Chanakya Niti : ಸಾವಿಗಿಂತ ಹೆಚ್ಚು ನೋವು ಕೊಡುತ್ತೆ ಮನುಷ್ಯನ ಈ ಸ್ಥಿತಿ!

By Suvarna NewsFirst Published Feb 17, 2023, 3:01 PM IST
Highlights

ಸಾವಿಗೆ ಭಯಪಡದವರಿಲ್ಲ. ಹಾಗಂತ ಸತ್ತ ಮೇಲೆ ನಮಗೆ ಈ ಪ್ರಪಂಚದ ಅರಿವಿರೋದಿಲ್ಲ. ಮನುಷ್ಯನಿಗೆ ಸಾವು ಮುಖ್ಯವಲ್ಲ. ಹೇಗೆ ಬದುಕಿದ್ದ ಎನ್ನುವುದು ಮುಖ್ಯ. ಜೀವಂತವಿದ್ದು ಸತ್ತಂತೆ ಜೀವನ ನಡೆಸ್ತಿದ್ದರೆ ಪ್ರಯೋಜನವಿಲ್ಲ. 
 

ಸರಸವೇ ಜನನ ವಿರಸವೇ ಮರಣ ಎಂಬ ಕವಿವಾಣಿಯಂತೆ ದ್ವೇಷ, ಅಸೂಯೆ, ಕೋಪಗಳು ನಮ್ಮನ್ನು ಬಹುಬೇಗ ಬಲಿ ಪಡೆಯುತ್ತವೆ. ಪ್ರೀತಿ, ವಾತ್ಸಲ್ಯ, ಹೊಂದಾಣಿಕೆಯ ಮನೋಭಾವ ನಮ್ಮ ಆಯಸ್ಸನ್ನು ವೃದ್ಧಿಪಡಿಸುತ್ತದೆ. ಮನುಷ್ಯನ ಜೀವನ ಆಸೆ ನಿರಾಸೆಗಳಿಂದ ಕೂಡಿದೆ. ಸಂಸಾರದಲ್ಲಿನ ತನು, ಮನ, ಧನ, ಬುದ್ಧಿ, ಆಧ್ಯಾತ್ಮ ಎಂಬ ಈ ಐದು ಅಂಶಗಳು ಮನುಷ್ಯನಿಗೆ ಕಾಲಕ್ಕೆ ತಕ್ಕಂತೆ ಸುಖ ದುಃಖ ಎರಡನ್ನೂ ನೀಡುತ್ತವೆ. ನಾವು ಯಾವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಸುಖ, ದುಃಖಗಳೂ ನಿಂತಿವೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಸುಖದ ಜೀವನವೇ ಯಶಸ್ಸಿನ ಮೊದಲ ಮೆಟ್ಟಿಲು. ಹಾಗಿರುವಾಗ ಹತಾಶೆಯ ಸುಳಿಗೆ ಸಿಕ್ಕು ಜೀವನಪರ್ಯಂತ ಚಿಂತೆಯಲ್ಲಿದ್ದರೆ ಜೀವನ ಹಾಗೆಯೇ ಮುಗಿದು ಹೋಗುತ್ತದೆ. 

ಜೀವನ (Life) ಅಂದ ಮೇಲೆ ಕಷ್ಟ, ಸುಖ ಎರಡೂ ಇರುತ್ತವೆ. ಎಲ್ಲ ಸಂದರ್ಭದಲ್ಲಿಯೂ ನಾವು ತಿಳುವಳಿಕೆಯಿಂದ ವರ್ತಿಸಿದರೆ ನಮಗೆ ಮಾತ್ರವಲ್ಲ ನಮ್ಮ ಸುತ್ತ ಇರುವವರಿಗೂ ಅದು ಪ್ರೇರಣೆ ನೀಡುತ್ತದೆ. ನಾವು ಬೇರೆಯವರ ಮನಸ್ಸನ್ನು ನೋಯಿಸದೇ, ಇತರರನ್ನು ನಿಂದಿಸದೇ, ಅವಮಾನ (Shame) ಮಾಡದೇ ಬದುಕಿದಾಗ ಮಾತ್ರ ನಮ್ಮ ಜೀವನ ಸಾರ್ಥಕವೆನಿಸುತ್ತದೆ. ಅವಮಾನದ ಕುರಿತು ಚಾಣಕ್ಯ (Chanakya) ರು ಹೀಗೆ ಹೇಳುತ್ತಾರೆ..

Latest Videos

ವರಂ ಪ್ರಾಣಪರಿತ್ಯಾಗೋ ಮಾನಭಂಗೇನ ಜೀವಿತಮ್|
ಪ್ರಾಣತ್ಯಾಗೇ ಕ್ಷಣಂ ದುಃಖಂ ಮಾನಭಂಗೇ ದಿನೇ ದಿನೇ|

ಜೀವನದಲ್ಲಿ ಒಬ್ಬ ವ್ಯಕ್ತಿ ಕಷ್ಟಕ್ಕಿಂತ ಹೆಚ್ಚು ಅವಮಾನಗಳಿಂದ ಕುಗ್ಗುತ್ತಾನೆ. ಅಪಮಾನ ಎಂಬುದು ಸಾವಿಗಿಂತಲೂ ಹೆಚ್ಚು. ಸಾವಿನಲ್ಲಿ ಮನುಷ್ಯ ಒಮ್ಮೆಲೇ ಪ್ರಾಣಬಿಡುತ್ತಾನೆ. ಆದರೆ ಅವಮಾನವು ವ್ಯಕ್ತಿಯನ್ನು ಹಂತ ಹಂತವಾಗಿ ಸಾಯಿಸುತ್ತದೆ. ಬಲಹೀನನನ್ನಾಗಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. 

ಇದೇ ಮೊದಲ ಬಾರಿ ಶಿವರಾತ್ರಿ ಉಪವಾಸ ಮಾಡ್ತಿದ್ದರೆ ಇವೆಲ್ಲ ಗೊತ್ತಿರಲಿ

ಕೆಲವರ ಜೀವನವೇ ಹಾಗೆ. ಅವರು ಮಾಡಿರದ ತಪ್ಪಿಗೆ ಅವರು ಶಿಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ನಾಲ್ಕು ಜನರ ಮಧ್ಯೆ ಅವಮಾನ, ನಿಂದನೆಗಳನ್ನು ಕೇಳಬೇಕಾಗುತ್ತದೆ. ದಿನೇ ದಿನೇ ಎಷ್ಟೋ ದುಃಖಗಳನ್ನು ನುಂಗಬೇಕಾಗುತ್ತದೆ. ಎಲ್ಲರೆದುರು ಪದೇ ಪದೇ ಅವಮಾನಕ್ಕೀಡಾದಾಗ ಸಮಾಜದಲ್ಲಿ ಅವರ ಬಗ್ಗೆ ಕೀಳರಿಮೆ ಬೆಳೆಯುತ್ತದೆ. ಜನರು ಅವರನ್ನು ದೂರವಿಡಲು ಆರಂಭಿಸುತ್ತಾರೆ. ಅವಮಾನಿತಗೊಂಡ ವ್ಯಕ್ತಿ ತನ್ನ ವ್ಯಕ್ತಿತ್ವ, ಆತ್ಮಗೌರವದ ಜೊತೆಗೇ ರಾಜಿ ಮಾಡಿಕೊಂಡು ಬದುಕುವ ಸಂದರ್ಭ ಎದುರಾಗುತ್ತದೆ.

ಅವಮಾನಕ್ಕೆ ನಿಮ್ಮ ಉತ್ತರ ಹೀಗಿರಲಿ : ಇನ್ನೊಬ್ಬರಿಗೆ ಅವಮಾನ ಮಾಡಲೆಂದೇ, ಹೀಯಾಳಿಸಲೆಂದೇ ಕೆಲವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಂತವರು ನೀವು ಹೇಗಿದ್ದರೂ, ಏನೇ ಮಾತನಾಡಿದರೂ ಅದಕ್ಕೆ ವಿರುದ್ಧವಾಗಿ ಧ್ವನಿ ಎತ್ತುತ್ತಾರೆ. ಏಕೆಂದರೆ ಅವರ ಸ್ವಭಾವವೇ ಇನ್ನೊಬ್ಬರನ್ನು ನಿಂದಿಸುವುದಾಗಿರುತ್ತದೆ. ಅವರು ನಿಮ್ಮ ಬಗ್ಗೆ ಕೆಟ್ಟ ಮಾತುಗಳನ್ನಾಡುತ್ತಾರೆ, ನಿಮ್ಮನ್ನು ಸಮಾಜದಲ್ಲಿ ಹೀಗಳೆಯುತ್ತಾರೆಂದು ನೀವು ಅವರನ್ನೇ ಹಿಂಬಾಲಿಸಬೇಡಿ. ಏಕೆಂದರೆ ನೀವು ಏನೇ ಮಾತನಾಡಿದರೂ ಅದಕ್ಕೆ ಪ್ರತ್ಯುತ್ತರ ಕೊಡಲು, ಮತ್ತೆ ನಿಮ್ಮ ಮೇಲೆ ಆಪಾದನೆ ಹೊರಿಸಲು ಅವರು ಕಾದು ಕುಳಿತಿರುತ್ತಾರೆ. ಆಗ ಮಾತಿಗೆ ಮಾತು ಬೆಳೆದು ಸಮಾಜದಲ್ಲಿ ನಿಮಗಿರುವ ಗೌರವಕ್ಕೂ ಚ್ಯುತಿ ಬರುವಂತಾಗುತ್ತದೆ. ಹಾಗಾಗಿ ಅಂತವರ ಬಗ್ಗೆ ತಲೆ ಕೆಡಿಸಿಕೊಂಡು ನೀವು ನಿಮ್ಮ ಜೀವನವನ್ನು ಹಾಳುಮಾಡಿಕೊಳ್ಳಬಾರದು.

Mahashivratri 2023: ಶಿವ ಮುಕ್ಕಣ್ಣನಾದುದು ಹೇಗೆ? ಮೂರನೇ ಕಣ್ಣಲ್ಲಿದೆ ಜ್ಞಾನದ ಶಕ್ತಿ

ಹಾಗಂತ ಎಲ್ಲ ಕಡೆಗಳಲ್ಲೂ ಅವಮಾನವನ್ನು ಸಹಿಸಿಕೊಳ್ಳಬೇಕು ಎಂದಲ್ಲ. ಒಬ್ಬ ವ್ಯಕ್ತಿ ಒಮ್ಮೆ ಅವಮಾನ ಮಾಡಿದಾಗ ಅದನ್ನು ಸಹಿಸಿಕೊಳ್ಳುವುದು ಬುದ್ಧಿವಂತಿಕೆ. ಎರಡನೇ ಬಾರಿ ಅವಮಾನ ಮಾಡಿದಾಗ ಸಹಿಸಿಕೊಂಡರೆ ಅದು ಆ ವ್ಯಕ್ತಿಯ ದೊಡ್ಡತನವನ್ನು ತೋರಿಸುತ್ತದೆ. ಅದೇ ಮೂರನೇ ಬಾರಿಯೂ ಆತ ಅವಮಾನ ಸಹಿಸಿಕೊಂಡರೆ ಅದು ಆತನ ಮೂರ್ಖತನವನ್ನು ತೋರಿಸುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಅವಮಾನ ಮಾಡಿದವರಿಗೆ ನೀವು ನಿಮ್ಮ ಕೆಲಸದ ಮೂಲಕ ಉತ್ತರ ನೀಡಬೇಕು. ಇಲ್ಲವಾದಲ್ಲಿ ನಿಮ್ಮ ಒಂದು ಮುಗುಳುನಗೆಯೇ ಅವರ ಅವಮಾನವನ್ನು ಎದುರಿಸುವ ದೊಡ್ಡ ಅಸ್ತ್ರವಾಗಬೇಕು. ನಿಮ್ಮ ನಗುವಿನ ಅಸ್ತ್ರವೇ ಅವರಿಗೆ ಗುಣಪಡಿಸಲಾಗದ ಗಾಯವುಂಟುಮಾಡಬಹುದು ಎನ್ನುತ್ತಾರೆ ಚಾಣಕ್ಯ.
 

click me!