Azadi Ka Amrut Mahotsav: 2047ರ ಭಾರತ: ಪ್ರಧಾನಿಗೆ ಪತ್ರ ಬರೆದ ಶಿರಸಿ ಪುಟಾಣಿಗಳು

By Kannadaprabha NewsFirst Published Dec 5, 2021, 2:39 PM IST
Highlights

*   ತಮ್ಮ ಮನಸ್ಸಿನ ಆಲೋಚನೆಗಳನ್ನು ಕಾರ್ಡ್‌ನಲ್ಲಿ ರವಾನಿಸಿದ ವಿದ್ಯಾರ್ಥಿಗಳು
*   ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ 10 ಸಾವಿರ ವಿದ್ಯಾರ್ಥಿಗಳಿಂದ ಪತ್ರ
*   ಆಗ್ರಹಗಳನ್ನು ಹೊತ್ತು ದೆಹಲಿಯತ್ತ ಮುಖ ಮಾಡಿದ ಅಂಚೆ ಕಾರ್ಡ್‌ಗಳು 
 

ಮಂಜುನಾಥ ಸಾಯೀಮನೆ

ಶಿರಸಿ(ಡಿ.05): 2047ರಲ್ಲಿ ಭಾರತದ(India) ಸ್ಥಿತಿ ಹೇಗಿರಬೇಕು? ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಈ ಪುಟಾಣಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ತಮ್ಮ ಮನಸ್ಸಿನ ಆಲೋಚನೆಗಳನ್ನು ನೇರವಾಗಿ ಪ್ರಧಾನಿಗೇ(Prime Minister) ತಿಳಿಸಿದ್ದಾರೆ. ಹೌದು, ಉತ್ತರ ಕನ್ನಡ(Uttara Kannada) ಜಿಲ್ಲೆಯ ಶಿರಸಿ(Sirsi) ತಾಲೂಕಿನ ಸಂಪಖಂಡದ ಗಜಾನನ ಪ್ರೌಢಶಾಲೆ ಮತ್ತು ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿಗಳು(Students) ಶನಿವಾರ ಒಂದೆಡೆ ಕುಳಿತು ಅಂಚೆಕಾರ್ಡಿನಲ್ಲಿ ತಮ್ಮ ಮನದಾಳದ ಇಂಗಿತವನ್ನು ಬರೆದುಕೊಂಡಿದ್ದಾರೆ.

2047ನೇ ಇಸವಿಯ ವೇಳೆ ಈಗಿದ್ದವರಲ್ಲಿ ಯಾರು ಇರುತ್ತಾರೋ ಇಲ್ಲವೋ ತಿಳಿದಿಲ್ಲ. ಆದರೆ, ಇಂದು ಶಾಲೆಯಲ್ಲಿ(School) ಓದುತ್ತಿರುವ ವಿದ್ಯಾರ್ಥಿಗಳು ಅಂದಿನ ನಾಗರೀಕರಾಗಿರುತ್ತಾರೆ. ಅಂದಿನ ಪರಿಸ್ಥಿತಿಗಳನ್ನು ಅವರೇ ನಿಭಾಯಿಸಬೇಕಾಗುತ್ತದೆ. ಹೀಗಾಗಿ, ಅಂದಿನ ಭಾರತಕ್ಕೆ ಇಂದಿನ ಸಿದ್ಧತೆಗಳು, ಮಾರ್ಗ ಹೇಗಿರಬೇಕು ಎಂಬ ಅದ್ಭುತ ಕಲ್ಪನೆಗಳು ಮಕ್ಕಳ ತಲೆಯಿಂದ ನೇರವಾಗಿ ಪ್ರಧಾನಿ ತಲುಪಲಿವೆ.

School Fee: ಶಾಲಾ ಶುಲ್ಕ ಕಟ್ಟದ ಫೋಷಕರಿಗೆ ಬಿಗ್ ಶಾಕ್

ಆಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ(Postal Department) ಶಿಕ್ಷಣ ಇಲಾಖೆಯೊಂದಿಗೆ(Education Department) ಹಮ್ಮಿಕೊಂಡಿದ್ದ ದೇಶಾದ್ಯಂತ 75 ಲಕ್ಷ ಪೋಸ್ಟ್‌ ಕಾರ್ಡ್‌ ಅಭಿಯಾನವನ್ನು(Postcard Campaign) ಹಮ್ಮಿಕೊಂಡಿದೆ. 4ರಿಂದ 12ನೇ ತರಗತಿ ವರೆಗಿನ ಮಕ್ಕಳು(Children) ಪೋಸ್ಟ್‌ಕಾರ್ಡಿನಲ್ಲಿ ತಮ್ಮ ವಿಚಾರವನ್ನು ಬರೆದು ಪ್ರಧಾನಮಂತ್ರಿಗೆ ತಿಳಿಸಲಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಎಲೆಮರೆಯ ಕಾಯಿಗಳು ಅಥವಾ ನನ್ನ ದೃಷ್ಟಿಯ 2047ರ ಭಾರತ ಇವುಗಳಲ್ಲಿ ಯಾವುದಾದರೊಂದು ವಿಷಯದ ಕುರಿತು ಅಭಿಪ್ರಾಯವನ್ನು ವಿದ್ಯಾರ್ಥಿಗಳು ಬರೆಯಬೇಕಿದೆ. ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಡಿ. 1ರಿಂದ ಈ ಅಭಿಯಾನ ಆರಂಭಗೊಂಡಿದ್ದು, ಡಿ. 20ರ ವರೆಗೆ ಈ ಅಭಿಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಶಿರಸಿಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 10 ಸಾವಿರ ವಿದ್ಯಾರ್ಥಿಗಳು ಪತ್ರ(Letter) ಬರೆಯುತ್ತಿದ್ದಾರೆ.

ಕನ್ನಡ(Kannada), ಹಿಂದಿ(Hindi) ಮತ್ತು ಇಂಗ್ಲಿಷ್‌(English) ಭಾಷೆಗಳಲ್ಲಿ ಕಾರ್ಡ್‌ಗಳನ್ನು ಬರೆಯಬಹುದಾಗಿದ್ದು, ಪ್ರತಿ ಶಾಲೆಯ ಆಯ್ದ ಹತ್ತು ಕಾರ್ಡ್‌ಗಳನ್ನು ಪ್ರಧಾನಿಗಳ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗುವುದು. ಮಕ್ಕಳು ಬರೆದ ಎಲ್ಲ ಕಾರ್ಡ್‌ಗಳನ್ನು ದೆಹಲಿಯ ಪ್ರಧಾನ ಮಂತ್ರಿಗಳ ಕಚೇರಿಗೆ ಕಳುಹಿಸಲಾಗುತ್ತಿದೆ.

ಭಾರತ ಸಂಸ್ಕೃತಿ ಮತ್ತು ಕಲೆಗೆ ಪ್ರಸಿದ್ಧವಾಗಿದೆ. ಪ್ರಪಂಚದಲ್ಲಿ ಭಾರತೀಯ ಸಂಸ್ಕೃತಿಗೆ(Indian Culture) ಸದಾ ಬೆಲೆ ಇದೆ. 2047ರ ಹೊತ್ತಿಗೆ ಭಾರತ ಪ್ರಗತಿ ಹೊಂದಿದ ರಾಷ್ಟ್ರವಾಗಿ ಬದಲಾಗಿದ್ದರೂ, ನಮ್ಮ ಸಂಸ್ಕೃತಿ, ನೆಲೆಗಟ್ಟಿನಲ್ಲಿ, ನಮ್ಮತನ ಉಳಿಸಿಕೊಂಡೇ ಪ್ರಗತಿ ಹೊಂದಬೇಕು ಎಂದು ಕೆಲವು ವಿದ್ಯಾರ್ಥಿಗಳು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರೋಗ-ರುಜನಿ ಇಂದಿನ ದೊಡ್ಡ ಆತಂಕ. ಮುಂದಿನ 25 ವರ್ಷಗಳಲ್ಲಿ ಭಾರತದ ವೈದ್ಯಕೀಯ ಕ್ಷೇತ್ರ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾಗಬೇಕು. ಈ ಮೂಲಕ ಆತಂಕರಹಿತ, ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕು ಎಂದು ಕೆಲವು ವಿದ್ಯಾರ್ಥಿಗಳು ತಮ್ಮ ಭರವಸೆ ವ್ಯಕ್ತಪಡಿಸಿದ್ದಾರೆ. ದೇಶದ ಅಭಿವೃದ್ಧಿಗೆ ನಾವೇನು ಕೊಡುಗೆ ನೀಡಲಿದ್ದೇವೆ ಎಂದೂ ಕೆಲವು ವಿದ್ಯಾರ್ಥಿಗಳು ಪತ್ರದಲ್ಲಿ ಪ್ರಧಾನಿಗೆ ಬರೆದಿದ್ದಾರೆ.

ಸಂಪಖಂಡದ ಗಜಾನನ ಪ್ರೌಢಶಾಲೆ ವಿದ್ಯಾರ್ಥಿನಿ ಅಂಕಿತಾ ಸತೀಶ ಹೆಗಡೆ ‘ಕನ್ನಡಪ್ರಭ’ದೊಂದಿಗೆ(Kannada Prabha) ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾಳೆ. ಇನ್ನು 25 ವರ್ಷಗಳ ಬಳಿಕ ಭಾರತ ಹೇಗೆ ಇರಬೇಕು ಎಂಬುದನ್ನು ತಿಳಿಸಿಕೊಡಲು ನಮಗೆ ಮುಕ್ತ ಅವಕಾಶ ಲಭಿಸಿದೆ. ಆ ವೇಳೆ ದೇಶದ ಜನಸಂಖ್ಯೆ ಇನ್ನಷ್ಟುಹೆಚ್ಚಿರಬಹುದು. ಆದರೆ, ಜನಸಂಖ್ಯೆ ಸಮಸ್ಯೆ ಆಗದೇ ಸಂಪತ್ತು ಹೇಗೆ ಆಗಬೇಕು ಎಂದು ಇಂದಿನಿಂದಲೇ ಚಿಂತನೆ ಮಾಡಬೇಕು. ಎಲ್ಲ ಕ್ಷೇತ್ರಗಳಲ್ಲಿ ಭಾರತವೇ ಮುಂಚೂಣಿಯಲ್ಲಿರಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದಿದ್ದಾಳೆ.

Good news for SSLC Students: ಶೇ. 20 ರಷ್ಟು ಪಠ್ಯ ಕಡಿತಕ್ಕೆ ಮುಂದಾದ ಶಿಕ್ಷಣ ಇಲಾಖೆ

ಗೋಳಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಹಾಲಕ್ಷ್ಮೀ ನಾಯ್ಕ, 2047ರ ವೇಳೆ ಪ್ರತಿಭೆ, ಯೋಗ್ಯತೆಯೇ ಮೀಸಲಾತಿಯ(Reservation) ಮಾನದಂಡ ಆಗಬೇಕು. ಮಹಿಳೆಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕರೂ ಆಕೆಯೇ ತನ್ನ ಇತಿ-ಮಿತಿ ಅರಿತು ನಡೆದುಕೊಳ್ಳುವ ಸಮಾಜ ನಿರ್ಮಾಣವಾಗಬೇಕು ಎಂದಿದ್ದಾಳೆ.

ವಿದ್ಯಾರ್ಥಿಗಳ ಹತ್ತು ಹಲವು ಕಲ್ಪನೆಗಳು, ಆಗ್ರಹಗಳನ್ನು ಹೊತ್ತ ಅಂಚೆ ಕಾರ್ಡ್‌ಗಳು ದೆಹಲಿಯತ್ತ ಮುಖ ಮಾಡಿವೆ.

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ವಿದ್ಯಾರ್ಥಿಗಳ ಪತ್ರ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಬುದ್ಧಿವಂತ ವಿದ್ಯಾರ್ಥಿಗಳು ಶಿರಸಿಯಲ್ಲಿದ್ದು, ಅವರ ಉತ್ತಮ ಆಲೋಚನೆಗಳು ಅಂಚೆ ಇಲಾಖೆ ಮೂಲಕ ಪ್ರಧಾನಿಗಳಿಗೆ ತಲುಪುತ್ತಿವೆ ಎಂದು ಶಿರಸಿ ಅಂಚೆ ಇಲಾಖೆ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್‌ ವಿನಾಯಕ ಧೀರಣ್ಣ ತಿಳಿಸಿದ್ದಾರೆ.  
 

click me!