Corona Crisis: ಶಾಲೆಗಳಲ್ಲಿ ಕೊರೋನಾ ಸ್ಫೋಟ: ಒಂದೇ ದಿನ 850 ಕೇಸ್‌

By Kannadaprabha NewsFirst Published Jan 15, 2022, 4:50 AM IST
Highlights

*    ಉಡುಪಿ, ಹಾಸನ ಜಿಲ್ಲೆಗಳಲ್ಲಿ ಅತಿ ಹೆಚ್ಚು ತಲಾ 139 ಕೇಸ್‌
*   10 ದಿನಗಳಲ್ಲಿ 2300ಕ್ಕೂ ಹೆಚ್ಚು ವಿದ್ಯಾರ್ಥಿ, ಶಿಕ್ಷಕರಿಗೆ ಪಾಸಿಟಿವ್‌
*   ರಾಜ್ಯದಲ್ಲಿ ಶಾಲೆಗಳನ್ನು ಬಂದ್‌ ಮಾಡಿದ ಜಿಲ್ಲೆಗಳ ಸಂಖ್ಯೆ ಐದಕ್ಕೇರಿಕೆ 
 

ಬೆಂಗಳೂರು(ಜ.15):  ರಾಜ್ಯಾದ್ಯಂತ(Karnataka) ಶಾಲಾ ಕಾಲೇಜುಗಳಲ್ಲಿ(School-Colleges) ಭಾರಿ ಸಂಖ್ಯೆಯಲ್ಲಿ ಕೊರೋನಾ(Coronavirus) ಪತ್ತೆಯಾಗುತ್ತಿದ್ದು ಶುಕ್ರವಾರ ಒಂದೇ ದಿನ 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ.  ಈ ಮೂಲಕ ಕಳೆದ 10 ದಿನಗಳಲ್ಲಿ ಸೋಂಕಿಗೆ ತುತ್ತಾದವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 2319ಕ್ಕೇರಿದೆ. ಹಾಸನ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ತಲಾ 139 ಪಾಸಿಟಿವ್‌ ವರದಿಗಳು ಬಂದಿವೆ. ಅವಿಭಜಿತ ಬಳ್ಳಾರಿ(ಬಳ್ಳಾರಿ+ವಿಜಯನಗರ) ಜಿಲ್ಲೆಯಲ್ಲಿ ಒಟ್ಟಾರೆ 197 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬುಧವಾರ ಒಂದೇ ದಿನದಲ್ಲಿ 298 ವಿದ್ಯಾರ್ಥಿಗಳಿಗೆ(Students)ಪಾಸಿಟಿವ್‌ ಬಂದಿದ್ದರೆ, ಗುರುವಾರ ಈ ಸಂಖ್ಯೆ 392ಕ್ಕೇರಿದೆ. ಆದರೆ ಶುಕ್ರವಾರ ಈ ಸಂಖ್ಯೆ ದ್ವಿಗುಣಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

Corona Update ಕರ್ನಾಟಕದಲ್ಲಿ ಕೊರೋನಾ ಏರಿಕೆ, ಸಾವಿನ ಸಂಖ್ಯೆಯಲ್ಲೂ ಹೆಚ್ಚಳ

ಉಡುಪಿ, ಹಾಸನದಲ್ಲಿ ಹೆಚ್ಚು: 

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಪತ್ತೆಯಾದ 497 ಮಂದಿ ಕೋವಿಡ್‌ ಸೋಂಕಿತರಲ್ಲಿ 139 ಮಂದಿ ಜಿಲ್ಲೆಯ ವಿವಿಧ ಶಾಲೆ ಕಾಲೇಜು ಮತ್ತು ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್‌(Covid19) ಅಲೆಯಲ್ಲಿ ಒಟ್ಟು 1432 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾದಂತಾಗಿದೆ. ಇನ್ನು ಹಾಸನ ಜಿಲ್ಲೆಯೊಂದರಲ್ಲೇ ಶುಕ್ರವಾರ 139 ವಿದ್ಯಾರ್ಥಿಗಳು ಮತ್ತು 59 ಶಿಕ್ಷಕರಲ್ಲಿ(Teachers) ಕೊರೋನಾ ದೃಢಪಟ್ಟಿದೆ.

ಎರಡು ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇನ್ನುಳಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ 77 ವಿದ್ಯಾರ್ಥಿಗಳು, ತುಮಕೂರಿನಲ್ಲಿ 43, ಬಾಗಲಕೋಟೆಯಲ್ಲಿ 23, ಚಿತ್ರದುರ್ಗ 15, ಉತ್ತರ ಕನ್ನಡ 14, ಗದಗ 8, ಹುಬ್ಬಳ್ಳಿಯಲ್ಲಿ 7 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌ ವರದಿ ಬಂದಿದೆ. ಧಾರವಾಡ ಜಿಲ್ಲೆಯಲ್ಲಿ 8 ವಿದ್ಯಾರ್ಥಿಗಳು ಮತ್ತು 3 ಶಿಕ್ಷಕರಿಗೆ, ರಾಮನಗರ ಜಿಲ್ಲೆಯಲ್ಲಿ 13 ವಿದ್ಯಾರ್ಥಿಗಳು ಮತ್ತು ಐವರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ.

ಕೊಪ್ಪಳ ಜಿಲ್ಲೆ ಕುಕನೂರು ಜವಾಹರ ನವೋದಯ ವಿದ್ಯಾಲಯದ 33 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಂಷಾಪುರ ಪ್ರಾಥಮಿಕ ಶಾಲೆಯ 18 ವಿದ್ಯಾರ್ಥಿಗಳು ಮತ್ತು ಒಬ್ಬ ಶಿಕ್ಷಕನಿಗೆ ಶುಕ್ರವಾರ ಕೊರೋನಾ ದೃಢಪಟ್ಟಿದೆ. ದೊಡ್ಡಬಳ್ಳಾಪುರ ಖಾಸಗಿ ಶಾಲೆಯಲ್ಲಿ 25 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೆಬೆನ್ನೂರು ಪದವಿ ಪೂರ್ವ ಕಾಲೇಜಿನಲ್ಲಿ 15 ಮಕ್ಕಳು, ತುಮಕೂರು ಜಿಲ್ಲೆ ಕಾಟೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 20 ಮಕ್ಕಳು, ಓಬಳ್ಳಾಪುರ ಶಾಲೆಯಲ್ಲಿ 5 ಮಕ್ಕಳಿಗೆ ಪಾಸಿಟಿವ್‌ ವರದಿ ಬಂದಿದೆ.

Corona Crisis: 200 ವರ್ಷಗಳ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆಗೆ ಬ್ರೇಕ್‌ ಹಾಕಿದ ವೈರಸ್‌

ಇನ್ನು ಬಳ್ಳಾರಿಯ ಬಿಐಟಿಎಂ ಎಂಜಿನಿಯರಿಂಗ್‌ ಕಾಲೇಜಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ 25ಕ್ಕೂ ಹೆಚ್ಚು ಜನರಿಗೆ ಕೊರೋನಾ ತಗುಲಿದ್ದರೆ, ಮಂಗಳೂರಿನ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶುಕ್ರವಾರ 13 ಪ್ರಕರಣ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಪಟ್ಟಣದ ಆಯುರ್ವೇದಿಕ್‌ ಮೆಡಿಕಲ್‌ ಕಾಲೇಜಿನಲ್ಲಿ 7 ವಿದ್ಯಾರ್ಥಿಗಳಿಗೆ ಸೋಂಕು ತಗಲಿದೆ.

ಮಂಡ್ಯದಲ್ಲಿ ಪ್ರಾಥಮಿಕ ಶಾಲೆ ಬಂದ್‌

ಸೋಂಕು ಹೆಚ್ಚಳ ಹಿನ್ನೆಲೆ ಮಂಡ್ಯ(Mandya) ಜಿಲ್ಲೆಯಲ್ಲಿ 1ರಿಂದ 7ನೇ ತರಗತಿಗಳನ್ನು ಜ.22ರವರೆಗೆ ಬಂದ್‌ ಮಾಡಿ ಜಿಲ್ಲಾಧಿಕಾರಿ ಅಶ್ವಥಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶಾಲೆಗಳನ್ನು ಬಂದ್‌ ಮಾಡಿದ ಜಿಲ್ಲೆಗಳ ಸಂಖ್ಯೆ ಐದಕ್ಕೇರಿದೆ. ಈ ಹಿಂದೆ ಬೆಳಗಾವಿ, ಬೆಂಗಳೂರು, ಧಾರವಾಡ ಜಿಲ್ಲೆಯ 3 ತಾಲೂಕು, ಮೈಸೂರು ಜಿಲ್ಲೆಯ ಒಂದು ತಾಲೂಕುಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಭೌತಿಕ ತರಗತಿಗಳನ್ನು(Offline Class) ರದ್ದು ಮಾಡಲಾಗಿತ್ತು.
 

click me!