ಹೊಸಪೇಟೆ: ತಡರಾತ್ರಿ ಠಾಣೆಯಲ್ಲಿದ್ದ ಹಂಪಿ ವಿವಿ ವಿದ್ಯಾರ್ಥಿನಿಯರು?

By Kannadaprabha NewsFirst Published Sep 23, 2021, 1:23 PM IST
Highlights

*  ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ವಿವಿ
*  ಮಹಿಳಾ ನೇಮಕಾತಿಗೆ ಒತ್ತಾಯಿಸಿದ ವಿದ್ಯಾಥಿಗಳಿಗೆ ಪೊಲೀಸ್‌ ಠಾಣೆಯಲ್ಲಿ ಇರುವ ಶಿಕ್ಷೆ
*  ವಿವಿಯಲ್ಲಿ ಡಿವೈಎಸ್‌ಪಿ ಅಕ್ರಮ ವಾಸ್ತವ್ಯ
 

ಕೃಷ್ಣ ಲಮಾಣಿ

ಹೊಸಪೇಟೆ(ಸೆ.23): ಮಹಿಳಾ ಅಧ್ಯಯನ ವಿಭಾಗಕ್ಕೆ ಮಹಿಳೆಯರನ್ನೇ ನೇಮಕ ಮಾಡಿಕೊಳ್ಳಬೇಕೆನ್ನುವ ವಿಷಯವಾಗಿ ನಡೆದ ವಿವಾದದ ಹಿನ್ನಲೆಯಲ್ಲಿ ದ(Hampi University) ಸಂಶೋಧನಾ ವಿದ್ಯಾರ್ಥಿನಿಯರನ್ನು ತಡರಾತ್ರಿಯವರೆಗೆ ಪೊಲೀಸ್‌ ಠಾಣೆಯಲ್ಲಿ ಇರಿಸಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ಹೊಸಪೇಟೆ ವೃತ್ತದ ಡಿವೈಎಸ್‌ಪಿ ಎಸ್‌.ಎಸ್‌.ಕಾಶಿ ಅವರ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಹಂಪಿ ವಿವಿ ಪ್ರಾಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಂಪಿ ವಿವಿ ಇತ್ತೀಚೆಗೆ ಮಹಿಳಾ(Woman) ಅಧ್ಯಯನ ವಿಭಾಗದಲ್ಲಿ ಬೋಧಕರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ ಮಹಿಳಾ ಅಧ್ಯಯನ/ಕನ್ನಡ ಎಂದು ನಮೂದಿಸಿತ್ತು. ಅದರಲ್ಲಿ ಮಹಿಳಾ ಅಧ್ಯಯನ ಮಾಡಿದವರಿಗೆ ಮಾತ್ರ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇಟ್ಟು ಎಐಡಿಎಸ್‌ ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿನಿಯರು(Students) ಕುಲಪತಿ ಡಾ.ಸ.ಚಿ.ರಮೇಶ್‌ ಅವರನ್ನು ಕಂಡು ಮನವಿ ಮಾಡಿದರು. ಅಂದೇ ಸಿಂಡಿಕೇಟ್‌ ಸಭೆ ನಡೆದಿದ್ದರಿಂದ ಸಿಂಡಿಕೇಟ್‌ ಸದಸ್ಯರಲ್ಲೂ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕುಲಪತಿಗಳು ಮತ್ತು ವಿದ್ಯಾರ್ಥಿ ಮುಖಂಡರ ಮಧ್ಯೆ ಮಾತಿಗೆ ಮಾತು ಬೆಳೆದಿತ್ತಂತೆ.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಡವಿ ಸಿಪಿಲೆ ಪಕ್ಷಿ!

ಈ ಹಿನ್ನಲೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗದಿದ್ದರೂ ಡಿವೈಎಸ್‌ಪಿ ಕಾಶಿ ಅವರು ವಿದ್ಯಾರ್ಥಿ ಮುಖಂಡ ಪಂಪಾಪತಿ ಹಾಗೂ ಸರೋಜಾ ಸಂತಿ, ಶಿವಮ್ಮ, ಹಾವನೂರ ಸೇರಿದಂತೆ ಹಲವು ಸಂಶೋಧನಾ ವಿದ್ಯಾರ್ಥಿನಿಯರನ್ನು ಬುಧವಾರ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ರಾತ್ರಿ 9.40ರ ವರೆಗೆ ಅವರೆಲ್ಲ ಆ ಠಾಣೆಯಲ್ಲಿ ಇದ್ದರು. ಬಳಿಕ ಮನೆಗೆ ಕಳಿಸಿಕೊಡಲಾಗಿದೆ.

ವಿವಿ ಆವರಣದಲ್ಲಿ ಗಲಾಟೆಯಾದರೆ ಕುಲಪತಿಗಳ ಪರವಾನಿಗೆಯ ಮೇರೆಗೆ ಪೊಲೀಸರು(Police) ಅಲ್ಲಿಗೆ ಹೋಗಿ ವಿದ್ಯಾರ್ಥಿಗಳ ವಿಚಾರಣೆ ನಡೆಸಬೇಕು. ಇಲ್ಲವೇ ಕುಲಪತಿಗಳೇ ದೂರು ನೀಡಿದ್ದರೆ ಆಯಾ ವಿದ್ಯಾರ್ಥಿಗಳನ್ನು ಠಾಣೆಗೆ ಕರೆದೊಯ್ದು ಕಾನೂನು ಪ್ರಕಾರ ಪ್ರಕರಣ ದಾಖಲಿಸಿ, ಬಂಧನಕ್ಕೆ ಒಳಪಡಿಸುವುದು ನಿಯಮ. ಅದಾವುದೂ ಇಲ್ಲದೇ ಸಂಶೋಧನಾ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಅಕ್ರಮವಾಗಿ ಠಾಣೆಗೆ ಕರೆಸಿಕೊಂಡು ತಡರಾತ್ರಿ ವರೆಗೆ ಇರಿಸಿಕೊಂಡಿರುವ ಡಿವೈಎಸ್‌ಪಿ ಕಾಶಿ ಅವರ ನಡೆ ಅಚ್ಚರಿ ಮೂಡಿಸಿದೆ. ಇಷ್ಟೆಲ್ಲಾ ಆಗಿದ್ದರೂ ಕುಲಪತಿ ಡಾ.ರಮೇಶ್‌ ಅವರು ಮೌನ ವಹಿಸಿರುವುದು ಇನ್ನೂ ಅಚ್ಚರಿಗೆ ಕಾರಣವಾಗಿದೆ. 

ಧಾರವಾಡ: ಪದವಿ ಪ್ರಮಾಣ ಪತ್ರಕ್ಕಾಗಿ ಕವಿವಿ ವಿದ್ಯಾರ್ಥಿಗಳ ಪರದಾಟ..!

ವಿವಿಯಲ್ಲಿ ಡಿವೈಎಸ್‌ಪಿ ಅಕ್ರಮ ವಾಸ್ತವ್ಯ:

ಹೊಸಪೇಟೆ(Hosapete) ವೃತ್ತದ ಡಿವೈಎಸ್‌ಪಿ ಎಸ್‌.ಎಸ್‌.ಕಾಶಿ ಅವರು ಹಂಪಿ ವಿವಿ ಪ್ರಾಧ್ಯಾಪಕರ ವಸತಿಗೃಹದಲ್ಲಿ ವಾಸ್ತವ್ಯ ಹೂಡಿರುವುದು ಕೂಡ ಇದೀಗ ತೀವ್ರ ಚರ್ಚೆಗೆ ಬಂದಿದೆ.

ವಿವಿ ಅತಿಥಿಗೃಹದಲ್ಲಿ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಂಪಿ ಪ್ರವಾಸಕ್ಕೆ ಬಂದಾಗ ಒಂದೆರಡು ದಿನ ವಾಸ್ತವ್ಯ ಹೂಡುವುದು ಸಾಮಾನ್ಯ. ಆದರೆ ಈ ಡಿವೈಎಸ್‌ಪಿ ಕಾಶಿ ಅವರು ಕಳೆದ ಒಂದೂವರೆ ವರ್ಷದಿಂದ ಪ್ರಾಧ್ಯಾಪಕರ ವಸತಿಗೃಹದಲ್ಲಿ ಝೇಂಡಾ ಹೂಡಿದ್ದಾರೆ. ಅದೂ ಸಂಶೋಧನಾ ವಿದ್ಯಾರ್ಥಿನಿಯರ ಹಾಸ್ಟೇಲ್‌ ಪಕ್ಕದಲ್ಲೇ ಇರುವ ವಸತಿಗೃಹದಲ್ಲಿ ಇದ್ದಾರೆ. ಬೇರೆ ಇಲಾಖೆಯ ಅಧಿಕಾರಿಗಳಿಗೆ ವಿವಿ ಪ್ರಾಧ್ಯಾಪಕರ ವಸತಿಗೃಹಗಳನ್ನು ವರ್ಷಗಟ್ಟಲೇ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ? ಡಿವೈಎಸ್‌ಪಿ ಬಾಡಿಗೆ ನೀಡುತ್ತಿದ್ದಾರೆಯೇ? ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆಲ್ಲ ಕುಲಪತಿಗಳೇ ಉತ್ತರಿಸಬೇಕಿದೆ.
 

click me!