ಉಡುಪಿ: ಪ್ರಚಾರ ನಡೆಸ್ತಿದಾರೆ ಎಂದು ಸುಳ್ಳು ದೂರು ಕೊಟ್ಟವನಿಗೇನಾಯ್ತು?

By Web DeskFirst Published Apr 17, 2019, 11:38 PM IST
Highlights

ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಉಡುಪಿ ವಿಭಾಗದಲ್ಲಿ ಸಾಕಷ್ಟು ದೂರು ದಾಖಲಾಗಿದೆ. ದೂರುದಾರನ ಮೇಲೆಯೇ ದೂರು ದಾಖಲಾಗಿರುವುದು ವಿಚಿತ್ರ.

ಉಡುಪಿ[ಏ. 17]  ಒಂದೆಡೆ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ರಾಮನವಮಿ ಹಬ್ಬವನ್ನು ಬಳಸಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಮೇಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ಕುಂದಾಪುರದ ಬಿಜೆಪಿ ಶಾಸಕರ ಮೇಲೆ ಚುನಾವಣಾ ಪ್ರಚಾರದ ಬಗ್ಗೆ ಸುಳ್ಳು ದೂರು ನೀಡಿದ ದೂರುದಾರರ ಮೇಲೆಯೇ ಪ್ರಕರಣ ದಾಖಲಾಗಿದೆ.

ದೂರುದಾರನ ಮೇಲೆ ದೂರು:   ಲೋಕಸಭಾ ಚುನಾವಣೆಯ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಅ.15ರಂದು ರಾತ್ರಿ 8.30ಕ್ಕೆ ಚಂದ್ರ ಎಂಬವರು ಕರೆ ಮಾಡಿ ಇಲ್ಲಿನ ಶಿರಿಯಾರ ಕಲ್ಲು ಗಣಪತಿ ದೇವಸ್ಥಾನದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಜೆಪಿಯ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂದು ದೂರು ನೀಡಿದ್ದರು.

ವೋಟ್ ಕೇಳೋಕೆ ಹೋಗಿದ್ದ ಸಿ.ಟಿ.ರವಿಗೆ ಗ್ರಾಮಸ್ಥರಿಂದ ಸಖತ್ ಕ್ಲಾಸ್

ಅದರಂತೆ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ದೇವರ ರಂಗಪೂಜೆ ನಡೆಯುತ್ತಿದ್ದು, ಕೇವಲ 3 ಮಂದಿ ಭಕ್ತರು ಮಾತ್ರ ಇದ್ದರು. ಅಲ್ಲಿ ಯಾವುದೇ ಚುನಾವಣಾ ಪ್ರಚಾರ ನಡೆಯುತ್ತಿರಲಿಲ್ಲ, ವಾಹನ ನಿಂತಿರಲಿಲ್ಲ. ಚಂದ್ರ ಅವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಬಗ್ಗೆ  ಅಧಿಕಾರಿ ಅವರು ನೀಡಿದ ದೂರಿನಂತೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತರ ಬಳಕೆ -  ದೂರು
ಮಲ್ಪೆ ಸಮೀಪದ ಕೋಡಿಬೇಂಗ್ರೆಯಿಂದ ಗುಜ್ಜರಬೆಟ್ಟುವರೆಗೆ ಉಡುಪಿ ಶಾಸಕ ಕೆ.ರಘುಪತಿ  ಭಟ್ ಅವರು ಏ.15ರಂದು ಸಂಜೆ ಚುನಾವಣಾ ಆಯೋಗದ ಅನುಮತಿ ಇಲ್ಲದೇ ಪಾದಯಾತ್ರೆ ನಡೆಸಿದ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಈ ಪಾದಯಾತ್ರೆಯಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಭಾಗವಹಿಸಿದ್ದರು ಎಂದು ಫ್ಲೈಯಿಂಗ ಸ್ಕ್ವಾಡ್ ಅಧಿಕಾರಿ ಮೋಹನ್ ರಾಜ್ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!