ಪಿಯುಸಿ ಫಲಿತಾಂಶದ ವೆಬ್‌ಸೈಟ್ ಸರ್ವರ್ ಡೌನ್; ಮರು ಪರೀಕ್ಷೆ, ಮರು ಎಣಿಕೆಯ ಶುಲ್ಕ ಪಾವತಿಗೆ ವಿದ್ಯಾರ್ಥಿಗಳ ಪರದಾಟ

By Sathish Kumar KHFirst Published Apr 15, 2024, 4:05 PM IST
Highlights

ರಾಜ್ಯದಲ್ಲಿ ಏ.10ರಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಮರು ಪರೀಕ್ಷೆ, ಮರು ಎಣಿಕೆ ಹಾಗೂ ಫೋಟೋ ಕಾಪಿ ಪಡೆಯಲು ಶುಲ್ಕ ಪಾವತಿಸುವುದಕ್ಕೆ ನಾಳೆ (ಏ.16) ಕೊನೆಯ ದಿನವಾಗಿದೆ. ಆದರೆ, ಈಗ ಪಿಯು ಬೋರ್ಡ್‌ ವೆಬ್‌ಸೈಟ್ ಸರ್ವರ್ ಡೌನ್‌ ಆಗಿದ್ದು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಬೆಂಗಳೂರು (ಏ.15): ರಾಜ್ಯದಲ್ಲಿ ಕಳೆದ ಐದು ದಿನಗಳ ಹಿಂದೆ ಬಂದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಇನ್ನು ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಿ ಅದರ ಸಾಫ್ಟ್‌ ಕಾಪಿಯನ್ನು ನೋಡಿಕೊಂಡು ಮರು ಪರೀಕ್ಷೆ, ಮರು ಎಣಿಕೆ ಹಾಗೂ ಉತ್ತರ ಪತ್ರಿಕೆಗಳ ಫೋಟೋ ಕಾಪಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಬೇಕು. ಆದರೆ, ಈಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ದ್ವಿತೀಯ ಪಿಯುಸಿ ಬೋರ್ಡ್‌ನ ಫಲಿತಾಂಶದ ವೆಬ್‌ಸೈಟ್ ಸರ್ವರ್ ಡೌನ್ ಆಗಿದ್ದು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಹೌದು, ಕಳೆದ ಏ.10ರಂದು ರಾಜ್ಯದಲ್ಲಿ 2023-24ನೇ ಸಾಲಿನ 6,81,079 ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟವಾಗಿತ್ತು. ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಿದ್ದರೂ, ಉತ್ತರ ಪತ್ರಿಕೆಗಳನ್ನ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯ ಸರ್ವರ್ ಡೌನ್ ಆಗಿದ್ದು, 500- ಇಂಟರ್ನಲ್ ಸರ್ವರ್ ಎರರ್ ಎಂದು ತೋರಿಸುತ್ತಿದೆ. ಉತ್ತರ ಪತ್ರಿಕೆ ಹಾಗೂ ಪೂರಕ ಪರೀಕ್ಷೆಗೆ ಶುಲ್ಕ ಪಾವತಿ‌ ಮಾಡಲು ನಾಳೆ ಕೊನೆ ದಿನವಾಗಿದೆ. ಅಂದರೆ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲು, ಉತ್ತರ ಪತ್ರಿಕೆಗಳ ಪೋಟೋ ಕಾಪಿ ಪಡೆಯಲು ಆಗೂ ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸುವುದಕ್ಕೆ ಶುಲ್ಕ ಪಾವತಿ ಮಾಡಲು ನಾಳೆ ಕೊನೆ ದಿನವಾಗಿದೆ. ಆದರೆ, ಸರ್ವರ್ ಡೌನ್‌ನಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಫಲಿತಾಂಶ ಪ್ರಕಟ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ರಿಲೀಸ್

ಈ ಬಗ್ಗೆ ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕರೆ ಮಾಡಿದರೂ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ನೀಡಿದ ಪಿಯು ಬೋರ್ಡ್ ಫೋನ್ ನಂಬರ್‌ಗೆ ಕರೆ ಮಾಡಿದ್ರು ಯಾವುದೇ ಪ್ರತಿಕ್ರಿಯೆ ಇಲ್ಲ. ಇದೀಗ ಶುಲ್ಕ ಪಾವತಿ ಮಾಡಲು ವೆಬ್ ಸೈಟ್ ಓಪನ್ ಆಗ್ತಿಲ್ಲ. ಸರ್ವರ್ ಸಮಸ್ಯೆಯಿಂದ ಶುಲ್ಕ ಪಾವತಿ ಮಾಡಲು ಸಾಧ್ಯವಾಗ್ತಿಲ್ಲ. ನಾಳೆಯೂ ಇದೇ ರೀತಿ ಸಮಸ್ಯೆ ಉಂಟಾದಲ್ಲಿ ನಮ್ಮ ಮಕ್ಕಳ ಭವಿಷ್ಯಕ್ಕೆ ದೊಡ್ಡ ಹಿನ್ನಡೆ ಉಂಟಾಗುತ್ತದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

2023-24ರ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ  ಪ್ರಕಟಿಸಿದೆ. ಏಪ್ರಿಲ್ 29ರಿಂದ ಮೇ 16ರವರೆಗೆ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ  ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ 1 ಅನ್ನು ಮಾರ್ಚ್ 01 ರಿಂದ 22 ರವರೆಗೆ ನಡೆಸಿತ್ತು. ಈ ವರ್ಷದಿಂದ ಮೂರು ಬಾರಿ ಪರೀಕ್ಷೆ ಬರೆಯುವ ಅವಕಾಶ ಇದೆ. ವಿದ್ಯಾರ್ಥಿಗಳು ಬಯಸಿದರೆ ಮತ್ತೊಮ್ಮೆ ಪರೀಕ್ಷೆ ಬರೆಯಬಹುದು. ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮೊದಲೇ ಮೂರು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಬೇಕಿದೆ.

Breaking: ದ್ವಿತೀಯ ಪಿಯುಸಿ 81.15% ಫಲಿತಾಂಶ ಪ್ರಕಟ, ಈ ಬಾರಿ ಕೂಡ ದಕ್ಷಿಣ ಕನ್ನಡ ನಂ.1, ಉಡುಪಿ ಸೆಕೆಂಡ್

ಏ 29ರಂದು -ಕನ್ನಡ
ಏ 30ರಂದು - ಇತಿಹಾಸ, ಭೌತಶಾಸ್ತ್ರ
ಮೇ 2ರಂದು-ಇಂಗ್ಲಿಷ್
ಮೇ 3ರಂದು-ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 4ರಂದು ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ,
ಮೇ 9ರಂದು ಗಣಿತ, ಶಿಕ್ಷಣಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮೇ 11ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
ಮೇ 13ರಂದು ಅರ್ಥಶಾಸ್ತ್ರ
ಮೇ 14ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ
ಮೇ 15ರಂದು ಹಿಂದಿ
ಮೇ 16ರಂದು ತಮಿಳು ಇತರೆ ಭಾಷಾ ವಿಷಯಗಳ ಪರೀಕ್ಷೆ

click me!