ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಮುಗಿಸಲು ಮಾಜಿ ಪ್ರಧಾನಿ ದೇವೇಗೌಡರು ಹುನ್ನಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದ್ದಾರೆ.
ಹಾಸನ (ಮೇ. 16): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಮುಗಿಸಲು ಮಾಜಿ ಪ್ರಧಾನಿ ದೇವೇಗೌಡರು ಹುನ್ನಾರ ಮಾಡಿದ್ದಾರೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದ್ದಾರೆ.
ವಿಶ್ವನಾಥ್-ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಸಮಾಜ ಒಡೆಯುತ್ತಿದ್ದಾರೆ. ಕುರುಬ ಸಮುದಾಯ ಮುಗಿಸಲು ದೇವೇಗೌಡರು ಈ ರೀತಿ ಮಾಡುತ್ತಿದ್ದಾರೆ. ವಿಶ್ವನಾಥ್ ಅವರು ಬುದ್ಧಿವಂತ ರಾಜಕಾರಣಿ, ಅವರು ಏಕೆ ಹೀಗೆ ಮಾತಾಡ್ತಾರೋ ಗೊತ್ತಿಲ್ಲ. ದೇವೇಗೌಡರ ಕುಟುಂಬಕ್ಕೆ ಹತ್ತಿರವಾಗಲು ವಿಶ್ವನಾಥ್ ಹೀಗೆ ಮಾತಾಡುತ್ತಿರಬಹುದು. ಆದರೆ, ಅದೇ ಕುಟುಂಬದವರು ನಿಮ್ಮನ್ನು ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಸೋಲಿಸಿದ್ದು ಎಂಬುದನ್ನು ವಿಶ್ವನಾಥ್ ಮರೆಯಬಾರದು ಎಂದು ಹೇಳಿದರು.
ಮೇ 23ರ ನಂತರ ಮೈತ್ರಿ ಸರ್ಕಾರ ಕೊಂಡಿ ಕಳಚಿ ಪತನವಾಗಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗೋದು ಖಚಿತ ಎಂದು ಹೇಳಿದರು.