ಮಡಿಕೇರಿ: ಅನುದಾನ ದೊರೆತರೂ ಹಾಡಿ ಆಶ್ರಮ ಶಾಲೆ ಅಭಿವೃದ್ಧಿ ಮರೀಚಿಕೆ: ಅರಣ್ಯ ಇಲಾಖೆಯೇ ಅಡ್ಡಿ: ಆರೋಪ

By Kannadaprabha NewsFirst Published Mar 18, 2023, 10:28 AM IST
Highlights

ಮಕ್ಕಳ ಭವಿಷ್ಯ ರೂಪಿಸುವ ಹಾಡಿ ಆಶ್ರಮ ಶಾಲೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ನಿಯಮ ಅಡ್ಡಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಲಾಖೆ ಶಾಲೆಗೆ ಅನುಮತಿ ನೀಡದೇ ಸತಾಯಿಸುತ್ತಿದೆ.

ಮೋಹನ್ ರಾಜ್

ಮಡಿಕೇರಿ (ಮಾ18) : ಮಕ್ಕಳ ಭವಿಷ್ಯ ರೂಪಿಸುವ ಹಾಡಿ ಆಶ್ರಮ ಶಾಲೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ನಿಯಮ ಅಡ್ಡಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಲಾಖೆ ಶಾಲೆಗೆ ಅನುಮತಿ ನೀಡದೇ ಸತಾಯಿಸುತ್ತಿದೆ.

ಇದರಿಂದಾಗಿ ಸರ್ಕಾರದಿಂದ ಅನುದಾನ ಸಿಕ್ಕರೂ ಅಭಿವೃದ್ಧಿ ಕಾಣದ ಅಸುರಕ್ಷಿತ ಕಟ್ಟಡದಲ್ಲಿ ಮೂಲ ಸೌಕರ್ಯವಿಲ್ಲದೆ ನೂರಾರು ವಿದ್ಯಾರ್ಥಿಗಳು ಇಂದಿಗೂ ವಿದ್ಯಾಭ್ಯಾಸ ಮಾಡುವಂತಾಗಿದೆ ಎಂದು ಆರೋಪಿಸಲಾಗಿದೆ.

10ನೇ ತರಗತಿ ವಿದ್ಯಾರ್ಥಿಗಳೇ ಗಮನಿಸಿ, ನಿಮ್ಮ ಗೊಂದಲಕ್ಕೆ ಪರೀಕ್ಷಾ ಸಹಾಯವಾಣಿ ಆರಂಭ

ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಿತ ಅರಣ್ಯ(Nagarhole National Tiger Reserve) ಪ್ರದೇಶದಲ್ಲಿ 1953ರಲ್ಲಿ ಗಿರಿಜನ ಹಾಡಿ ಜನತೆಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿರ್ಮಾಣಗೊಂಡು ಸುವರ್ಣ ಮಹೋತ್ಸವ(Suvarna mahotsav) ಕಳೆದು ಇದೀಗ ಅಮೃತ ಮಹೋತ್ಸವ(Amrit mahotsav) ಕಾಣಲಿರುವ ಆಶ್ರಮ ಶಾಲೆಗೆ ಇನ್ನೂ ಅಭಿವೃಧ್ದಿ ಭಾಗ್ಯ ದೊರೆತಿಲ್ಲ. ಕಳೆದ ಹಲವು ದಶಕಗಳ ಹಿಂದೆ ಆದಿವಾಸಿಗಳ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನಿರ್ಮಾಣಗೊಂಡ ಈ ಶಾಲೆಯಲ್ಲಿ ಇಂದು 1-7ನೇಯ ತರಗತಿ ವರೆಗೆ ಸುಮಾರು 80ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ದುಃಸ್ಥಿತಿಯ ಜತೆಗೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ.

ಅನುದಾನ ಮಂಜೂರು:

ಶಾಲೆಯ ಅಭಿವೃದ್ಧಿಗೆ ಸರ್ಕಾರ ಕೂಡ ಅನುದಾನ ಮಂಜೂರು ಮಾಡಿ ಮೂಲ ಸೌಕರ್ಯಗಳನೊಳಗೊಂಡ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾದರು ಅರಣ್ಯ ಇಲಾಖೆಯಿಂದ ಅನುಮತಿ ಸಿಗದ ಕಾರಣ ಈ ಹಿಂದೆ ಕೂಡ ಎರಡು ಬಾರಿ ಅನುದಾನ ವಾಪಸ್‌ ಹೋಗಿದೆ. ಆದರೂ ಇದೀಗ ಮತ್ತೊಮ್ಮೆ ಸರ್ಕಾರ ಆದಿವಾಸಿ ಬುಡಕಟ್ಟು ಸಮುದಾಯಗಳ ಅಭಿವೃಧ್ದಿ ಯೋಜನೆಯಡಿ ಶಾಲಾ ಅಭಿವೃದ್ದಿಗೆಂದು ಅಂದಾಜು 2 ಕೋಟಿ ರು.ಗಳಷ್ಟುಅನುದಾನ ಬಿಡುಗಡೆ ಮಾಡಿದ್ದು, ಅರಣ್ಯ ಇಲಾಖೆ ಅನುಮತಿಗಾಗಿ ಶಾಲಾ ಅಭಿವೃದ್ಧಿ ಮಂಡಳಿ ಕಾಯುವಂತಾಗಿದೆ.

ಪ್ರತಿಯೊಬ್ಬ ಪ್ರಜೆಗೂ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರಗಳ ಆದ್ಯ ಕರ್ತವ್ಯವಾಗಿದ್ದು, ಅದಕ್ಕೆ ಪೂರಕವಾದ ಪರಿಸರ ಸ್ನೇಹಿ ಹಸಿರು ಕಟ್ಟಡಗಳ ವಾಸ್ತುಶಿಲ್ಪ ಶೈಲಿಯಲ್ಲಿ ನೂತನ ಶಾಲಾ ಕಟ್ಟಡ ನಿರ್ಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಸೌಕರ್ಯ ಕಲ್ಪಿಸುವುದರ ಜತೆಗೆ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸರಕಾರ ಮುಂದಾಗಬೇಕೆಂಬುವುದು ಸಾರ್ವಜನಿಕರ ಆಗ್ರಹ.

 

ಖಾಸಗಿ ಶಾಲಾ ಮಕ್ಕಳ ಪಠ್ಯಪುಸ್ತಕ ಶೇ.25ರಷ್ಟು ದುಬಾರಿ: ಬೆಲೆ ಏರಿಕೆ, ಜಿಎಸ್‌ಟಿ ಕಾರಣ

ಕಳೆದ ಹಲವಾರು ವರ್ಷಗಳಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಕೂಡ 2 ಬಾರಿ ಅನುದಾನ ಬಿಡುಗಡೆ ಮಾಡಿ ವಾಪಸ್‌ ಹೋಗಿದೆ. ಇದೀಗ 3ನೇ ಬಾರಿ ಅನುದಾನ ಮಂಜೂರು ಆಗಿದೆ. ಅರಣ್ಯ ಇಲಾಖೆಯ ಸುಪರ್ದಿಗೆ ಬರುವ ಪ್ರದೇಶವಾಗಿರುವ ಹಿನ್ನೆಲೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ಮುಂದಿಟ್ಟು, ಸರ್ಕಾರ ಇತ್ತ ಗಮನ ಹರಿಸಿ ಸಂಬಂಧಿಸಿದ ಇಲಾಖೆ ಜತೆ ಮಾತುಕತೆ ನಡೆಸಿ ಕಟ್ಟಡ ನಿರ್ಮಿಸಲು ಅನುಮತಿ ಕೊಡಿಸಬೇಕಿದೆ.

-ಬಸವರಾಜು, ಮುಖ್ಯೋಪಾಧ್ಯಾಯರು, ಹಾಡಿ ಆಶ್ರಮ ಶಾಲೆ.

ಹಾಡಿ ಶಾಲೆಯಲ್ಲಿ ಕೆಲ ದುರಸ್ತಿ ಕೆಲಸ ಮಾಡಲಾಗಿದೆ. ಹಳೆ ಕಟ್ಟಡವಾಗಿರುವ ಹಿನ್ನೆಲೆ ನೂತನ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಭಂದಪಟ್ಟಇಲಾಖೆಯವರು ಆನ್‌ ಲೈನ್‌ ಮೂಲಕ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸ್ವೀಕೃತಗೊಂಡು ಅನುಮತಿ ದೊರೆತರೆ ಹೊಸ ಕಟ್ಟಡ ನಿರ್ಮಾಣ ಮಾಡಲು ಯಾವುದೇ ಅಭ್ಯಂತರವಿರುವುದಿಲ್ಲ.

-ಮಹಮ್ಮದ್‌ ಜೀಶನ್‌, ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ನಾಗರಹೊಳೆ.

ಈಗಾಗಲೇ ಹಲವು ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಗಮನ ಹರಿಸಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗುವ ಮೂಲಕ ಆ ಪಟ್ಟಿಗೆ ಹಾಡಿ ಶಾಲೆ ಸೇರುವುದನ್ನು ತಪ್ಪಿಸುವ ಕೆಲಸ ಮಾಡಬೇಕಾಗಿದೆ.

-ಮುರಳೀಧರ್‌, ಸಮಾಜ ಸೇವಕ.

click me!