ಆನ್‌ಲೈನ್‌ನಲ್ಲೇ ಪಿಎಚ್‌ಡಿ ಕೋರ್ಸ್‌ : ಮೈಸೂರು ವಿವಿ ನಿರ್ಧಾರ

By Kannadaprabha NewsFirst Published Jul 14, 2021, 12:42 PM IST
Highlights
  • ಪಿಎಚ್‌.ಡಿ ಕೋರ್ಸ್‌ ವರ್ಕ್ ತರಗತಿಗಳನ್ನು ಆನ್‌ಲೈನ್‌ನಲ್ಲಿಯೇ ನಡೆಸಲು ನಿರ್ಧಾರ
  • ಮೈಸೂರು ವಿಶ್ವವಿದ್ಯಾನಿಲಯದಿಂದ ಆನ್‌ಲೈನ್‌ ಕೋರ್ಸ್‌ಗೆ ನಿರ್ಧಾರ
  • ಪ್ರಸಕ್ತ ವರ್ಷ ಮಾತ್ರ ಆನ್‌ಲೈನ್‌ನಲ್ಲಿ ಪಿಎಚ್‌.ಡಿ ಕೋರ್ಸ್‌

ಮೈಸೂರು (ಜು.14):  ಈ ವರ್ಷ ಪಿಎಚ್‌.ಡಿ ಕೋರ್ಸ್‌ ವರ್ಕ್ ತರಗತಿಗಳನ್ನು ಆನ್‌ಲೈನ್‌ನಲ್ಲಿಯೇ ನಡೆಸಲು ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಶಿಕ್ಷಣ ಮಂಡಳಿಯ ಸಭೆಯಲ್ಲಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಮಾತನಾಡಿ, 2020-21ನೇ ಸಾಲಿನಲ್ಲಿ ನಡೆಯಬೇಕಿದ್ದ ಪಿಎಚ್‌.ಡಿ ಕೋರ್ಸ್‌ ವರ್ಕ್ ತರಗತಿಗಳನ್ನು ಕೊರೋನಾ ಹಿನ್ನೆಲೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ, ತರಗತಿಗಳು ವಿಳಂಬವಾಗುತ್ತಿದ್ದ ಕಾರಣ ಕೆಲವು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಡೆಸಲು ಕೋರಿದ್ದರು. ಅಲ್ಲದೆ, ವಿದೇಶಿ ವಿದ್ಯಾರ್ಥಿಗಳು ಆಫ್‌ಲೈನ್‌ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ. ಆದ್ದರಿಂದ ವಿಶೇಷ ಸಂದರ್ಭವೆಂದು ಪರಿಗಣಿಸಿ ಪ್ರಸಕ್ತ ವರ್ಷ ಮಾತ್ರ ಆನ್‌ಲೈನ್‌ನಲ್ಲಿ ಪಿಎಚ್‌.ಡಿ ಕೋರ್ಸ್‌ ನಡೆಸಲಾಗುತ್ತದೆ. ಇದೇ ವೇಳೆ ಆಫ್‌ಲೈನ್‌ ತರಗತಿಗಳು ಅಭ್ಯರ್ಥಿಗಳಿಗೆ ಲಭ್ಯವಿರಲಿವೆ ಎಂದರು.

Latest Videos

ವಿಶೇಷ ಕೋರ್ಸ್‌ಗಳಿಗೆ ಅನುಮೋದನೆ

ಹೂಟಗಳ್ಳಿ ಕೈಗಾರಿಕಾ ವಲಯದಲ್ಲಿರುವ ಜಿಇಟಿಎಸ್‌ ಅಕಾಡೆಮಿಗೆ ವಿಶೇಷ  ಯೋಜನೆಗಳ ಅಡಿಯಲ್ಲಿ ಕೆಲವು ಕೋರ್ಸ್‌ಗಳನ್ನು ಆರಂಭಿಸಲು ಮೈಸೂರು ವಿವಿಯಿಂದ ಮಾನ್ಯತೆ ನೀಡಲು ಅಧಿಸೂಚನೆ ಹೊರಡಿಸಿದೆ. ಈ ಸಂಬಂಧ 2 ಅಧ್ಯಯನ ಮಂಡಳಿಗಳು ಶಿಫಾರಸ್ಸು ಮಂಡಿಸಿದ್ದು, ಬಿ.ಕಾಂನಿಂದ ಇ-ಕಾಮರ್ಸ್‌ ಅಂಡ್‌ ಡಿಜಿಟಲ್‌ ಮಾರ್ಕೆಟಿಂಗ್‌, ಫಿನಾನ್ಸ್‌ ಅಂಡ್‌ ಇನ್‌ವೆಸ್ಟ್‌ಮೆಂಟ್‌, ಇಂಟರ್‌ನ್ಯಾಷನಲ್‌ ಅಕೌಂಟಿಂಗ್‌ ಅಂಡ್‌ ಫಿನಾನ್ಸ್‌, ಬಿಬಿಎ ನಿಂದ ಬಿಜಿನೆಸ್‌ ಅನಾಲಿಟಿಕ್ಸ್‌, ಸಸ್ಟೈನಬಲ್‌ ಡೆವಲಪ್‌ಮೆಂಟ್‌ ಅಂಡ್‌ ಎನ್‌ವಿರಾನ್‌ಮೆಂಟ್‌ ಮ್ಯಾನೇಜ್‌ಮೆಂಟ್‌ ಹಾಗೂ ಇಂಟರ್‌ನ್ಯಾಷನಲ್‌ ಬಿಜಿನೆಸ್‌ ಕೋರ್ಸ್‌ಗಳ ರೆಗ್ಯುಲೇಶನ್‌ ಪಠ್ಯಕ್ರಮಗಳನ್ನು ಸಿಂಡಿಕೇಟ್‌ ಸದಸ್ಯರ ಅನುಮತಿಯೊಂದಿಗೆ ಅನುಮೋದಿಸಲಾಯಿತು.

ಮೈಸೂರು ವಿವಿಯಿಂದ ರ್ಯಾಪಿಡ್ ಡಿಟೆಕ್ಷನ್ ಕಿಟ್ ಸಂಶೋಧನೆ

ಮೈಸೂರು ವಿವಿ ಕುಲಸಚಿವ ಪ್ರೊ.ಆರ್‌. ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ. ಜ್ಞಾನಪ್ರಕಾಶ್‌, ಸಿಂಡಿಕೇಟ್‌ ಸದಸ್ಯರಾದ ಪ್ರೊ. ನಾಗರಾಜ್‌, ಪ್ರೊ. ಅಪ್ಪಾಜಿಗೌಡ, ಪ್ರೊ. ವೆಂಕಟೇಶ್‌, ಪ್ರೊ. ರಮೇಶ್‌, ನಿರಂಜನ್‌, ನಿಂಗಮ್ಮ ಸಿ. ಬೆಟ್‌ಸೂರ್‌ ಇದ್ದರು.

ಹಿಂದೂ ಇಸಂ ಕೋರ್ಸ್‌ ಆರಂಭಿಸಿ- ಧರ್ಮಸೇನ

ಪ್ರಸ್ತುತದಲ್ಲಿ ಹಿಂದೂ ಇಸಂ ಎಂದರೇನು? ಅದರ ಆಚರಣೆ ಹೇಗೆ? ಎಂಬುದರ ಬಗ್ಗೆ ತಿಳಿಯುವುದು ಅವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಯಲ್ಲಿ ‘ಹಿಂದೂ ಇಸಂ ಅಧ್ಯಯನ ಕೇಂದ್ರ’ ಸ್ಥಾಪಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಆರ್‌. ಧರ್ಮಸೇನ ಒತ್ತಾಯಿಸಿದರು.

ಮೈಸೂರು ವಿವಿ ಶಿಕ್ಷಣ ಮಂಡಳಿಯ ಮೊದಲ ಸಾಮಾನ್ಯ ಸಭೆಯಲ್ಲಿ ‘ಬುದ್ಧ ಅಧ್ಯಯನ ಕೇಂದ್ರ’ ಸ್ಥಾಪಿಸುವ ಸಂಬಂಧ ಪ್ರತಿಕ್ರಿಯಿಸಿದ ಅವರು, ಬುದ್ಧ ಅಧ್ಯಯನಕ್ಕೆ ಪ್ರತ್ಯೇಕ ಕೇಂದ್ರ ತೆರೆಯುವಂತೆ, ‘ಹಿಂದೂ ಇಸಂ’ ಬಗ್ಗೆ ಅಧ್ಯಯನ ನಡೆಸಲು ಚಿಂತಿಸಬೇಕು. ಕೆಲವೊಂದು ಅಧ್ಯಯನ ಪೀಠಗಳು ಇದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಅವುಗಳ ನಡಾವಳಿಯ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದರು.

ಹಳ್ಳಿ ಮಕ್ಕಳ ಇಂಟರ್ನೆಟ್‌ ಸಮಸ್ಯೆಗೆ ಶೀಘ್ರ ಪರಿಹಾರ

ಇದಕ್ಕೆ ಪೂರಕವಾಗಿ ಮಾತನಾಡಿದ ರಮೇಶ್‌, ‘ಕೆಲವು ವಿವಿಗಳಲ್ಲಿ ಬೌದ್ಧ ಧರ್ಮ ಅಧ್ಯಯನ ಸ್ವತಂತ್ರ ಕೋರ್ಸ್‌ ಆಗಿದೆ. ನಮ್ಮಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ‘ಬುದ್ಧ ಧಮ್ಮ ಎಂದು ನಾಮಕರಣ ಮಾಡಬೇಕು’ ಎಂದು ಸಲಹೆ ನೀಡಿದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನ್‌ಕುಮಾರ್‌ ಮಾತನಾಡಿ, ಧರ್ಮದ ವಿಚಾರದಲ್ಲಿ ಕೆಲವೊಂದು ಸೂಕ್ಷ್ಮತೆಗಳಿರಬೇಕಾಗುತ್ತವೆ. ಇಲ್ಲದಿದ್ದರೆ ಜೈನ್‌, ಸಿಖ್‌ ಹಾಗೂ ಕ್ರೈಸ್ತ ಧರ್ಮಕ್ಕೂ ಒಂದೊಂದು ಅಧ್ಯಯನ ಕೇಂದ್ರ ಸ್ಥಾಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೈವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌, ಬುದ್ಧ ಧಮ್ಮ ಅಧ್ಯಯನ, ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲೇ ನಡೆಯುತ್ತಿದೆ. ಬುದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ ಸರ್ಕಾರದಿಂದ ಅನುದಾನ ಬರುವುದು ತಡವಾಗಲಿದೆ. ಅಲ್ಲಿಯವರೆಗೂ ಮುನ್ನಡೆಸಲು ಮೈವಿವಿಯಿಂದಲೇ 5 ಲಕ್ಷ ರು. ಗಳನ್ನು ಮೀಸಲಿಡಲಾಗಿದೆ. ಸದ್ಯ ಯಾವುದೇ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಆಕ್ಷೇಪವಿಲ್ಲ. ಈ ವಿಷಯವನ್ನು ಡೀನ್‌ ಅವರ ಸಮಿತಿಯಲ್ಲಿ ಪ್ರಸ್ತಾಪಿಸಿ, ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಮೈವಿವಿಯಿಂದಲೇ 5 ಲಕ್ಷ ರು. ಗಳನ್ನು ಮೀಸಲಿಡಲಾಗಿದೆ. ಸದ್ಯ ಯಾವುದೇ ಅಧ್ಯಯನ ಕೇಂದ್ರಗಳ ಸ್ಥಾಪನೆಗೆ ಆಕ್ಷೇಪವಿಲ್ಲ. ಈ ವಿಷಯವನ್ನು ಡೀನ್‌ ಅವರ ಸಮಿತಿಯಲ್ಲಿ ಪ್ರಸ್ತಾಪಿಸಿ, ನಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.

click me!