Karnataka Guest Lecturers Protest: ದಯಾಮರಣ ಕೋರಿ ಅತಿಥಿ ಉಪನ್ಯಾಸಕರಿಂದ ಪತ್ರ

By Suvarna NewsFirst Published Jan 22, 2022, 8:50 PM IST
Highlights

ದಯಾಮರಣ ಕೋರಿ ಹಾಸನದ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. 

ಹಾಸನ(ಜ.22): ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಇಲಾಖೆ ಜ.14ರಂದು ಹೊರಡಿಸಿರುವ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರು (Guest Lecturers), ಇದೀಗ ದಯಾಮರಣ (Euthanasia) ಕೋರಿ ಹಾಸನದ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಾಷ್ಟ್ರಪತಿ , ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕೆಲವು ದಿನಗಳಿಂದ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಅಂಚೆ ಕಚೇರಿಗೆ ಪತ್ರ ಪೋಸ್ಟ್ ಮಾಡಿದ್ದಾರೆ."

Karnataka Power Tariff: ದರ ಏರಿಕೆ ವಿರೋಧಿಸಿದ ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಇಬ್ಬಗೆ ನೀತಿಗೆ ಹಾಸನದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ, ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಎಚ್ಚರಿಸಿದ್ದಾರೆ. ಸರ್ಕಾರ ಘೋಷಿಸಿರುವ ವೇತನ ಹೆಚ್ಚಳದ ಪ್ಯಾಕೇಜ್‌ನಿಂದ ಸಮಾಧಾನವಾಗಿಲ್ಲ. ನಾವು ಕೇಳಿರುವುದು ಸೇವಾ ಭದ್ರತೆ, ಅದು ಈಡೇರುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದಿದ್ದಾರೆ. ಮಾನವೀಯ ನೆಲೆ, ಜೀವನ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಬಳ ಮೂರು ಪಟ್ಟು ಹೆಚ್ಚಿಸಿದ್ದು, ಯಾವುದೋ ರಾಜಕೀಯ ಕಾರಣಕ್ಕೆ ಕೆಲ ಅತಿಥಿ ಉಪನ್ಯಾಕರ ಸಂಘಟನೆಗಳು ಪಟ್ಟು ಹಿಡಿದಿವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ (Ashwath Narayan) ಈ ಹಿಂದೆ ಕಿಡಿಕಾರಿದ್ದರು.

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ  ಕಳೆದ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‌ಯುಜಿಸಿ ನಿಯಮಾವಳಿ ಪ್ರಕಾರ ನೇಮಕವಾದವರಿಗೆ ಮಾತ್ರ ಸೇವಾ ಭದ್ರತೆ ಅನ್ವಯವಾಗುತ್ತದೆ. ಉಳಿದವರಿಗೆ ಸೇವಾ‌ಭದ್ರತೆಯ ಪ್ರಶ್ನೆಯೇ ಉದ್ಬವಿಸದು ಎಂದು ಸ್ಪಷ್ಟಪಡಿಸಿದ್ದರು.

ಸರ್ಕಾರದ ಈಗಿನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಇಷ್ಟ ಇರುವವರು ಸೇರಿಕೊಳ್ಳಬಹುದು. ಯುಜಿಸಿ (UGC) ಮಾನದಂಡದ ಪ್ರಕಾರ ಹಾಲಿ 13500 ಅತಿಥಿ ಉಪನ್ಯಾಸಕರಲ್ಲಿ 4,500 ಉಪನ್ಯಾಸಕರು ಮಾತ್ರ ಅರ್ಹರಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ, ಬೋಧನಾ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಯುಜಿಸಿ ನಿಯಮಾವಳಿ ಪಾಲಿಸಲೇಕಾಗಿದೆ‌.

ಯುಜಿಸಿ ಅರ್ಹತೆಯ ಮಾನದಂಡ ಹಾಗೂ ವರ್ಕ್ ಲೋಡ್ 8-10 ತಾಸು ವಿಸ್ತರಣೆಯಾಗಿರುವ ಕಾರಣ ಹೊಸದಾಗಿ 9500. ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ದೊರೆತಿದ್ದು,‌ ಅರ್ಜಿ‌ ಸಲ್ಲಿಕೆಗಾಗಿ ಸೋಮವಾರ ಪೋರ್ಟಲ್ ಕಾರ್ಯಾರಂ‌ಭಿಸಲಿದ್ದು, ಅರ್ಹ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದಿದ್ದರು.

SSLC EXAMS ಕೊರೋನಾ ಹೆಚ್ಚಳ ಭೀತಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸ್ಪಷ್ಟನೆ ಕೊಟ್ಟ ಶಿಕ್ಷಣ ಸಚಿವ

ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿಗಳ ಮಹಾಪೂರ: 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ರಾಜ್ಯದಲ್ಲಿ ಆರಂಭಿಸಿರುವ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಭಾರೀ ಸ್ಪಂದನ ವ್ಯಕ್ತವಾಗಿದೆ. ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ. ರಾಜ್ಯ ಸರಕಾರವು ಇತ್ತೀಚೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಬಳವನ್ನು ಎರಡೂವರೆ ಪಟ್ಟಿಗಿಂತ ಹೆಚ್ಚು ಏರಿಕೆ ಮಾಡಿದೆ. ಇದು ಅರ್ಹ ಅಭ್ಯರ್ಥಿಗಳಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಿದೆ ಎನ್ನುವುದಕ್ಕೆ ಇಷ್ಟೊಂದು ಪ್ರಮಾಣದಲ್ಲಿ ಅರ್ಜಿಗಳು ಬಂದಿರುವುದೇ ಸಾಕ್ಷಿ’ ಎಂದು ಹೇಳಿದ್ದಾರೆ. ಅಲ್ಲದೆ, ಅರ್ಜಿ ಹಾಕಿಕೊಳ್ಳಲು ಶುಕ್ರವಾರ ಮಧ್ಯರಾತ್ರಿ 12 ಗಂಟೆಯವರೆಗೂ ಅವಕಾಶವಿದೆ. ಇದುವರೆಗೂ ಅರ್ಜಿ ಹಾಕದೆ ಇರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂಥವರು https://dec.karnataka/gov.in ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ. 

click me!