ಪಠ್ಯ ವಿಚಾರದಲ್ಲಿ ವಿಪಕ್ಷಗಳಿಂದ ಸುಳ್ಳಿನ ಸರಮಾಲೆ: ಸಚಿವ ಕೋಟ

By Kannadaprabha NewsFirst Published Jun 12, 2022, 2:00 PM IST
Highlights

*  ರಾಷ್ಟ್ರೋತ್ಥಾನ ಬಳಗದಿಂದ ‘ಪಠ್ಯಪುಸ್ತಕ ಪರಿಷ್ಕರಣೆ ಸತ್ಯ-ಮಿಥ್ಯ’ ವಿಚಾರ ಸಂಕಿರಣ
*  ಈ ಹಿಂದೆ ಪಠ್ಯ ಪರಿಷ್ಕರಣೆಗೊಂಡಾಗಲೂ ಟೀಕೆ ಟಿಪ್ಪಣಿಗಳು ಬಂದಿದ್ದವು
*  ಹೆಡ್ಗೇವಾರ್‌ ಪಠ್ಯ ಸೇರಿಸಿದರೆ ತಪ್ಪೇನು? 
 

ಶಿವಮೊಗ್ಗ(ಜೂ.12):  ಪರಿಷೃತ ಪಠ್ಯದಲ್ಲಿ ನಾರಾಯಣ ಗುರುಗಳ ಪಠ್ಯ ತೆಗೆದಿಲ್ಲ. ಕುವೆಂಪು ಪಠ್ಯಗಳನ್ನು ಪರಿಷ್ಕರಣೆ ಮಾಡಿಲ್ಲ. ಎಲ್ಲೂ ಕೂಡ ಕೆಂಪೇಗೌಡರ ನಿಂದನೆ ಮಾಡಿಲ್ಲ. ಬಸವಣ್ಣನವರ ಪಾಠವನ್ನು ಕೂಡ ತೆಗೆದಿಲ್ಲ. ಆದರೆ, ಈ ಬಗ್ಗೆ ವಿಪಕ್ಷಗಳು ಸುಳ್ಳಿನ ಸರಮಾಲೆ ಹೊಸೆದು ವಿನಾಕಾರಣ ವಿವಾದ ಹುಟ್ಟುಹಾಕಿವೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿನ ಸುವರ್ಣ ಸಂಸ್ಕೃತಿ ಭವನದಲ್ಲಿ ರಾಷ್ಟ್ರೋತ್ಥಾನ ಬಳಗ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಪಠ್ಯಪುಸ್ತಕ ಪರಿಷ್ಕರಣೆ ಸತ್ಯ-ಮಿಥ್ಯ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಸರ್ಕಾರಗಳು ತಮ್ಮ ಒಟ್ಟಾರೆ ಬಜೆಟ್‌ನ ಶೇ.20ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಆ ಹೊತ್ತಿನ ಸಮಯ ಸಂದರ್ಭಕ್ಕೆ ತಕ್ಕ ಹಾಗೇ ವಿಚಾರಧಾರೆಗಳು ಬದಲಾದ ಹಾಗೇ ಪಠ್ಯಗಳನ್ನು ಪರಿಷ್ಕರಿಸುತ್ತಿವೆ. ಅದರಂತೆ ಈಗ ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ, ಆರ್‌ಎಸ್‌ಎಸ್‌ ಸ್ಥಾಪಕ ಹೆಡ್ಗೇವಾರ್‌ ಅವರ ರಾಷ್ಟ್ರಭಕ್ತಿಯ ಭಾಷಣದ ತುಣುಕನ್ನು ಪರಿಷ್ಕೃತ ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಎಡವಟ್ಟು: ಹುತಾತ್ಮ ವೀರ ಯೋಧ ಸಂದೀಪ್ ಉನ್ನಿಕೃಷ್ಣನ್ ಪಠ್ಯಕ್ಕೆ ಕೊಕ್

ಈ ಹಿಂದೆ ಪಠ್ಯ ಪರಿಷ್ಕರಣೆಗೊಂಡಾಗಲೂ ಟೀಕೆ ಟಿಪ್ಪಣಿಗಳು ಬಂದಿದ್ದವು. ಆದರೆ, ಅಂದಿನ ಸರ್ಕಾರಗಳು ಅದಕ್ಕೆ ಕಿವಿಗೊಡದೇ ಅದೇ ಮೆಕಾಲೆ ಕಾಲದ ಶಿಕ್ಷಣ ನೀತಿಯನ್ನು ಮುಂದುವರಿಸುತ್ತಿದ್ದವು. ಕರ್ನಾಟಕ ಸರ್ಕಾರ ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಮ್ಮ ದೇಶದ ಇತಿಹಾಸ ಪುರುಷರು, ರಾಷ್ಟ್ರಪ್ರೇಮಿಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ರಾಷ್ಟ್ರಭಕ್ತಿ ಜಾಗೃತಿಗೊಳಿಸಬೇಕು. ದೇಶದ ಸಂಸ್ಕಾರ ಸಂಸ್ಕೃತಿಯನ್ನು ತಿಳಿಸಬೇಕೆಂಬ ಉದ್ದೇಶಕ್ಕೆ ಈಗ ಪರಿಷ್ಕರಣೆಗೆ ಅವಕಾಶ ಕಲ್ಪಿಸಿ ಸಮಿತಿ ರಚನೆ ಮಾಡಿ ಸಲಹೆ ಸೂಚನೆಗಳಿಗೆ ಒಂದು ವರ್ಷ ಕಾಲಾವಕಾಶ ಕೂಡ ನೀಡಿತ್ತು. ಆದರೆ, ಇನ್ನೇನು ಪುಸ್ತಕ ಮುದ್ರಣ ಹಂತದಲ್ಲಿ ಇರುವಾಗ ಸುಳ್ಳಿನ ಸರಮಾಲೆಗಳನ್ನೇ ಸೃಷ್ಠಿಸಿ ವಿರೋಧ ಪಕ್ಷಗಳು ಸುಳ್ಳನ್ನೇ ಸತ್ಯವಾಗಿಸಿ, ಬಹುತೇಕ ಚರ್ಚೆಗೆ ಗ್ರಾಸವಾಗಿ ವಿವಾದಗಳನ್ನು ಹುಟ್ಟುಹಾಕುತ್ತಿವೆ ಎಂದು ಆರೋಪಿಸಿದರು.

ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ. ಸಾಹಿತಿಗಳಿಗೂ ಇದನ್ನು ಅರ್ಥ ಮಾಡಿಸುವ ಕೆಲಸವನ್ನು ಖುದ್ದಾಗಿ ಮುಖ್ಯಮಂತ್ರಿಗಳೇ ಮಾಡಿದ್ದಾರೆ. ವೈಚಾರಿಕ ವಿಚಾರದ ಬಗ್ಗೆ ಚರ್ಚೆಗೆ ಸರ್ಕಾರ ಯಾವತ್ತೂ ಸ್ವಾಗತ ಮಾಡುತ್ತದೆ. ಆದರೆ, ಸತ್ಯವನ್ನು ಮರೆ ಮಾಚಿ ಸುಳ್ಳು ಇತಿಹಾಸ ತುರುಕುವುದು ಯಾವ ನ್ಯಾಯ ಎಂದರು.

ಬೆಂಗಳೂರು ನಗರದ ವಕೀಲರ ಸಂಘ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ಯಾವಾಗ ನೆಹರೂ ಪ್ರಧಾನಿಯಾದರೋ ಆಗ ಅವರು ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ತಮಗೆ ಬೇಕಾದವರ ಸಮಿತಿ ರಚಿಸಿ ತಮಗೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀಡಲು ಪ್ರಾರಂಭಿಸಿದರು. ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ದಮನ ಆ ಹೊತ್ತಿನಿಂದಲೇ ಶುರುವಾಯ್ತು. ಒಂದೇ ಕುಟುಂಬದ ಹಿತಕ್ಕಾಗಿ ಮತ್ತು ಆ ಕುಟುಂಬ ವೈಭವೀಕರಣಕ್ಕಾಗಿ ಇತಿಹಾಸ ಮರೆ ಮಾಚಲಾಯಿತು ಎಂದು ಟೀಕಿಸಿದರು.

ಕುವೆಂಪು ವಿವಿ ವಿಶ್ರಾಂತ ಕುಲಪತಿ ಪೊ›. ಎಸ್‌.ಎ. ಬಾರಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟೊ್ರೕತ್ಥಾನ ಬಳಗದ ಶಿವಮೊಗ್ಗ ವಿಭಾಗದ ಅಧ್ಯಕ್ಷ ಡಾ.ಸುಧೀಂದ್ರ ಉಪಸ್ಥಿತರಿದ್ದರು.

ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: Araga Jnanendra

‘ಹೆಡ್ಗೇವಾರ್‌ ಪಠ್ಯ ಸೇರಿಸಿದರೆ ತಪ್ಪೇನು?’

ಹೆಡ್ಗೇವಾರ್‌ ವಿದ್ಯಾರ್ಥಿಗಳಲ್ಲಿ ವಂದೇ ಮಾತರಂ ಚಳವಳಿ ಮೂಲಕ ರಾಷ್ಟ್ರಪ್ರೇಮವನ್ನು ಬಿತ್ತಿದವರು. ಅವರ ಪಠ್ಯ ಸೇರ್ಪಡೆ ಮಾಡಿದರೆ ತಪ್ಪೇನು ಎಂದು ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಪ್ರಶ್ನಿಸಿದರು.

ಉಕ್ರೇನ್‌ನಲ್ಲಿ 18 ಸಾವಿರ ಭಾರತೀಯ ವಿದ್ಯಾರ್ಥಿಗಳು ಬಂಕರ್‌ನಲ್ಲಿ ಉಕ್ರೇನ್‌ ಸೈನಿಕರ ವಶದಲ್ಲಿದ್ದಾಗ ಈ ಕಡೆ ರಷ್ಯಾ ಸೈನಿಕರು ಬಾಂಬ್‌ ದಾಳಿ, ಆ ಕಡೆ ಉಕ್ರೇನ್‌ ಸೈನಿಕರಿಂದ ದಬ್ಬಾಳಿಕೆ ನಡೆಯುತ್ತಿತ್ತು. ಆಗ ಓರ್ವ ವಿದ್ಯಾರ್ಥಿನಿ ನನಗೆ ಫೋನಾಯಿಸಿ ತಮ್ಮನ್ನು ರಕ್ಷಿಸುವಂತೆ ಕೋರಿದಳು. ನಾನು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದೆ. ಹೀಗೆ ಪ್ರಯತ್ನಿಸಿದ 24 ಗಂಟೆಯಲ್ಲೇ ಭಾರತ ಸರ್ಕಾರದಿಂದ ಸಂಕಷ್ಟದಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ಒಂದು ಸಂದೇಶ ತಲುಪಿತು. ತ್ರಿವರ್ಣ ಧ್ವಜ ಹಿಡಿದು ಹೊರಗೆ ಬನ್ನಿ ನಿಮಗೆ ಎರಡೂ ಕಡೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು. ಆಗ ಅಷ್ಟೂವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಹೊರಗೆ ಬಂದಾಗ ಉಕ್ರೇನ್‌ ಪಡೆ ಅವರಿಗೆ ಗಡಿ ದಾಟಲು ಸಹಾಯ ಮಾಡಿದರೆ, ರಷ್ಯನ್‌ ಪಡೆ ನಾಲ್ಕು ದಿನಗಳ ಕಾಲ ಬಾಂಬ್‌ ದಾಳಿ ನಿಲ್ಲಿಸಿತ್ತು. ಪಾಕಿಸ್ತಾನದ ವಿದ್ಯಾರ್ಥಿಗಳು ಕೂಡ ಭಾರತದ ಧ್ವಜ ಹಿಡಿದು ಅಪಾಯದಿಂದ ಪಾರಾದರು. ಅದು ಭಾರತದ ಈಗಿನ ಘನತೆ ಎಂದು ಹೇಳಿದರು.

click me!