ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಸೀಟು ಹಂಚಿಕೆ ಸಂಬಂಧ ಇಂದು [ಸೋಮವಾರ] ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆ ಅಂತ್ಯವಾಗಿದೆ. ಸಭೆಯಲ್ಲಿ ಏನೆಲ್ಲ ಚರ್ಚೆಗಳು ನಡೆದವು, ಯಾವೆಲ್ಲ ನಿರ್ಧಾರಗಳನ್ನು ಕೈಗೊಳ್ಳಲಾಯಿತು? ಎನ್ನುವುದರ ಡಿಟೇಲ್ಸ್ ಇಲ್ಲಿದೆ.
ನವದೆಹಲಿ, [ಮಾ.11]: ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಗಳ ಮಧ್ಯೆ ಗೊಂದಲ ಇನ್ನೂ ಮುಂದುವರೆದಿದೆ.
ಈ ಸಂಬಂಧ ದೆಹಲಿಯಲ್ಲಿ ಇಂದು [ಸೋಮವಾರ] ನಡೆದ ಸ್ಕ್ರೀನಿಂಗ್ ಕಮಿಟಿ ಸಭೆ ಮುಕ್ತಾವಾಗಿದ್ದು, ದೋಸ್ತಿ ಸೀಟು ಹಂಚಿಕೆ ಬಹುತೇಕ ಓಕೆ ಆಗಿದಂತಾಗಿದೆ.
ಲೋಕಸಭಾ ಎಲೆಕ್ಷನ್:ಹೈಕಮಾಂಡ್ ಅಂಗಳದಲ್ಲಿ ರಾಜ್ಯ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ತುಮಕೂರು ಕ್ಷೇತ್ರವೊಂದನ್ನ ಬಿಟ್ಟು ಉಳಿದೆಲ್ಲಾ ಕಾಂಗ್ರೆಸ್ ಹಾಲಿ ಸಂಸದರು ಚುನಾವಣೆಗೆ ತಯಾರಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಜೆಡಿಎಸ್ ಗೆ 7 ಕ್ಷೇತ್ರಗಳನ್ನ ಬಿಟ್ಟು ಕೊಡಲು ಸಭೆಯಲ್ಲಿ ನಿರ್ಧಾರವಾಗಿದೆ. ಆರಂಭದಲ್ಲಿ 12 ಲೋಕಸಭಾ ಕ್ಷೇತ್ರಗಳು ಬೇಕು ಎಂದು ಪಟ್ಟು ಹಿಡಿದಿದ್ದ ಜೆಡಿಎಸ್ ಇದೀಗ ತನ್ನ ಪಟ್ಟು ಸಡಿಲಿಸಿದ್ದು. 7 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಆದ್ರೆ, ದೋಸ್ತಿಗಳ ಮಧ್ಯೆ ಕ್ಷೇತ್ರಗಳ ಚೌಕಾಸಿ ನಡೆದಿದೆ.
ಮೈಸೂರು ಇಲ್ಲ ತುಮಕೂರು ಈ ಎರಡು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದ್ರೆ ಜೆಡಿಎಸ್ ಮಾತ್ರ ಮೈಸೂರು ಹಾಗೂ ತುಮಕೂರು ಎರಡೂ ನಮಗೆ ಬೇಕು ಎಂದು ಪಟ್ಟುಹಿಡಿದಿದೆ.
ಸೀಟು ಹಂಚಿಕೆ ಬೇಡಿಕೆಯಲ್ಲಿ ಜೆಡಿಎಸ್ ನಾಯಕರು ಮೈಸೂರು ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ತಮ್ಮ ಸ್ವಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ಇದ್ರಿಂದ ಮೈಸೂರು ಕ್ಷೇತ್ರದ ಬಗ್ಗೆ ಕೈ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಈ ಬಗ್ಗೆ ನಾಳೆ [ಮಂಗಳವಾರ] ಅಹಮದಾಬಾದ್ ನಲ್ಲಿ ನಡೆಯಲಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಫೈನಲ್ ಆಗಲಿದ್ದು, ತುಮಕೂರು ಅಥವಾ ಮೈಸೂರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರ ಜೆಡಿಎಸ್ಗೆ ಏಳನೇ ಕ್ಷೇತ್ರವಾಗಿ ದೊರೆಯಲಿದೆ.
ಜೆಡಿಎಸ್ ಪಾಲಿನ ಕ್ಷೇತ್ರಗಳು
1. ಹಾಸನ
2. ಮಂಡ್ಯ
3. ತುಮಕೂರು/ಮೈಸೂರು
4. ಶಿವಮೊಗ್ಗ
5. ವಿಜಯಪುರ
6. ಬೆಂಗಳೂರು ಉತ್ತರ
ದೇಶದಲ್ಲಿ ಏ.11 ರಿಂದ ಆರಂಭವಾಗಿ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ. 18 (ಗುರುವಾರ), ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ. 23 (ಮಂಗಳವಾರ) ಮತದಾನ ನಡೆಯಲಿದೆ.