'ನಾನು ಒಂದು ಕೋಟಿ ಮಕ್ಕಳ ಪೋಷಕ' ಸುರೇಶ್ ಕುಮಾರ್ ಸ್ಷಷ್ಟ ಉತ್ತರ

By Suvarna NewsFirst Published Oct 9, 2020, 6:44 PM IST
Highlights

ಶಾಲೆ ತೆರೆಯುವ ವಿಚಾರ/ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್/ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ/ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿರುವ ವಿಚಾರ

ಬೆಂಗಳೂರು(ಅ. 09)  ಮಕ್ಕಳ ಆರೋಗ್ಯ ಮುಖ್ಯ, ಶಾಲೆ ತೆರೆಯುವ ಯಾವುದೇ ಧಾವಂತ ಇಲ್ಲ ಎಂದು ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಈ ಕುರಿತಾಗಿ ತಮ್ಮ  ಫೇಸ್ ಬುಕ್ ಖಾತೆಯಲ್ಲಿ ಅವರು ಸುದೀರ್ಘವಾಗಿ ಬರೆದುಕೊಂಡಿದ್ದಾರೆ

"

ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ.‌ ನಮಗೆ ನಮ್ಮ‌ ಮಕ್ಕಳ  ಆರೋಗ್ಯ ಮುಖ್ಯ ಎಂದಿದ್ದಾರೆ.

ಮಕ್ಕಳ ಆರೋಗ್ಯ ಬಲಿಕೊಟ್ಟು  ಯಾರೂ ಯಾವ ಕಾರ್ಯವನ್ನೂ ಪ್ರತಿಷ್ಠೆ ಗಾಗಿ ಮಾಡಬಾರದು. ಮಾಡುವುದಿಲ್ಲ.   ಶಾಲೆಗಳ ಬಗ್ಗೆ ರಾಜ್ಯದ ಎಲ್ಲಾ ಶಾಸಕರುಗಳ ಅಭಿಪ್ರಾಯವನ್ನು  ಸುಮಾರು 9 ದಿವಸಗಳ ಹಿಂದೆ ನಾನು ಕೇಳಿದ್ದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು, ಅನೇಕ ಸಚಿವರು, ಶಾಸಕರು  ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. 

ಶಾಲೆ ಮತ್ತೆಮ ಶುರು; ಅಷ್ಟಕ್ಕೂ ಇಲಾಖಾ ಮಟ್ಟದಲ್ಲಿ ಏನು ನಡೆಯುತ್ತಿದೆ

ಅದೇ ರೀತಿ ಆರೋಗ್ಯ ಸಚಿವ ಶ್ರೀರಾಮುಲು ರವರೂ ಸಹ  ಈ ಕುರಿತು ಚರ್ಚೆ ನಡೆಸಿ ನನಗೆ ತಮ್ಮ ಅಭಿಪ್ರಾಯ ನೀಡುವುದಾಗಿ ತಿಳಿಸಿದ್ದಾರೆ. ಡಾ. ಸುಧಾಕರ್ ರವರೂ ನನಗೆ ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.‌

 ಆದರೆ ಅಭಿಪ್ರಾಯಗಳನ್ನು ಕೇಳಿದ ಮಾತ್ರಕ್ಕೆ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಂಡೇ ಬಿಟ್ಟಿದೆ ಎಂಬರ್ಥದಲ್ಲಿ ವಿಪುಲವಾಗಿ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಮತ್ತೆ ಮತ್ತೆ ಇದು ಮರುಕಳಿಸುತ್ತಲೇ ಇದೆ. ನಾನು ಬಾರಿ  ಬಾರಿ ಸ್ಪಷ್ಟೀಕರಣ ಕೊಡುತ್ತಲೇ ಇದ್ದೇನೆ. ಈಗಾಗಲೇ  ರಾಜ್ಯದ ಮುಖ್ಯಮಂತ್ರಿಸಹ  ಈ ಕುರಿತು ಸರ್ಕಾರದ  ನಿಲುವನ್ನು ಬಹಳ ಸ್ಪಷ್ಟವಾಗಿ  ತಿಳಿಸಿದ್ದಾರೆ.

 ನಾನು ಮತ್ತೊಮ್ಮೆ, ಮಗದೊಮ್ಮೆ ಸ್ಪಷ್ಟಗೊಳಿಸುತ್ತಿದ್ದೇನೆ.‌  ಶಾಲೆ ಪ್ರಾರಂಭ ಮಾಡುವ ಯಾವುದೇ ತರಾತುರಿ ನಮ್ಮ ಮುಂದೆ ಇಲ್ಲ.  ಎಲ್ಲ ಮಾಧ್ಯಮಗಳಲ್ಲಿ ನನ್ನದೊಂದು ಮನವಿ.  ಶಿಕ್ಷಣ ಇಲಾಖೆಯ ಮುಂದಿನ ತೀರ್ಮಾನವನ್ನು  ಮಕ್ಕಳ ಹಿತವನ್ನು ಆದ್ಯತೆಯಲ್ಲಿಟ್ಟುಕೊಂಡು ಎಲ್ಲರೊಡನೆ ಸಮಾಲೋಚನೆಯ ನಂತರ ಕೈಗೊಳ್ಳಲಾಗುತ್ತದೆಯೇ  ಹೊರತು ಯಾವುದನ್ನೂ ಧಿಡೀರನೆ ಘೋಷಿಸುವುದಿಲ್ಲ. 

 ಯಾವುದೇ ಪೋಷಕರ ಮನಸ್ಸಿನಲ್ಲಿ ಈ ಕುರಿತು ಕಿಂಚಿತ್  ಸಹ ಗೊಂದಲ ಬೇಡ ಎಂದು ಕಳಕಳಿಯಿಂದ ತಿಳಿಸುತ್ತಿದ್ದೇನೆ. ನಾನು ಈ ರಾಜ್ಯದ ಶಿಕ್ಷಣ ಸಚಿವ ಮಾತ್ರನಲ್ಲ. ಸುಮಾರು ಒಂದು ಕೋಟಿ ಮಕ್ಕಳ ಪೋಷಕ  ಎಂಬುದರ ಅರಿವು ನನಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

click me!