
ಬೆಂಗಳೂರು (ಏ. 03): ಸೂರಿ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಗಡಿ ಆಚೆಯೂ ದೊಡ್ಡ ಹವಾ ಸೃಷ್ಟಿಸಿದೆ. ರಾಜ್ಯದ ಗಡಿ ಭಾಗ ಆಂಧ್ರದ ಹಲವೆಡೆ ‘ಟಗರು’ ಸಖತ್ ಸೌಂಡ್ ಮಾಡುತ್ತಿದೆ. ಶಿವರಾಜ್ ಕುಮಾರ್ಗೆ ಅಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆನ್ನುವುದನ್ನು ಭಾನುವಾರ ಹಿಂದೂಪುರದಲ್ಲಿ ನಡೆದ ಲೇಪಾಕ್ಷಿ ಉತ್ಸವ ಸಾಕ್ಷಿ ಒದಗಿಸಿತು.
ಆಂಧ್ರದ ಹಿಂದೂಪುರ ವಿಧಾನಸಭಾ ಕ್ಷೇತ್ರಕ್ಕೆ ಟಾಲಿವುಡ್ನ ಹೆಸರಾಂತ ನಟ ನಂದಮೂರಿ ಬಾಲಕೃಷ್ಣ ಶಾಸಕರು. ಅವರ ನೇತೃತ್ವದಲ್ಲಿ ಹಿಂದೂಪುರದಲ್ಲಿ ನಡೆಯುತ್ತಿರುವ ಲೇಪಾಕ್ಷಿ ಉತ್ಸವಕ್ಕೆ ಭಾನುವಾರ ನಟ ಶಿವರಾಜ್ ಕುಮಾರ್ ಅಥಿತಿಗಳಾಗಿ ಭಾಗವಹಿಸಿದ್ದರು. ಬಾಲಕೃಷ್ಣ ಹಾಗೂ ಶಿವರಾಜ್ ಕುಮಾರ್ ನಡುವೆ ಉತ್ತಮ ಒಡನಾಟ ಇದ್ದದ್ದು ಇದಕ್ಕೆ ಕಾರಣ. ಸಂಜೆ ಬೃಹತ್ ವೇದಿಕೆಗೆ ಶಿವರಾಜ್ ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಭರ್ಜರಿ ಸಿಳ್ಳೆ ,
ಕೇಕೆಯ ಮೂಲಕ ಸ್ವಾಗತ ಕೋರಿದರು.
ನಂದಮೂರಿ ಬಾಲಕೃಷ್ಣ ಅವರು ಶಿವರಾಜ್ ಕುಮಾರ್'ಗೆ ಶಾಲು ಹೊದಿಸಿ, ಸನ್ಮಾನಿಸಿದ ನಂತರ ‘ಟಗರು’ ಹಾಡಿನ ಅಬ್ಬರ ಶುರುವಾಯಿತು. ಶಿವಣ್ಣ ಸಖತ್ ಸ್ಟೆಪ್ ಹಾಕಿದರು. ವೇದಿಕೆ ಮೇಲೆ ಶಿವರಾಜ್ ಕುಮಾರ್ ಕುಣಿಯುತ್ತಿದ್ದರೆ, ವೇದಿಕೆಯ ಮುಂಭಾಗದಲ್ಲಿದ್ದ ಪ್ರೇಕ್ಷಕರು ಸಂಭ್ರಮದಿಂದ ಕುಣಿದು, ಕುಪ್ಪಳಿಸಿ ಅಭಿಮಾನ ಮೆರೆದಿದ್ದು ವಿಶೇಷವಾಗಿತ್ತು. ‘ನಂದಮೂರಿ ಬಾಲಕೃಷ್ಣ ಆಹ್ವಾನದ ಮೇರೆಗೆ ನಾವಲ್ಲಿಗೆ ಹೋಗಿದ್ದೆವು. ಅದೊಂದು ಅದ್ಧೂರಿ ಕಾರ್ಯಕ್ರಮ. ಬೃಹತ್ ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಜೆ ಗೌರವ ಸ್ವೀಕಾರಕ್ಕೆ ಶಿವರಾಜ್ ಕುಮಾರ್ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳ ಸಿಳ್ಳೆ, ಕೇಕೆ ಮುಗಿಲು ಮುಟ್ಟಿತು. ಭಾರೀ ಕರತಾಡನ ಪ್ರದರ್ಶಿಸಿ, ಅಭಿಮಾನ ಮೆರೆದರು. ಅಷ್ಟೇ ಅಲ್ಲ, ಟಗರು ಚಿತ್ರದ ಹಾಡಿಗೆ
ಕುಣಿಯುವಂತೆ ಅಭಿಮಾನಿಗಳು ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದು ಶಿವಣ್ಣ ಟಗರು ಹಾಡಿಗೆ ಹೆಜ್ಜೆ ಹಾಕುತ್ತಿದ್ದಂತೆ ಅಭಿಮಾನಿಗಳು ಕುಣಿದು ಸಂಭ್ರಮಿಸಿದ್ದು ವಿಶೇಷವಾಗಿತ್ತು ಎನ್ನುತ್ತಾರೆ ನಿರ್ಮಾಪಕ ಕೆ.ಪಿ ಶ್ರೀಕಾಂತ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.