
ಖ್ಯಾತ ಗಾಯಕಿ ಅಭಿರಾಮಿ ಸುರೇಶ್ ತಮಗೆ ದೊಡ್ಡ ಮಟ್ಟದ ಆರ್ಥಿಕ ವಂಚನೆಯಾಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಬ್ಯುಸಿನೆಸ್ ದೊಡ್ಡದು ಮಾಡುವ ಆಸೆಯಲ್ಲಿದ್ದಾಗ, ತುಂಬಾನೇ ನಂಬಿಕಸ್ಥನಂತೆ ಕಂಡ ವ್ಯಕ್ತಿಯೊಬ್ಬ ಹೇಗೆ ಮೋಸ ಮಾಡಿದ, ಹಣ ಕೊಡುವ ದಿನವೇ ಹೇಗೆ ನಾಪತ್ತೆಯಾದ ಅನ್ನೋದನ್ನು ಅವರು ವಿವರಿಸಿದ್ದಾರೆ. ಮಲಯಾಳಂನ ಜನಪ್ರಿಯ ಗಾಯಕಿ ಅಭಿರಾಮಿ ಸುರೇಶ್ ತಮಗೆ ದೊಡ್ಡ ಆರ್ಥಿಕ ವಂಚನೆಯಾಗಿದೆ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.
ಸಹೋದರಿ ಅಮೃತಾ ಸುರೇಶ್ ಜೊತೆ ಸೇರಿ ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡುವ ಅಭಿರಾಮಿ, ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಗಾಯಕಿ ಮಾತ್ರವಲ್ಲದೆ, ಅವರೊಬ್ಬ ಉದ್ಯಮಿಯೂ ಹೌದು. ಇದೀಗ ತಮ್ಮ ಬ್ಯುಸಿನೆಸ್ ವಿಚಾರದಲ್ಲಿ ತಮಗಾದ ಮೋಸದ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಬ್ಯುಸಿನೆಸ್ಅನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸುವ ಕನಸು ಕಾಣುತ್ತಿದ್ದಾಗ, ಆರ್ಥಿಕ ಸಂಕಷ್ಟದ ಬಲೆಗೆ ಬಿದ್ದಿದ್ದಾಗಿ ಅವರು ಹೇಳಿದ್ದಾರೆ. ನೋಡಲು ಅತ್ಯಂತ ನಂಬಿಕಸ್ಥ, ಸಭ್ಯ ಹಾಗೂ ಪ್ರೊಫೆಷನಲ್ ಆಗಿ ಕಂಡ ವ್ಯಕ್ತಿಯೇ ಈ ಮೋಸದ ಬಲೆ ಹೆಣೆದಿದ್ದ ಎಂದು ಅಭಿರಾಮಿ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ನಾನು ಎಲ್ಲಿಗೆ ಮಾಯವಾದೆ, ಯಾಕೆ ಮೊದಲಿನಂತೆ ಜನರ ಜೊತೆ ಬೆರೆಯುತ್ತಿಲ್ಲ, ಯಾಕೆ ದೂರ ಉಳಿದಿದ್ದೇನೆ ಅಂತ ಅನೇಕರು ನನ್ನನ್ನು ಕೇಳುತ್ತಿದ್ದರು. ಅದಕ್ಕೆಲ್ಲಾ ಇಲ್ಲಿದೆ ನನ್ನ ಉತ್ತರ. ಕಳೆದ ವರ್ಷದ ಕೊನೆಯಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ, ನನ್ನ ಬ್ಯುಸಿನೆಸ್ ವಿಸ್ತರಿಸುವ ಕನಸಿನಲ್ಲಿದ್ದಾಗ ನಾನು ಒಂದು ದೊಡ್ಡ ಆರ್ಥಿಕ ಸಂಕಷ್ಟದ ಬಲೆಗೆ ಬಿದ್ದೆ. ನೋಡಲು ತುಂಬಾನೇ ನಂಬಿಕಸ್ಥನಂತೆ ಕಂಡ ವ್ಯಕ್ತಿಯೇ ಈ ಬಲೆ ಹೆಣೆದಿದ್ದ.
ಸದ್ಯಕ್ಕೆ ನಾನು ಆ ವ್ಯಕ್ತಿಯ ಹೆಸರು ಮತ್ತು ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ. ಯಾಕಂದ್ರೆ, ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಕೆಲವು ವಿಚಾರಗಳಲ್ಲಿ ನನಗೂ ಸ್ಪಷ್ಟತೆ ಸಿಗಬೇಕಿದೆ. ಆದರೆ, ಇದೊಂದು ಆತನ ಕೆಟ್ಟ ಚಾಳಿ, ನನ್ನಂತೆ ಇನ್ನೂ ಹಲವರಿಗೆ ಈತ ವಂಚಿಸಿದ್ದಾನೆ ಎಂಬುದು ಖಚಿತವಾದರೆ, ಬೇರೆ ಯಾರೂ ಈ ಗುಂಡಿಗೆ ಬೀಳಬಾರದು ಅಂತ ನಾನೇ ಖಂಡಿತವಾಗಿಯೂ ಮುಂದೆ ಬಂದು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ.
ಬೆಳೆಯಬೇಕು ಅಂದುಕೊಳ್ಳುವ ಯಾವುದೇ ಉದ್ಯಮಿಯಂತೆ, ನಾನೂ ಕೂಡ ಇದೊಂದು ಪ್ರಾಮಾಣಿಕ ಅವಕಾಶ ಅಂತಲೇ ಭಾವಿಸಿದ್ದೆ. ಆತ ಕೊಟ್ಟ ಭರವಸೆಗಳು ಬಹಳ ದೊಡ್ಡದಾಗಿದ್ದವು. ಅವರ ಮಾತುಕತೆ, ವ್ಯವಹಾರದ ರೀತಿ ಎಲ್ಲವೂ ಪಕ್ಕಾ ಆಗಿತ್ತು, ಒಂದು ಬ್ಯಾಂಕ್ ವ್ಯವಹಾರದಷ್ಟೇ ನಂಬಿಕಾರ್ಹವಾಗಿತ್ತು. ದೊಡ್ಡ ಕನಸುಗಳನ್ನು ಹೊತ್ತು, ಸ್ವಂತ ಕಾಲ ಮೇಲೆ ಏನಾದರೂ ಸಾಧಿಸಬೇಕು, ನನ್ನ ಕನಸು ನನಸಾಗಲು ಸಹಾಯ ಮಾಡಿದವರಿಗೆ ಒಳ್ಳೆಯದನ್ನು ಮಾಡಬೇಕು ಅಂದುಕೊಂಡಿದ್ದ ನನಗೆ, ದೇವರು ಕಳುಹಿಸಿದ ದೊಡ್ಡ ಅವಕಾಶ ಇದೇ ಇರಬೇಕು ಅಂತ ಅನ್ನಿಸಿತ್ತು.
ಹಾಗಾಗಿ ನಾನು ಆತನನ್ನು ನಂಬಿದೆ. ಆ ನಂಬಿಕೆಗೆ ನಾನು ದೊಡ್ಡ ಬೆಲೆ ತೆರಬೇಕಾಗಿ ಬಂತು. ಆತ ಕೊಟ್ಟ ಭರವಸೆ ಮೇಲೆ ನಾನು ಹಲವರಿಗೆ ಮಾತು ಕೊಟ್ಟೆ. ಬ್ಯುಸಿನೆಸ್ ವಿಸ್ತರಿಸಲು ಯೋಜನೆಗಳನ್ನು ಸಿದ್ಧಪಡಿಸಿದೆ. ಹಣಕಾಸು ಹೊಂದಿಸಿದೆ. ಜನರಿಗೆ ನನ್ನ ಮಾತಿನ ಮೇಲೆ ಭರವಸೆ ನೀಡಿದೆ. ಈ ಹಣಕಾಸಿನ ನೆರವು ಬಂದೇ ಬರುತ್ತದೆ ಎಂಬ ಪೂರ್ಣ ಭರವಸೆಯಲ್ಲಿ ನನ್ನ ಭವಿಷ್ಯವನ್ನೇ ಅದಕ್ಕೆ ತಕ್ಕಂತೆ ರೂಪಿಸಿಕೊಂಡಿದ್ದೆ. ಆದರೆ, ಹಣ ಕೈಗೆ ಬರಬೇಕಾದ ದಿನವೇ ಆ ವ್ಯಕ್ತಿ ಇದ್ದಕ್ಕಿದ್ದಂತೆ ಮಾಯವಾದ. ಅಷ್ಟೇ, ಸಿಂಪಲ್ ಆಗಿ ಎಸ್ಕೇಪ್ ಆದ.
ಆದರೆ, ಆತನ ಜೊತೆ ನನ್ನ ಜವಾಬ್ದಾರಿಗಳು ಮಾಯವಾಗಲಿಲ್ಲ. ನಾನು ಅಷ್ಟು ಕಾಳಜಿಯಿಂದ ರೂಪಿಸಿದ್ದೆಲ್ಲವೂ ಒಂದೇ ಕ್ಷಣದಲ್ಲಿ ಕುಸಿದುಬಿತ್ತು. ನನ್ನ ಆರ್ಥಿಕ ಅಡಿಪಾಯವೇ ಅಲುಗಾಡಿತು. ನನ್ನ ವಿಶ್ವಾಸಾರ್ಹತೆ ಪ್ರಶ್ನೆಗೊಳಗಾಯಿತು. ಪೂರ್ಣ ಪ್ರಾಮಾಣಿಕತೆಯಿಂದ ನಾನು ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ. ಎಲ್ಲವನ್ನೂ ಸರಿಪಡಿಸಲು ಪ್ರಯತ್ನಿಸುತ್ತಾ, ಮುಳುಗಿ ಹೋಗದಂತೆ ಹೋರಾಡುತ್ತಾ ನಾನು ಮಾನಸಿಕವಾಗಿ ಸಂಪೂರ್ಣವಾಗಿ ಕುಸಿದುಹೋದೆ.
ನಾನು ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ಕಾರ್ಯಕ್ರಮಗಳಿಗೆ ಹೋಗುವುದನ್ನು ಬಿಟ್ಟೆ. ಕಂಟೆಂಟ್ ಕ್ರಿಯೇಷನ್ ನಿಲ್ಲಿಸಿದೆ. ಸೋಷಿಯಲ್ ಮೀಡಿಯಾದಿಂದ ದೂರವಾದೆ. ಜನರನ್ನು, ಅವರ ಪ್ರಶ್ನೆಗಳನ್ನು, ನಿರೀಕ್ಷೆಗಳನ್ನು, ನಿರಾಸೆಗಳನ್ನು ಪ್ರತಿದಿನ ಎದುರಿಸುವ ಶಕ್ತಿ ನನ್ನಲ್ಲಿ ಉಳಿದಿರಲಿಲ್ಲ. ಹೊರಗಿನಿಂದ ನೋಡುವವರಿಗೆ ಎಲ್ಲವೂ ಸರಿಯಾಗಿದೆ ಎಂದೇ ಅನಿಸಿತ್ತು. ಆದರೆ ತೆರೆಮರೆಯಲ್ಲಿ ನಾನು ಒತ್ತಡ, ಭಯ, ಅಪರಾಧ ಪ್ರಜ್ಞೆ, ಅವಮಾನ, ಆತಂಕ ಮತ್ತು ನಿರಾಶೆಯೊಂದಿಗೆ ಮೌನವಾಗಿ ಹೋರಾಡುತ್ತಿದ್ದೆ. ಇದು ಕೇವಲ ಹಣಕಾಸಿನ ನಷ್ಟವಾಗಿರಲಿಲ್ಲ; ಇದೊಂದು ದೊಡ್ಡ ಮಾನಸಿಕ ಆಘಾತವಾಗಿತ್ತು.
ನಾನು ಜೀವನದಲ್ಲಿ ಈ ಹಿಂದೆಯೂ ನೋವುಂಡಿದ್ದೇನೆ. ಆದರೆ ಬ್ಯುಸಿನೆಸ್ನಲ್ಲಿ ಆಗುವ ಆಘಾತದ ನೋವೇ ಬೇರೆ. ನಿಮ್ಮ ಉದ್ದೇಶ ಶುದ್ಧವಾಗಿತ್ತು ಅಂತ ನಿಮಗೆ ಗೊತ್ತಿದ್ದರೂ, ನಿಮ್ಮ ಮೇಲಿನ ನಂಬಿಕೆ ಕುಸಿಯುವುದನ್ನು ನೋಡುತ್ತಾ ಕೂರುವುದು ನಿಮ್ಮೊಳಗಿನ ಆತ್ಮವಿಶ್ವಾಸವನ್ನೇ ಕೊಲ್ಲುತ್ತದೆ. ನಾನು ಸಂಪೂರ್ಣವಾಗಿ ನನ್ನೊಳಗೆ ಕುಗ್ಗಿಹೋದೆ. ನನ್ನ ಕುಟುಂಬದವರಿಗೂ ನನ್ನ ಪರಿಸ್ಥಿತಿ ಸಂಪೂರ್ಣವಾಗಿ ತಿಳಿದಿರಲಿಲ್ಲ. ನಿಜ ಹೇಳಬೇಕೆಂದರೆ, ನಾನು ಪ್ರೀತಿಸುವವರಿಗೆ ಭಾರವಾಗಲು ಇಷ್ಟಪಡದ ಕಾರಣ, ನನ್ನ ಹೋರಾಟಗಳನ್ನು ನಾನೇ ಮೌನವಾಗಿ ಎದುರಿಸುತ್ತಿದ್ದೆ.
ಎಲ್ಲವನ್ನೂ ನಾನೇ ಸರಿಪಡಿಸಬಹುದು ಎಂದುಕೊಂಡಿದ್ದೆ. ಉತ್ತರಗಳಿಗಾಗಿ, ಭರವಸೆಗಳಿಗಾಗಿ ಓಡುತ್ತಲೇ ಇದ್ದೆ. ಆದರೆ ನಿಧಾನವಾಗಿ, ನನಗೇ ತಿಳಿಯದಂತೆ ನನ್ನನ್ನು ನಾನು ಕಳೆದುಕೊಂಡೆ. ಒಂದು ತಪ್ಪು ನಿರ್ಧಾರ, ಒಬ್ಬ ವ್ಯಕ್ತಿ, ಒಂದು ಸುಳ್ಳು ಭರವಸೆ ಹೇಗೆ ವರ್ಷಗಳ ಕಠಿಣ ಪರಿಶ್ರಮ, ನಂಬಿಕೆಯನ್ನು ಅಲುಗಾಡಿಸಬಹುದು ಎಂದು ಯೋಚಿಸಿ ಹುಚ್ಚು ಹಿಡಿದಂತಾದ ದಿನಗಳೂ ಇದ್ದವು. ಆದರೆ ಈ ಕತ್ತಲೆಯ ನಡುವೆಯೂ ನಾನು ಒಂದು ಸತ್ಯವನ್ನು ಅರಿತೆ: ನೋವನ್ನು ಮುಚ್ಚಿಟ್ಟರೆ ಅದು ಮಾಯವಾಗುವುದಿಲ್ಲ. ಅದು ನಿಮ್ಮನ್ನು ನಿಧಾನವಾಗಿ ತಿಂದುಹಾಕುತ್ತದೆ. ಅದಕ್ಕಾಗಿಯೇ ಈಗ ಮಾತನಾಡಲು ನಿರ್ಧರಿಸಿದ್ದೇನೆ.
ಕನಸುಗಳನ್ನು ಬೆನ್ನಟ್ಟುವ ಪ್ರತಿಯೊಬ್ಬರಿಗೂ, ವಿಶೇಷವಾಗಿ ಯುವ ಉದ್ಯಮಿಗಳಿಗೆ ಮತ್ತು ಸ್ವಂತವಾಗಿ ಏನನ್ನಾದರೂ ಸಾಧಿಸಲು ಯತ್ನಿಸುತ್ತಿರುವ ಮಹಿಳೆಯರಿಗೆ ನಾನು ಹೇಳುವುದಿಷ್ಟೇ: ಯಶಸ್ಸಿನ ದಾರಿ ಯಾವಾಗಲೂ ಸುಂದರವಾಗಿರುವುದಿಲ್ಲ. ಹೊಳಪಿನ ಮಾತು, ಪಕ್ಕಾ ಡಾಕ್ಯುಮೆಂಟ್ಸ್, ದೊಡ್ಡ ಭರವಸೆಗಳೊಂದಿಗೆ ನಿಮ್ಮ ಬಳಿ ಬರುವವರೆಲ್ಲರ ಉದ್ದೇಶ ಒಳ್ಳೆಯದೇ ಆಗಿರಬೇಕೆಂದಿಲ್ಲ. ದಯವಿಟ್ಟು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಇನ್ನು, ನನ್ನನ್ನು ಈ ಸ್ಥಿತಿಗೆ ತಂದ ಆ ವ್ಯಕ್ತಿಗೆ... ನಾನು ಒಂದೇ ಹೇಳಲು ಬಯಸುತ್ತೇನೆ.
ನೀವು ಒಬ್ಬರ ಜೀವನದಲ್ಲಿ ಎಂತಹ ಬಿರುಗಾಳಿ ಎಬ್ಬಿಸಿ ಹೋಗಿದ್ದೀರಿ ಎಂಬ ಕಲ್ಪನೆಯೂ ನಿಮಗಿಲ್ಲ. ನಾಳೆ ನಿಮ್ಮ ಮನೆಯ ಹೆಣ್ಣುಮಕ್ಕಳು ಕನಸುಗಳನ್ನು ಬೆನ್ನಟ್ಟಲು ಹೊರಟಾಗ, ಬೇರೆ ಯಾರಾದರೂ ಅವರಿಗೆ ಇದೇ ರೀತಿ ಮಾಡಿದರೆ ಹೇಗಿರುತ್ತದೆ ಎಂದು ಯೋಚಿಸಿ. ನಿಮ್ಮ ಹೆಸರಿನ ಜೊತೆ ಒಂದು ಕುಟುಂಬ ಇರುವುದರಿಂದ ಮಾತ್ರ ನಾನು ನಿಮ್ಮ ವಿವರಗಳನ್ನು ಬಹಿರಂಗಪಡಿಸುತ್ತಿಲ್ಲ. ನಾನು ಶೂನ್ಯದಿಂದ ನನ್ನನ್ನು ನಾನು ಕಟ್ಟಿಕೊಂಡವಳು. ಬೇಕಾದರೆ, ಮತ್ತೆ ಕಟ್ಟಿಕೊಳ್ಳುತ್ತೇನೆ. ಈ ಘಟನೆ ನನ್ನನ್ನು ಹಲವು ರೀತಿಯಲ್ಲಿ ಮುರಿಯಿತು, ಆದರೆ ನನ್ನೊಳಗೆ ಎಂತಹ ದೊಡ್ಡ ಶಕ್ತಿ ಇದೆ ಎಂಬುದನ್ನು ನನಗೆ ತೋರಿಸಿಕೊಟ್ಟಿತು ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.