Mangaluru College saffron shawl vs Hijab issue:ಪೊಂಪೈ ಕಾಲೇಜಿನಲ್ಲಿ ಕೇಸರಿ ಶಾಲು ವಿವಾದ, ಮಂಗಳೂರು ವಿವಿ ಕುಲಪತಿ ಅಸಮಾಧಾನ

By Suvarna NewsFirst Published Jan 7, 2022, 6:53 PM IST
Highlights

ಮೂಲ್ಕಿಯ ಕಿನ್ನಿಗೋಳಿ ಸಮೀಪದ ಪೊಂಪೈ ಖಾಸಗಿ ಕಾಲೇಜು ಸ್ಕಾರ್ಫ್ ಮತ್ತು ಕೇಸರಿ ಶಾಲು ಧರಿಸಿ ಭಾರೀ ವಿವಾದಕ್ಕೆ ಕಾರಣವಾಯ್ತು. ಒಂದು ಕೋಮಿಗೆ ಸೇರಿದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾದ ಕಾರಣ   ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು.  

ಮಂಗಳೂರು(ಜ.7): ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸ್ಕಾರ್ಫ್ ಹಾಗೂ ಕೇಸರಿ ಶಾಲು ವಿವಾದವನ್ನು ಸಂಬಂಧಪಟ್ಟಂತೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಯಡಪಡಿತ್ತಾಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಇಂತಹ ಭಾವನಾತ್ಮಕ ವಿಚಾರಗಳಿಂದ ಕಾಲೇಜುಗಳಲ್ಲಿ ಕಲಿಕಾ ವಾತಾವರಣ ಕೆಡದಂತೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು. ಸಿಂಡಿಕೇಟ್ ಸದಸ್ಯರು, ನಗರದ ಕೆಲ ಪ್ರತಿಷ್ಠಿತ ಕಾಲೇಜುಗಳ ಪ್ರಾಂಶುಪಾಲರನ್ನು ಒಳಗೊಂಡ ಸಮಿತಿಯ ಸಲಹೆ ಸೂಚನೆಗಳನ್ನು ಆದರಿಸಿ ಕೆಲವೊಂದು ಮಾರ್ಗಸೂಚಿಗಳನ್ನು ರಚಿಸಿ ಅದನ್ನು ಸಿಂಡಿಕೇಟ್ ಸಭೆಯ ಒಪ್ಪಿಗೆ ಪಡೆದು ಎಲ್ಲಾ ಕಾಲೇಜುಗಳಿಗೆ ಕಳುಹಿಸಲಾಗುವುದು ಎಂದರು.

ಕಾಲೇಜು ಆಡಳಿತ ಮಂಡಳಿ ಇಂತಹ ಸಮಸ್ಯೆಗಳು ಎದುರಾದಾಗ ಅದು ಹೆಮ್ಮರವಾಗದಂತೆ ಎಚ್ಚರಿಕೆ ವಹಿಸಬೇಕು. ಆ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಎಲ್ಲಾ ಕಡೆ ಜಾರಿಗೊಳಿಸಲು ಮಂಗಳೂರು ವಿಶ್ವವಿದ್ಯಾನಿಲಯ ಬದ್ಧವಾಗಿದೆ ಎಂದು ಅವರು ಹೇಳಿದರು.

NEET MDS REGISTRATION 2022: 2022ರ MDS ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ

ಜನವರಿ 4 ರಂದು ಮೂಲ್ಕಿಯ ಕಿನ್ನಿಗೋಳಿ ಸಮೀಪದ ಪೊಂಪೈ ಖಾಸಗಿ ಕಾಲೇಜು ಸ್ಕಾರ್ಫ್ ಮತ್ತು ಕೇಸರಿ ಶಾಲು ಧರಿಸಿ ಭಾರೀ ವಿವಾದಕ್ಕೆ ಕಾರಣವಾಯ್ತು. ಒಂದು ಕೋಮಿಗೆ ಸೇರಿದ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ತರಗತಿಗೆ ಹಾಜರಾದ ಕಾರಣ ಬುಧವಾರ  ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದರು.  ಮುಂದಿನ ಎರಡು ದಿನಗಳು ಕೂಡ ಕಾಲೇಜಿಗೆ ಹೀಗೆ ಬರುವುದಾಗಿ ಹೇಳಿದ್ದರು.  ಇದು ಗೊಂದಲಕ್ಕೆ ಕಾರಣವಾಗಿ ಶಾಲೆಗೆ ರಜೆ ನೀಡಲಾಗಿತ್ತು. ಈ ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಆಡಳಿತ ಮಂಡಳಿ ಕ್ರಮ ಕೈಗೊಂಡರೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದ್ದು, ರಾಜಕೀಯ ತಿರುವು ಪಡೆದುಕೊಳ್ಳುತ್ತದೆ ಎಂಬ ಕಾರಣದಿಂದ ಕಾಲೇಜು ಆಡಳಿತ ಮಂಡಳಿ ಮೌನಕ್ಕೆ ಶರಣಾಗಿತ್ತು ಎನ್ನಲಾಗಿದೆ.

ಸಮಸ್ಯೆ ಮತ್ತುಷ್ಟು ಬಿಗಡಾಯಿಸಿದ ಕಾರಣ ಗುರುವಾರ ಸಂಜೆ ಕಾಲೇಜಿನಲ್ಲಿ ಜರುಗಿದ ಕಾಲೇಜಿನ ಆಡಳಿತ ಮಂಡಳಿ, ಊರಿನ ಪ್ರಮುಖರು, ಪೊಲೀಸ್ ಇಲಾಖೆ ಮತ್ತು ಎರಡು ಧರ್ಮದ ಮುಖಂಡರ ಸಭೆಯಲ್ಲಿ ಕಾಲೇಜಿಗೆ ಸೇರುವಾಗ ವಿದ್ಯಾರ್ಥಿಗಳು ಒಪ್ಪಿಕೊಂಡ ನಿಯಮದಂತೆ ಡ್ರೆಸ್ ಕೋಡ್ ಪಾಲಿಸಬೇಕು. ಇದನ್ನು ಮೀರುವಂತಿಲ್ಲ ಎಂದು ತೀರ್ಮಾನಿಸಲಾಯ್ತು.  ಹೀಗಾಗಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ ಎನ್ನಲಾಗಿದೆ.

NEET EXAM FREE COACHING: ನೀಟ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಆ್ಯಪ್‌

ಚಿಕ್ಕಮಗಳೂರಿನ ಕಾಲೇಜಿನಲ್ಲೂ ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದ: ಇನ್ನು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಾಳಗಡಿ ಗ್ರಾಮದ ಪಗ್ರಥಮ ದರ್ಜೆ ಕಾಲೇಜಿನಲ್ಲಿ  ಸ್ಕಾರ್ಫ್ ಮತ್ತು ಕೇಸರಿ ಶಾಲು ವಿವಾದ ಇದ್ದು, ಇನ್ನೂ ಅಂತ್ಯ ಕಂಡಿಲ್ಲ. ಕಾಲೇಜಿನಲ್ಲಿ ಸಮಾನ ವಸ್ತ್ರಸಂಹಿತೆ ಇರಬೇಕು. ಎಲ್ಲರೂ ಒಂದೇ ರೀತಿಯಲ್ಲಿ ಸಮವಸ್ತ್ರವನ್ನು ಧರಿಸಬೇಕು. ಕಾಲೇಜಿನಲ್ಲಿ ಕೆಲ ವಿದ್ಯಾರ್ಥಿನಿಯರುವ ಸ್ಕಾರ್ಫ್ ಧರಿಸುತ್ತಿದ್ದು, ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪಟ್ಟು ಹಿಡಿದಿದರು.  

ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಮನವೊಲಿಸಿರುವ ಪ್ರಾಂಶುಪಾಲ ಅನಂತ್ ಜನವರಿ 10 ರಂದು ಪೋಷಕರು ಮತ್ತು ಸಂಬಂಧಿಸಿದವರ ಸಭೆ ಕರೆಯುವುದಾಗಿ ಹೇಳಿ ಜನವರಿ 10ರವರೆಗೆ ರಜೆ ಘೋಷಣೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಕೂಡ ಇದೇ ರೀತಿಯ ಘಟನೆ ಈ ಶಾಲೆಯಲ್ಲಿ ನಡೆದಿತ್ತು. ಆಗಲೂ ಪೋಷಕರ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಗೊಳಿಸಲಾಗಿತ್ತು.

click me!