
ರಾಮ್ ಚರಣ್ ಇತ್ತೀಚೆಗೆ ಸರ್ಜರಿಗಾಗಿ ಕೋಯಂಬತ್ತೂರಿಗೆ ತೆರಳಿದ್ದರು. ಅವರ ಮಣಿಕಟ್ಟಿನ ಗಾಯಕ್ಕೆ ಸರ್ಜರಿ ಬೇಕಾಗಿದ್ದರಿಂದ ಇಡೀ ಮೆಗಾ ಫ್ಯಾಮಿಲಿ ಅಲ್ಲಿಗೆ ಹೋಗಿತ್ತು. ಚಿರಂಜೀವಿ, ಸುರೇಖಾ, ಮತ್ತು ಉಪಾಸನಾ ಕೂಡ ಆಸ್ಪತ್ರೆಯಲ್ಲಿದ್ದು, ರಾಮ್ ಚರಣ್ ಅವರ ಆರೈಕೆ ಮಾಡಿದ್ದಾರೆ. ಇದೀಗ ಅವರ ಬಲಗೈ ಮಣಿಕಟ್ಟಿನ ಸರ್ಜರಿ ಯಶಸ್ವಿಯಾಗಿ ನಡೆದಿದೆ. 'ಪೆದ್ದಿ' ಸಿನಿಮಾ ಪ್ರಚಾರದ ಸಮಯದಿಂದಲೇ ರಾಮ್ ಚರಣ್ ಮಣಿಕಟ್ಟು ನೋವಿನಿಂದ ಬಳಲುತ್ತಿದ್ದರು. ಆಗ ಕೈಗೆ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಂಡಿದ್ದರು.
ಈ ಶಸ್ತ್ರಚಿಕಿತ್ಸೆಯನ್ನು ಗಂಗಾ ಆಸ್ಪತ್ರೆಯ ಮುಖ್ಯಸ್ಥ, ವಿಶ್ವಪ್ರಸಿದ್ಧ ಆರ್ಥೋಪೆಡಿಕ್ ಸರ್ಜನ್ ಡಾ. ಎಸ್. ರಾಜಶೇಖರನ್ ಅವರ ನೇತೃತ್ವದಲ್ಲಿ ನಡೆಸಲಾಗಿದೆ. ದಶಕಗಳ ಅನುಭವ ಹೊಂದಿರುವ ಇವರು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆರ್ಥೋಪೆಡಿಕ್ ಕ್ಷೇತ್ರದಲ್ಲಿ ಇವರು ದಿಗ್ಗಜರೆಂದೇ ಖ್ಯಾತಿ ಪಡೆದಿದ್ದಾರೆ. ಇದೇ ಡಾ. ರಾಜಶೇಖರನ್ ಈ ಹಿಂದೆ ಚಿರಂಜೀವಿ ಅವರ ಅತ್ಯಂತ ಕ್ಲಿಷ್ಟಕರವಾದ ಬೆನ್ನುಮೂಳೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದರು.
ರಾಮ್ ಚರಣ್ ಅವರ ಮಣಿಕಟ್ಟು ಸಮಸ್ಯೆಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ, ಅಮೆರಿಕದ ಮಿಯಾಮಿಯ ಖ್ಯಾತ ಹ್ಯಾಂಡ್ ಆ್ಯಂಡ್ ರಿಸ್ಟ್ ಸರ್ಜನ್ ಡಾ. ಅಲೆಹಾಂಡ್ರೋ ಬಾಡಿಯಾ (Dr. Alejandro Badia) ಅವರನ್ನು ವಿಶೇಷವಾಗಿ ಕೋಯಂಬತ್ತೂರಿಗೆ ಆಹ್ವಾನಿಸಲಾಗಿತ್ತು. ಕೈ ಮತ್ತು ಮಣಿಕಟ್ಟು ಶಸ್ತ್ರಚಿಕಿತ್ಸೆ, ವಿಶೇಷವಾಗಿ ಸ್ಪೋರ್ಟ್ಸ್ ಇಂಜುರಿಗಳ ಚಿಕಿತ್ಸೆಯಲ್ಲಿ ಅವರು ವಿಶ್ವದಾದ್ಯಂತ ಹೆಸರುವಾಸಿಯಾದ ತಜ್ಞರು. ಸಾಮಾನ್ಯವಾಗಿ ಅವರ ಅಪಾಯಿಂಟ್ಮೆಂಟ್ ಸಿಗುವುದೇ ಕಷ್ಟ. ಅಂತಹವರು ರಾಮ್ ಚರಣ್ಗಾಗಿ ಬಂದಿದ್ದು ವಿಶೇಷ. ಡಾ. ರಾಜಶೇಖರನ್, ಡಾ. ಅಲೆಹಾಂಡ್ರೋ ಬಾಡಿಯಾ, ಡಾ. ಪ್ರವೀಣ್ ಭಾರದ್ವಾಜ್ ಮತ್ತು ಅವರ ತಜ್ಞರ ತಂಡ ಈ ಸರ್ಜರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸದ್ಯ ರಾಮ್ ಚರಣ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇನ್ನೂ ನಾಲ್ಕು ದಿನಗಳ ವಿಶ್ರಾಂತಿಯ ನಂತರ ಹೈದರಾಬಾದ್ಗೆ ಮರಳುವ ಸಾಧ್ಯತೆ ಇದೆ. ಈ ಸಮಯದಲ್ಲಿ ಚಿರಂಜೀವಿ-ಸುರೇಖಾ ದಂಪತಿ ಮತ್ತು ಉಪಾಸನಾ ಕೋಯಂಬತ್ತೂರಿನಲ್ಲೇ ಇದ್ದು, ರಾಮ್ ಚರಣ್ಗೆ ಬೆಂಬಲವಾಗಿ ನಿಂತಿದ್ದಾರೆ. ಡಾ. ರಾಜಶೇಖರನ್ ಅವರು ಚಿರಂಜೀವಿಯವರ ಬಹುಕಾಲದ ಆತ್ಮೀಯ ಸ್ನೇಹಿತರು. ರಾಮ್ ಚರಣ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.