ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

Published : Jan 29, 2021, 05:45 PM ISTUpdated : Jan 29, 2021, 05:50 PM IST
ಸಚಿವ ಸುರೇಶ್ ಕುಮಾರ್ ಮಹತ್ವದ ಆದೇಶ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಸಾರಾಂಶ

ಖಾಸಗಿ ಶಾಲೆ ಬೋಧನಾ ಶುಲ್ಕ ನಿಗದಿ ಕುರಿತಂತೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು, (ಜ.29): ರಾಜ್ಯ ಸರ್ಕಾರ ಕೊನೆಗೂ ಖಾಸಗಿ ಶಾಲೆಗಳ ಶುಲ್ಕ ವಸೂಲಿ ಕ್ರಮಕ್ಕೆ ಬ್ರೇಕ್ ಹಾಕಿದ್ದು, ಎಲ್ಲಾ ಮಾದರಿಯ ಖಾಸಗಿ ಶಾಲೆಗಳು ಬೋಧನಾ ಶುಲ್ಕ ಹೊರತುಪಡಿಸಿ ಯಾವುದೇ ಅಭಿವೃದ್ಧಿ ಶುಲ್ಕವನ್ನು ಪಡೆಯುವಂತಿಲ್ಲ ಎಂದು ತಿಳಿಸಿದೆ.

ಶುಕ್ರವಾರ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು,  ಕೊರೋನಾದಿಂದದ ಎಲ್ಲಾ ಕ್ಷೇತ್ರಗಳೂ ಆರ್ಥಿಕ ಸಂಕಷ್ಟಕ್ಕೀಡಾಗಿವೆ. ಪೋಷಕರು ಶುಲ್ಕ ನೀಡಲಾಗದ ಸ್ಥಿತಿಯಲ್ಲಿದ್ದಾರೆ. ಇತ್ತ ಶುಲ್ಕ ನೀಡದಿದ್ದರೆ ಶಾಲೆಗಳು ಶಿಕ್ಷಕರಿಗೆ ವೇತನ ನೀಡಲಾಗದ ಸ್ಥಿತಿಯಿದೆ. ಹೀಗಾಗಿ ಖಾಸಗಿ ಶಾಲೆಗಳು 2019ರ ಬೋಧನಾ ಶುಲ್ಕದ ಶೇ.70 ರಷ್ಟು ಮಾತ್ರ ಪಡೆಯಬೇಕು ಎಂದರು.

ಖಾಸಗಿ ಶಾಲೆಯ ಶುಲ್ಕ ನಿಗದಿಪಡಿಸಿದ ಸರ್ಕಾರ, ಪ್ರಸಕ್ತ ಸಾಲಿಗೆ ಸೀಮಿತಗೊಳಿಸಿ ರಾಜ್ಯದ ಯಾವುದೇ ಮಾದರಿ ಪಠ್ಯಕ್ರಮದ ಖಾಸಗಿ ಶಾಲೆಗಳು 2019ರಲ್ಲಿ ಪಡೆದ ಬೋಧನ ಶುಲ್ಕದ ಶೇ.75ರಷ್ಟು ಮಾತ್ರ ಪಡೆಯಬೇಕು. ಬೋಧನ ಶುಲ್ಕ ಹೊರತುಪಡಿಸಿ ಅಭಿವೃದ್ಧಿ ಶುಲ್ಕ ವಸೂಲಿ ಮಾಡುವಂತಿಲ್ಲ. ಟ್ರಸ್ಟ್ ಗೆ ಡೊನೇಷನ್ ತೆಗೆದುಕೊಳ್ಳಬಾರದು ಎಂದು ಸರ್ಕಾರ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.

ಈಗ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಎರಡು ಅಥವಾ ಮೂರು ಕಂತಿನಲ್ಲಿ ಪಾವತಿಸಲು ಅವಕಾಶ ನೀಡಬೇಕು. ಈ ಬಗ್ಗೆ ಶಾಲೆ ಹಾಗೂ ಪಾಲಕರಿಂದ ಬರುವ ದೂರು ನಿರ್ವಹಣೆಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಸಮಿತಿ ರಚನೆ ಮಾಡಲಿದ್ದೇವೆ ಎಂದರು.

ಪೋಷಕರ ಗಮನಕ್ಕೆ: ಶಾಲಾ ಶುಲ್ಕದ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಕೊಟ್ರು ಮಹತ್ವದ ಮಾಹಿತಿ

ಈ ಬಗ್ಗೆ ವಿಧಾನ ಪರಿಷತ್ ಸದಸ್ಯರು, ವಿವಿಧ ವಿಭಾಗದ ಶಾಲಾಡಳಿತ ಮಂಡಳಿಗಳು, ಕ್ಯಾಮ್ಸ್, ರುಪ್ಸಾ, ಐಸಿಎಸ್‌ಇ, ಸಿಬಿಎಸ್‌ಇ ಮಂಡಳಿಗಳ ಜತೆ ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ನೂರಕ್ಕೆ ನೂರು ಎಲ್ಲರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿ ಶುಲ್ಕ ನಿಯಂತ್ರಣಕ್ಕೆ ಸರ್ಕಾರಕ್ಕೆ ಹಕ್ಕಿದೆ. ಈ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ಸಾರ್ವಜನಿಕ ಇಲಾಖೆ ಖಾಸಗಿ ಶಾಲೆ ಶುಲ್ಕ ನಿರ್ಧಾರ ವಿಚಾರವಾಗಿ ಪಾಲಕರು ಹಾಗೂ ಆಡಳಿತ ಮಂಡಳಿಯ ಆಕ್ಷೇಪಣೆಗಳನ್ನು ಕ್ರೋಡೀಕರಿಸಿದ್ದೇವೆ. ಮಕ್ಕಳನ್ನು ಶಾಲೆಗೆ ದಾಖಲಿಸುವ ಸಂದರ್ಭದಲ್ಲಿ ಒಂದು ಕಂತಿನ ಹಣ ಕಟ್ಟಲು ಹೇಳಿದ್ದೇವೆ. ಆನ್ ಲೈನ್ ಶಿಕ್ಷಣ ಸ್ಥಗಿತ, 2ನೇ ಕಂತಿನ ಹಣ ಇತ್ಯಾದಿ ವಿಚಾರವಾಗಿ ದೂರು ಬರುತ್ತಿವೆ. ಶಿಕ್ಷಣ ಇಲಾಖೆ ಯಾರ ಕತ್ತು ಹಿಸುಕುವುದಿಲ್ಲ. ಯಾರ ಲಾಬಿಗೂ ಶರಣಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 ಕೋವಿಡ್ ನಿಂದ ಶಾಲೆ ಮತ್ತು ಪಾಲಕರ ನಡುವಿನ ಸಂಬಂಧ ಹಾಳಾಗಿದೆ. ಸೀಟಿಗಾಗಿ ಪರದಾಡುತ್ತಿದ್ದ ಪಾಲಕರು ಇಂದು ಅದೇ ಶಾಲೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಶಾಲಾ ಮೇಲುಸ್ತುವಾರಿ ಸಮಿತಿಯನ್ನು ಖಾಸಗಿ ಶಾಲೆಗಳು ಸಮರ್ಥವಾಗಿ ಮಾಡಿಲ್ಲ ಎಂದು ಹೇಳಿದರು.

ಈಗಾಗಲೇ ಶಾಲಾ ಮ್ಯಾನೇಜ್ಮೆಂಟ್ ಗಳಿಗೆ ಬೋಧನಾ ಶುಲ್ಕವನ್ನು ಪೂರ್ತಿಯಾಗಿ ಪಾವತಿಸಿದ್ದರೆ, ಶುಲ್ಕ ಕಡಿತಕ್ಕೆ ಸರಿ ಹೊಂದಿಸಬೇಕಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಬಾಕಿ ಉಳಿದ ಮೊತ್ತವನ್ನು ಸರಿ ಹೊಂದಿಸಬಹುದು ಎಂದು ತಿಳಿಸಿದರು.

PREV
click me!

Recommended Stories

1ನೇ ತರಗತಿ ಪ್ರವೇಶ ಬಗೆಹರಿಯದ ಗೊಂದಲ, 2.30 ಲಕ್ಷ ಮಕ್ಕಳಿಗೆ ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಭೀತಿ!
Karna Serial Twist: ಡಾ.ನಿಧಿ ಈಗ ಲಾಯರ್​ ನಿಧಿ! Law ಪದವಿ ಬಗ್ಗೆ ಬಿಸಿಬಿಸಿ ಚರ್ಚೆ- ಏನ್ ಹೇಳತ್ತೆ ಕಾನೂನು?