ಶಹಾಪುರ: ಸೋರುತಿಹುದು ಜ್ಞಾನ ದೇಗುಲ, ವಿದ್ಯಾರ್ಥಿನಿಯರು ವಿಲವಿಲ..!

By Kannadaprabha NewsFirst Published Jun 28, 2023, 1:50 PM IST
Highlights

ಶಾಲೆಯಲ್ಲಿ 11 ಕೊಠಡಿಗಳಿದ್ದು, ಅದರಲ್ಲಿ ಮಳೆ ಬಂದರೆ 4 ಕೊಠಡಿ ಸೋರುತ್ತಿವೆ. ಇನ್ನು 6 ಕೋಣೆಗಳ ಅವಶ್ಯಕತೆ ಇದೆ. ಮಕ್ಕಳಿಗೆ ಕುಳಿತುಕೊಂಡು ಓದಲು ಗ್ರಂಥಾಲಯದ ವ್ಯವಸ್ಥೆ ಮಾಡಬೇಕಿದೆ.

ಮಲ್ಲಯ್ಯ ಪೋಲಂಪಲ್ಲಿ

ಶಹಾಪುರ(ಜೂ.28):  ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಮೇಲ್ಚಾವಣಿ ಸೋರುತ್ತಿದೆ. ವಿದ್ಯಾರ್ಥಿಗಳು ಜೀವಭಯದಲ್ಲೇ ಪಾಠ ಕೇಳುವಂತ ವಾತಾವರಣ ನಿರ್ಮಾಣವಾಗಿದೆ. ಬಹುತೇಕ ಶಿಥಿಲಾವಸ್ಥೆಗೆ ತಲುಪಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದ್ದು, ಶಿಕ್ಷಣದ ವ್ಯವಸ್ಥೆ ತತ್ತರಿಸಿ ಹೋಗುವ ಮುನ್ನ ಬೇಕಿದೆ ಹೊಸ ಕಾಲೇಜು ಕಟ್ಟಡದ ಅವಶ್ಯಕತೆ ಇದೆ.

ನಗರದ ಹೃದಯ ಭಾಗದಲ್ಲಿರುವ ಬಾಲಕಿಯರ ಸರ್ಕಾ​ರಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕಿಯರ ಸರ್ಕಾ​ರಿ ಪ್ರೌಢಶಾಲೆ ಎರಡು ಒಂದೇ ಕಟ್ಟಡದಲ್ಲಿ ನಡೆಯುತ್ತಿವೆ. ಪದವಿ ಪೂರ್ವ ಕಾಲೇಜಿನಲ್ಲಿ 1250 ವಿದ್ಯಾರ್ಥಿನಿಯರು ಹಾಗೂ ಬಾಲಕಿಯರ ಪ್ರೌಢಶಾಲೆಯಲ್ಲಿ 800 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ 11 ಕೊಠಡಿಗಳಿದ್ದು, ಅದರಲ್ಲಿ ಮಳೆ ಬಂದರೆ 4 ಕೊಠಡಿ ಸೋರುತ್ತಿವೆ. ಇನ್ನು 6 ಕೋಣೆಗಳ ಅವಶ್ಯಕತೆ ಇದೆ. ಮಕ್ಕಳಿಗೆ ಕುಳಿತುಕೊಂಡು ಓದಲು ಗ್ರಂಥಾಲಯದ ವ್ಯವಸ್ಥೆ ಮಾಡಬೇಕಿದೆ.

ಶಾಲಾ, ಕಾಲೇಜು ಪಠ್ಯಕ್ರಮದಲ್ಲಿ ಸೆಕ್ಸ್‌ ಎಜುಕೇಶನ್‌, ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್‌ ಒತ್ತಾಯ

ಶಿಕ್ಷಕರ ವಿವರ:

ಪದವಿ ಪೂರ್ವ ಕಾಲೇಜಿಗೆ 11 ಜನ ಉಪನ್ಯಾಸಕರ ಪೈಕಿ 7 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರೆಯಾಗಿ ಪ್ರತಿ ವಿಷಯಕ್ಕೆ ಒಬ್ಬರು ಉಪನ್ಯಾಸಕರು ಹಾಗೂ ಕನ್ನಡ ಮತ್ತು ಇಂಗ್ಲೀಷ್‌ಗೆ ಹೆಚ್ಚುವರಿಯಾಗಿ ನಾಲ್ಕು ಜನ ಉಪನ್ಯಾಸಕರ ಅವಶ್ಯಕತೆ ಇದೆ. 14 ಜನ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗಿದೆ. ಪ್ರೌಢಶಾಲಾ ವಿಭಾಗದಲ್ಲಿ 24 ಜನ ಶಿಕ್ಷಕರ ಪೈಕಿ 19 ಜನ ಶಿಕ್ಷಕರಿದ್ದಾರೆ. ಐದು ಜನ ಉಪನ್ಯಾಸಕ ಶಿಕ್ಷಕರನ್ನು ತೆಗೆದುಕೊಳ್ಳಲಾಗಿದೆ.

ಮೂಲ ಸೌಕರ್ಯಗಳು ಮಾಯ:

ಇಲ್ಲಿ ಕುಡಿವ ನೀರಿನ ಘಟಕವಿದ್ದರೂ ಪದೇ ಪದೇ ಕೆಟ್ಟು ನಿಲ್ಲುತ್ತದೆ. ಅಲ್ಲದೆ ಕೇವಲ 500 ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ಇದೆ. ಕನಿಷ್ಠ 10 ಸಾವಿರ ಸಾಮರ್ಥ್ಯದ ನೀರಿನ ಟ್ಯಾಂಕಿನ ಅವಶ್ಯಕತೆ ಇದೆ. ಕೋಣೆಗಳು, ಲೈಬ್ರರಿ, ಶಿಕ್ಷಕ ಹಾಗೂ ಉಪನ್ಯಾಸಕರು ಸೇರಿ ಹಲವು ಮೂಲ ಸೌಕರ್ಯಗಳು ಒದಗಿಸುವ ಕೆಲಸವಾಗಬೇಕೆಂದು ಶಿಕ್ಷಣ ಪ್ರೇಮಿ ಮೊಹ್ಮದ್‌ ಇಸ್ಮಾಯಿಲ್‌ ತಿಮ್ಮಪುರಿ ಆಗ್ರಹಿಸಿದ್ದಾರೆ.

ಕಟ್ಟಡ ದುರಸ್ತಿಗೆ ಆಗ್ರಹ:

ಜಿಪಂ ಎಂಜಿನಿಯರಿಂಗ್‌ ಉಪ ವಿಭಾಗದ ಅ​ಧಿಕಾರಿಗಳು ನಿರ್ಮಿಸಿದ ಕೋಣೆಗಳು ಕೆಲವೇ ವರ್ಷದಲ್ಲಿ ಶಿಥಿಲಾವಸ್ಥೆ ತಲುಪಿವೆ. ತಕ್ಷಣ ಕೋಣೆಗಳನ್ನು ದುರಸ್ತಿ ಮಾಡಬೇಕು ಹಾಗೂ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡ ಅಧಿ​ಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಮುಖಂಡ ನಿಂಗಣ್ಣ ನಾಟೇಕಾರ್‌ ಹಾಗೂ ರೈತ ಮುಖಂಡ ಬಸವರಾಜ್‌ ಭಜಂತ್ರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Bengaluru: ಕಾಲೇಜುಗಳ ಬಳಿ ಪುಂಡರ ಕಾಟ: ವಿದ್ಯಾರ್ಥಿನಿಯರ ದೂರು

ಶಾಲಾ ಮತ್ತು ಕಾಲೇಜಿನಲ್ಲಿ ಕಲಿಕೆ ವಾತಾವರಣ ತುಂಬಾ ಚೆನ್ನಾಗಿದೆ. ನಿರೀಕ್ಷೆಗೆ ಮೀರಿ ಮಕ್ಕಳು ದಾಖಲಾತಿ ಪಡೆಯುತ್ತಿದ್ದಾರೆ. ಮಕ್ಕಳ ಬೋಧನೆಗೆ ಶಿಕ್ಷಕ, ಉಪನ್ಯಾಸಕರು ಮತ್ತು ಕೋಣೆಗಳ ಕೊರತೆ ಇದೆ. ಇ​ರು​ವು​ದ​ರಲ್ಲೆ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ. ಶಾಲೆ ಅಥವಾ ಕಾಲೇಜಿಗೆ ಪ್ರತ್ಯೇಕ ಕಟ್ಟಡದ ಅವಶ್ಯಕತೆ ಇದೆ ಅಂತ ಶಹಾಪುರ ಬಾಲಕಿ​ಯರ ಪ.ಪೂ. ಕಾಲೇಜು ಪ್ರಾಂಶುಪಾಲ ಶಂಕರ್‌ರೆಡ್ಡಿ ತಿಳಿಸಿದ್ದಾರೆ.

ಮಳೆ ಬಂದರೆ ಸಾಕು ಕಟ್ಟಡದ ಮೇಲ್ಚಾವಣಿಯಿಂದ ನೀರು ಸೋರಿ ಕುಳಿತುಕೊಳ್ಳಲು ತೊಂದರೆಯಾಗಿದೆ. ಮಳೆಯಲ್ಲಿ ನೆನೆದು ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ. ಜೀವಭಯದಲ್ಲಿ ಪಾಠ ಕೇಳುವಂತಾಗಿದೆ. ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳಬೇಕು ಅಂತ ವಿದ್ಯಾರ್ಥಿನಿಯರು ಮಲ್ಲಮ್ಮ, ಭಾಗ್ಯಶ್ರೀ, ಕವಿತಾ, ಶಾಂತಮ್ಮ, ದೇವಮ್ಮ ತಿಳಿಸಿದ್ದಾರೆ. 

click me!