ಶ್ರೀ ರಾಘವೇಂದ್ರ ಸ್ವಾಮಿ 353ನೇ ಆರಾಧನಾ ಮಹೋತ್ಸವ ಆರಂಭ: ಟಿಟಿಡಿಯ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ

By Kannadaprabha NewsFirst Published Aug 19, 2024, 8:48 AM IST
Highlights

ಸುಕ್ಷೇತ್ರ ಮಂತ್ರಾಲಯದಲ್ಲಿ ನೆಲೆಸಿರುವ ಕಲಿಯುಗದ ಕಾಮದೇನು, ಬೇಡಿದ ವರಗಳನ್ನು ಕರುಣಿಸುವ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ರವಿವಾರ ಅದ್ದೂರಿ ಆರಂಭ ಕಂಡಿತು. 

ರಾಯಚೂರು (ಆ.19): ಸುಕ್ಷೇತ್ರ ಮಂತ್ರಾಲಯದಲ್ಲಿ ನೆಲೆಸಿರುವ ಕಲಿಯುಗದ ಕಾಮದೇನು, ಬೇಡಿದ ವರಗಳನ್ನು ಕರುಣಿಸುವ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವವು ಶ್ರೀಮಠದಲ್ಲಿ ರವಿವಾರ ಅದ್ದೂರಿ ಆರಂಭ ಕಂಡಿತು. ಆರಾಧನೆ ನಿಮಿತ್ತ ಶ್ರೀ ಮಠದಿಂದ ನಡೆಸಲ್ಪಡುವ ಸಪ್ತರಾತ್ರೋತ್ಸವದ ಮೊದಲ ದಿನವೇ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ದಿಂದ ಪ್ರಸಾದ ರೂಪದಲ್ಲಿ ಆಗಮಿಸಿದ್ದ ಶ್ರೀವಾರಿ ಶೇಷವಸ್ತ್ರವನ್ನು ಶ್ರೀ ಗುರುರಾಜರಿಗೆ ಸಮರ್ಪಿಸಲಾಯಿತು.

ದಂಪತಿ ಸಮೇತರಾಗಿ ಮಂತ್ರಾಲಯ ಕ್ಷೇತ್ರಕ್ಕೆ ಆಗಮಿಸಿದ್ದ ಟಿಟಿಡಿಯ ಇಒ ಜೆ.ಶಾಮಲರಾವ್ ಅವರು ಪ್ರಸಾದ ರೂಪದಲ್ಲಿ ತೆಗೆದುಕೊಂಡು ಬಂದಿದ್ದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮೇಳ-ತಾಳಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಶೇಷವಸ್ತ್ರವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಗೆ ಹಸ್ತಾಂತರಿಸಿದರು. ಇದೇ ವೇಳೆ ಶೇಷವಸ್ತ್ರವನ್ನು ತಮ್ಮ ಶಿರಸ್ಸಿನ ಮೇಲೆ ಇರಿಸಿಕೊಂಡ ಶ್ರೀಗಳು ಶ್ರೀ ಗುರುರಾಜರ ಮೂಲ ಬೃಂದಾವನದ ಮುಂದೆಯಿಟ್ಟು ವಿಶೇಷ ಪೂಜೆ-ಪುನಷ್ಕಾರ ನೆರವೇರಿಸಿ ಸಮರ್ಪಿಸಿದರು.

Latest Videos

ಬಳಿಕ ಶ್ರೀಮಠದ ಪ್ರಾಕಾರದ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಟಿಟಿಡಿ ಇಒ ಜೆ.ಶಾಮಲರಾವ್ ಅವರ ದಂಪತಿಯನ್ನು ಶ್ರೀಗಳು ಸನ್ಮಾನಿಸಿ ಗೌರಿವಿಸಿದರು. ಇದೇ ವೇಳೆ ಟಿಟಿಡಿಯ ಸಿಇಒ ಅವರು ಸಹ ಶ್ರೀ ಪಾದಂಗಳವನ್ನು ಸನ್ಮಾನಿಸಿ ಗೌರವಿಸಿದರು.ಶ್ರೀಮಠದ ವ್ಯವಸ್ಥಾಪಕರಾದ ಎಸ್.ಕೆ ಶ್ರೀನಿವಾಸರಾವ್, ವೆಂಕಟೇಶ ಜೋಶಿ ಹಾಗೂ ಟಿಟಿಡಿ ಅಧಿಕಾರಿ, ಸಿಬ್ಬಂದಿ, ಶ್ರೀಮಠದ ವಿದ್ವಾಂಸರು, ಪಂಡಿತರು ಸೇರಿದಂತೆ ಭಕ್ತರು ಭಾಗವಹಿಸಿದ್ದರು. ಸಾಂಸ್ಕೃತಿಕ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಎನ್.ವಾದಿರಾಜಾಚಾರ್ ನಿರೂಪಿಸಿದರು.

ಭಾರತದ ದೇಶಿ ಮಾವು ತಳಿಗಳ ಬೆಳೆದು ಭಾರತಕ್ಕೇ ಚೀನಾ ರಫ್ತು: ವಿಶ್ವ ಮಾರುಕಟ್ಟೆಯಲ್ಲಿ ಪ್ರಾಬಲ್ಯಕ್ಕೂ ಕುತ್ತು!

ಶ್ರೀಮಠ-ಟಿಟಿಡಿ ಗಟ್ಟಿ ನಂಟು: ವೇದಿಕೆ ಸಮಾರಂಭ ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಪಾದಂಗಳವರು, ತಿರುಮಲ ತಿರುಪತಿ ದೇವಸ್ಥಾನಕ್ಕೂ ಹಾಗೂ ಮಂತ್ರಾಲಯದ ಶ್ರೀ ಮಠಕ್ಕು ಅನಾದಿ ಕಾಲದಿಂದಲೂ ಗಟ್ಟಿ ನಂಟಿದೆ. ಪ್ರತಿ ವರ್ಷ ರಾಯರ ಪೂರ್ವಾರಾಧನೆ ಇಲ್ಲವೇ ಮಧ್ಯಾರಾಧನೆ ಸಮಯದಲ್ಲಿ ಶ್ರೀವಾರಿ ಶೇಷವಸ್ತ್ರವು ಶ್ರೀ ಮಠಕ್ಕೆ ಆಗಮಿಸುತ್ತಿತ್ತು. ಈ ಬಾರಿ ಎರಡು ದಿನಗಳ ಮುಂಚೆಯೇ ಬಂದಿದ್ದು, ಶ್ರೀನಿವಾಸ ದೇವರು ತಮ್ಮ ಶಿಷ್ಯರಾದ ಶ್ರೀ ಗುರುರಾಯರನ್ನು ಆಶೀರ್ವದಿಸಿ, ಅನುಗ್ರಹಿಸಲು ಮುಂಚಿತವಾಗಿಯೇ ಬಂದಿದ್ದಾರೆ ಎಂದರು.

click me!