ಲೋಕಸಭಾ ಚುನಾವಣಾ ಸಮರ ಆರಂಭವಾಗಿದೆ. ಇದೇ ವೇಳೆ ಅತೃಪ್ತ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಬೆಳಗಾವಿ : ಲೋಕಸಭಾ ಚುನಾವಣಾ ಬೆನ್ನಲ್ಲೇ, ಅತೃಪ್ತ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ಗೋಕಾಕ್ ನಲ್ಲಿ ಸಭೆ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಶೀಘ್ರದಲ್ಲೇ ಬಿಜೆಪಿಗೆ ತೆರಳಲಿದ್ದಾರೆ ಎನ್ನುವ ಗುಮಾನಿ ಇದ್ದು, ಇದೇ ವೇಳೆ ಚಿಕ್ಕೋಡಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಬೇಕೆ ಬೇಡವೇ ಎನ್ನುವ ವಿಚಾರ ಚರ್ಚಿಸಿದ್ದಾರೆ.
ಈ ಚುನಾವಣೆಯಲ್ಲಿ ಯಾರ ಪರವಾಗಿಯೂ ಕೂಡ ಚರ್ಚೆ ನಡೆಸದೇ ತಟಸ್ಥವಾಗಿ ಉಳಿಯಲು ರಮೇಶ ಜಾರಕಿಹೊಳಿ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ. ಗೋಕಾಕ್ ನಗರಸಭೆ ಕೆಲ ಸದಸ್ಯರ ಜತೆಗೆ ಚರ್ಚೆ ನಡೆಸಿದ್ದು, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಬೆಂಬಲ ನೀಡದಿರಲು ನಿರ್ಧಾರ ಮಾಡಿದ್ದಾರೆ.
ತಮ್ಮ ಬೆಂಬಲಿಗ ಕಾರ್ಯಕರ್ತರು ಹಾಗೂ ಹಲವು ಮುಖಂಡರ ಜತೆಗೆ ಚರ್ಚೆನಡೆಸಿದ್ದು, ಚುನಾವಣೆ ಬಳಿಕ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.