
ಉಪವಾಸ ಸತ್ಯಾಗ್ರಹಗಳು ಅಹಿಂಸಾತ್ಮಕ ಪ್ರತಿಭಟನೆಯ ಪ್ರಬಲ ಅಸ್ತ್ರವಾಗಿ ಪ್ರಪಂಚದಾದ್ಯಂತ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಭಾರತದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಆಧುನಿಕ ರಾಜಕೀಯ ಅಭಿಯಾನಗಳವರೆಗೆ, ಅನೇಕ ಕಾರ್ಯಕರ್ತರು ತಮ್ಮ ಬೇಡಿಕೆಗಳತ್ತ ಗಮನ ಸೆಳೆಯಲು ಈ ಉಒಪವಾಸ ಸತ್ಯಾಗ್ರಹ ಆರಿಸಿಕೊಂಡಿದ್ದಾರೆ. ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಜಿರಳೆ ಜನತಾ ಪಕ್ಷದ ಪ್ರತಿಭಟನೆ ಮತ್ತು ಹಲವು ದಿನಗಳ ಉಪವಾಸದ ಸತ್ಯಾಗ್ರಹದ ನಂತರ, ಸೋನಮ್ ವಾಂಗ್ಚುಕ್ ಅವರ ಆರೋಗ್ಯದ ಕುರಿತು ಕಳವಳಗಳು ಹೆಚ್ಚಿವೆ. ಹಾಗಾದರೆ ಅತಿ ಹೆಚ್ಚು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ದಾಖಲೆ ಬರೆದವರು ಯಾರು ಎಂದು ನೋಡೋಣ ಬನ್ನಿ.
ಇದುವರೆಗಿನ ಅತಿ ದೀರ್ಘವಾದ ಉಪವಾಸ ಸತ್ಯಾಗ್ರಹವವನ್ನು ಭಾರತದ ಇರೋಮ್ ಚಾನು ಶರ್ಮಿಳಾ ಕೈಗೊಂಡಿದ್ದಾರೆ ಎನ್ನಲಾಗಿದೆ. ಮಣಿಪುರದ ಉಕ್ಕಿನ ಮಹಿಳೆ ಎಂದು ಕರೆಯಲ್ಪಡುವ ಶರ್ಮಿಳಾ, ನವೆಂಬರ್ 2, 2000 ರಿಂದ ಆಗಸ್ಟ್ 9, 2016 ರವರೆಗೆ ಉಪವಾಸ ಸತ್ಯಾಗ್ರಹ ನಡೆಸಿದರು. ಇದು ಸರಿಸುಮಾರು 5793 ದಿನಗಳು ನಡೆಸಿದ್ದಾರೆ.
ಮಣಿಪುರದ ಮಾಲೋಮ್ ಘಟನೆಯಲ್ಲಿ ಅಸ್ಸಾಂ ರೈಫಲ್ಸ್ ಸಿಬ್ಬಂದಿ 10 ನಾಗರಿಕರನ್ನು ಕೊಂದಿದ್ದಾರೆ ಎನ್ನಲಾಗಿದೆ. ಸಂಘರ್ಷ ವಲಯಗಳಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಪಡೆಗಳಿಗೆ ಕಾನೂನು ಅತಿಯಾದ ಅಧಿಕಾರ ನೀಡುತ್ತದೆ ಎಂದು ವಾದಿಸಿ, ಸಶಸ್ತ್ರ ಪಡೆಗಳ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಅವರು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಶರ್ಮಿಳಾ ತಮ್ಮ ಪ್ರತಿಭಟನೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಉಪವಾಸ ಸತ್ಯಾಗ್ರಹ ಆರಂಭಿಸಿದ ಸ್ವಲ್ಪ ಸಮಯದ ನಂತರ, ಅಧಿಕಾರಿಗಳು ಶರ್ಮಿಳಾ ಅವರನ್ನು ಆಗ ಜಾರಿಯಲ್ಲಿದ್ದ ಕಾನೂನಿನಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿಸಿದ್ದರು. ಅವರ ನ್ಯಾಯಾಂಗ ಬಂಧನದ ಸಮಯದಲ್ಲಿ, ವೈದ್ಯರು ಅವರಿಗೆ ನಾಸೊಗ್ಯಾಸ್ಟ್ರಿಕ್ ಟ್ಯೂಬ್ ಮೂಲಕ ಬಲವಂತವಾಗಿ ಆಹಾರ ನೀಡುವ ಮೂಲಕ ಅವರನ್ನು ಜೀವಂತವಾಗಿಸಿದರು. ಅವರು ತಮ್ಮ ಪ್ರತಿಭಟನೆಯ ಸಮಯದಲ್ಲಿ ಎಂದಿಗೂ ಸ್ವಯಂಪ್ರೇರಣೆಯಿಂದ ಘನ ಆಹಾರವನ್ನು ಸೇವಿಸಲಿಲ್ಲ.
16 ವರ್ಷಗಳ ನಿರಂತರ ಪ್ರತಿಭಟನೆಯ ನಂತರ, ಶರ್ಮಿಳಾ ಅವರು ತಾವು ನಿರೀಕ್ಷಿಸಿದ ರಾಜಕೀಯ ಬದಲಾವಣೆಯನ್ನು ತರಲು ಕೇವಲ ತಮ್ಮ ಉಪವಾಸ ಸತ್ಯಾಗ್ರಹ ಸಾಕಾಗುವುದಿಲ್ಲ ಎಂದು ತೀರ್ಮಾನಿಸಿದರು. ಆಗಸ್ಟ್ 9, 2016 ರಂದು, ಜೇನುತುಪ್ಪವನ್ನು ಸವಿಯುವ ಮೂಲಕ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿ, ಪ್ರಜಾಪ್ರಭುತ್ವ ಮತ್ತು ಚುನಾವಣಾ ರಾಜಕೀಯದ ಮೂಲಕ ತಮ್ಮ ಅಭಿಯಾನ ಮುಂದುವರಿಸುವುದಾಗಿ ಘೋಷಿಸಿದರು.
ಸತ್ಯಾಗ್ರಹಗಳ ದೀರ್ಘಾಯುಷ್ಯ ಮತ್ತು ಪ್ರಭಾವದಿಂದಾಗಿ ಇನ್ನೂ ಅನೇಕ ಉಪವಾಸ ಸತ್ಯಾಗ್ರಹಗಳು ಇತಿಹಾಸದ ಭಾಗವಾಗಿವೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಲಾಹೋರ್ ಜೈಲಿನಲ್ಲಿ 116 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಎಲ್ಲ ಕೈದಿಗಳಿಗೆ ಸಮಾನ ಚಿಕಿತ್ಸೆ ಮತ್ತು ಉತ್ತಮ ಸೌಲಭ್ಯ ಒತ್ತಾಯಿಸಿದ್ದರು. ಕ್ರಾಂತಿಕಾರಿ ಜತಿನ್ ದಾಸ್ 63 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಹಲವಾರು ಉಪವಾಸ ಸತ್ಯಾಗ್ರಹಗಳು ಸುಮ್ಮನೆ ಅಲ್ಲ ಯಶ ಗಳಿಸಿಯೇ ಇತಿಹಾಸದಲ್ಲಿ ದಾಖಲಾಗಿದೆ.