆ.

ಗಣೇಶ ಚತುರ್ಥಿ(Ganesh Chaturti)
ಗಣೇಶ ಚತುರ್ಥಿಯನ್ನು ಪ್ರತಿ ತಿಂಗಳು ಎರಡು ಬಾರಿ ಆಚರಿಸಲಾಗುತ್ತದೆ. ಈ ದಿನ ಸಿದ್ಧಿದಾತನನ್ನು ಪೂಜಿಸುವುದು ವಾಡಿಕೆ. ಗಣೇಶ ಚತುರ್ಥಿಯಂದು ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನಬೇಡಿ.

Shani Ast 2023: ಮೂರು ರಾಶಿಗಳಿಗೆ ಶನಿ ಅಸ್ತದಿಂದ ಬದುಕೇ ಅಸ್ತವ್ಯಸ್ತ

ಪ್ರದೋಷ ವ್ರತ(Pradosh vrat)
ಪ್ರದೋಷ ವ್ರತವನ್ನು ಪ್ರತಿ ತಿಂಗಳ ತ್ರಯೋದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ದಿನ ಮಹಾದೇವನನ್ನು ಪೂಜಿಸಲಾಗುತ್ತದೆ. ಅನೇಕ ಜನರು ಈ ದಿನ ಉಪವಾಸ ಮಾಡುತ್ತಾರೆ ಮತ್ತು ಶಿವಪೂಜೆ ಮಾಡುತ್ತಾರೆ. ಆದರೆ ಪೂರ್ತಿ ಉಪವಾಸ ಇರಲು ಸಾಧ್ಯವಾಗದಿದ್ದರೆ ಈ ದಿನ ಈರುಳ್ಳಿ, ಬೆಳ್ಳುಳ್ಳಿಯನ್ನಾದರೂ ತಿನ್ನಬೇಡಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!