ಕರ್ಮಷಿಯಲ್ ವಾಸುಗೆ ಬಾಕ್ಸ್ ಆಫೀಸ್ ಸುಲ್ತಾನ್ ಬೆಂಬಲ

By Kannadaprabha NewsFirst Published Jul 27, 2018, 11:26 AM IST
Highlights

ಅಲ್ಲಿಗೆ ಆಗಮಿಸಿದ್ದ ಗಣ್ಯರು ಮಾತ್ರವಲ್ಲ ಸಭಿಕರಿಂದಲೂ ಇದೇ ಮಾತು. ಹೀಗೆ ಮೆಚ್ಚುಗೆಗೆ ಪಾತ್ರವಾಗಿದ್ದು ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಅದ್ದೂರಿ ವೇದಿಕೆ ಜತೆಗೆ ರಂಗು ರಂಗಿನ ಮನರಂಜನಾ ಆಟ-ಪಾಠ ಮತ್ತು ಮಾತುಗಳು.

ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೊಂದು ಗ್ರ್ಯಾಂಡ್ ವೆಲ್‌ಕಂ ಕೋರುವುದಕ್ಕಾಗಿ ಅನೀಶ್ ತೇಜೇಶ್ವರ್ ಈ ಕಾರ್ಯಕ್ರಮ ಆಯೋಜಿಸಿದ್ದರು. ಈ ಚಿತ್ರದ ನಾಯಕ ಕಂ ನಿರ್ಮಾಪಕ ಅವರೇ. ಅಜಿತ್ ವಾಸನ್ ಉಗ್ಗಿನ ನಿರ್ದೇಶನದ ಈ ಚಿತ್ರದ ಕಾರ್ಯಕ್ರಮಕ್ಕೆ ದರ್ಶನ್ ಮುಖ್ಯ ಅತಿಥಿ ಎಂದ ಮೇಲೆ ಹೆಚ್ಚು ಹೇಳಬೇಕಿಲ್ಲ. ಅಂಬೇಡ್ಕರ್ ಭವನದಲ್ಲಿ ಜನವೋ ಜನ. ಹಾಡು, ನೃತ್ಯ, ಸಾಹಸ, ಬ್ಯಾಲೆ ಡ್ಯಾನ್ಸ್, ಭರತನಾಟ್ಯ, ಬೆಂಕಿ ಜತೆ ಆಟ, ಮಧುರವಾದ ಹಾಡುಗಳ ಗಾಯನ... ಹೀಗೆ ಒಂದಲ್ಲಾ ಎರಡಲ್ಲಾ ಹಲವು ಸಂಭ್ರಮಗಳ ಸಂಗಮ.

ದರ್ಶನ್ ಎಂಬ ಆನೆಬಲ: ಅನೀಶ್

ಇಲ್ಲಿಯವರೆಗೂ ನಾನು ಏಳು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ ಮೇಲೆ ಮೊದಲ ಬಾರಿಗೆ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೂಲಕ ನಟನೆ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದೇನೆ. ಹೀಗಾಗಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸಬೇಕು ಎಂಬ ಆಸೆ. ಆ ನಿಟ್ಟಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡುವುದಕ್ಕೆ ಅವರ ನಟನೆಯ ಚಿತ್ರೀಕರಣದ ಸೆಟ್‌ಗೆ ಅನುಮತಿ ಇಲ್ಲದೆ ಹೋದೆ. ಆದರೂ ಆತ್ಮೀಯವಾಗಿ ಬರಮಾಡಿಕೊಂಡರು. ಚಿತ್ರದ ಟ್ರೇಲರ್ ತೋರಿಸಿ ಚಿತ್ರದ ಬಗ್ಗೆ ಹೇಳಿದಾಗ ‘ಈ ಚಿತ್ರದ ಪ್ರಚಾರಕ್ಕೆ ನಾನು ಬರುತ್ತೇನೆ’ ಎಂದು ಪ್ರೀತಿಯಿಂದ ಹೇಳಿದರು. ಅವರು ಈ ಗುಣವನ್ನು ನಾನು ಮರೆಯಲಾರೆ. ನನ್ನ ಚಿತ್ರಕ್ಕೆ ಆನೆಬಲ ಬಂದಂತಾಗಿದೆ.

ಅನೀಶ್ ಗೆಲ್ಲಬೇಕು: ದರ್ಶನ್

ನಾನು ಈ ಚಿತ್ರದ ಟ್ರೇಲರ್ ಹಾಗೂ ಚಿತ್ರದ ಕೆಲ ದೃಶ್ಯಗಳನ್ನು ನೋಡಿದೆ. ಪೋಸ್ಟರ್‌ಗಳನ್ನು ನೋಡಿ ಈ ಕಾರ್ಯಕ್ರಮಕ್ಕೆ ಬಂದ ಮೇಲೆ ನನಗೆ ಅನಿಸಿದ್ದು, ಒಂದು ಸಿನಿಮಾಗೆ ಹೇಗೆ ಪ್ರಚಾರ ಮಾಡಬೇಕು, ಆ ಚಿತ್ರದ ಕುರಿತು ಪ್ರೇಕ್ಷಕರಲ್ಲಿ ಹೇಗೆ ಕುತೂಹಲ ಮೂಡಿಸಬೇಕು ಎಂಬುದನ್ನು ಅನೀಶ್ ಅವರಿಂದ ಕಲಿಯಬೇಕು. ಅವರ ಪ್ಲಾನ್ ಅಷ್ಟು ಅಚ್ಚುಕಟ್ಟಾಗಿದೆ. ಚಿತ್ರದ ಟ್ರೇಲರ್ ಅಂತೂ ಸೂಪರ್. ಅನೀಶ್ ಈ ಚಿತ್ರದ ನಿರ್ಮಾಪಕರು ಕೂಡ ಹೌದು. ನಿರ್ಮಾಪಕರ ಕಷ್ಟ ಏನು ಅಂತ ನನಗೆ ಗೊತ್ತು. ಚಿತ್ರರಂಗಕ್ಕೆ ಏನಾದರೂ ಮಾಡಬೇಕೆಂದು ನಿರ್ಮಾಣ  ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಒಂದು ಸಿನಿಮಾ ಗೆದ್ದರೆ ಆ ಚಿತ್ರದ ನಾಯಕ, ನಿರ್ಮಾಪಕ ಮಾತ್ರ ಗೆಲ್ಲುವುದಿಲ್ಲ. ಇದರಿಂದ ರೈತರೂ ಗೆದ್ದಂತೆ. ಹೀಗಾಗಿ ಈ ಚಿತ್ರದ ಮೂಲಕ ಅನೀಶ್ ಯಶಸ್ಸು ಕಾಣಬೇಕು.

ಅನೀಶ್ ಚಿತ್ರಕ್ಕೆ ಸಹಾಯಕನಾಗಿದ್ದೆ: ರಿಷಬ್ ಶೆಟ್ಟಿ

ಅನೀಶ್ ಚಿತ್ರಕ್ಕೆ ನಾನು ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದವನು. ಆ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಎರಡನೇ ನಾಯಕ. ಹೀಗಾಗಿ ಅನೀಶ್ ನಮ್ಮ ಗೆಳೆಯ. ತುಂಬಾ ಕಷ್ಟಪಟ್ಟು ಪ್ರೀತಿಯಿಂದ ಸಿನಿಮಾ ಮಾಡಿದ್ದಾನೆ. ಬಾಕ್ಸ್ ಅಫೀಸ್ ಸುಲ್ತಾನ್ ದರ್ಶನ್ ಬಂದು ಚಿತ್ರಕ್ಕೆ ಸಾಥ್ ನೀಡಿದ್ದಾರೆ ಎಂದ ಮೇಲೆ ವಾಸು ಪಕ್ಕಾ ಕಮರ್ಷಿಯಲ್ಲಾಗಿ ಗೆಲ್ಲುವುದರಲ್ಲಿ ಅನುಮಾನವಿಲ್ಲ.

click me!