ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿದ ಬಿಸಿಯೂಟ ನೌಕರರು: ರಾಜ್ಯಾದ್ಯಂತ ಇಂದಿನಿಂದ ಬಿಸಿಯೂಟ ಬಂದ್?

By Suvarna NewsFirst Published Aug 16, 2022, 1:52 PM IST
Highlights

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಪ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿರುವ ಬಿಸಿಯೂಟ ನೌಕರರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ನೌಕರರು ಪ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿರುವ ಬಿಸಿಯೂಟ ನೌಕರರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಸಿಯೂಟ ಯೋಜನೆ ಪ್ರಾರಂಭವಾಗಿ 19 ವರ್ಷಗಳು ಕಳೆದಿವೆ. ಆದರೆ 19 ವರ್ಷಗಳಿಂದ ದುಡಿದಿರುವ ನೌಕರರನ್ನ 60 ವರ್ಷ ವಯೋಮಾನದ ನೆಪವೊಡ್ಡಿ ಸೇವೆಯಿಂದ ಬಿಡುಗಡೆ ಮಾಡಿದೆ. ಆದರೆ ಸರ್ಕಾರದಿಂದ ಅವರಿಗೆ ನಿವೃತ್ತಿ ಹಣ ಸಿಕ್ಕಿಲ್ಲ ಹಾಗೂ ಸರ್ಕಾರ ಅವರನ್ನ ಅಮಾನವೀಯವಾಗಿ ನಡೆಸಿಕೊಂಡಿದೆ ಅಂತ ಸಿಐಟಿಯು ಗೌರವಧ್ಯಕ್ಷರಾದ ಎಸ್ ವರಲಕ್ಷೀ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

60 ವರ್ಷ ಮೇಲ್ಪಟ್ಟ ನೌಕರರಿಗೆ ನಿವೃತ್ತಿ ಸಮಯದಲ್ಲೂ ಸರ್ಕಾರ ನಿವೃತ್ತಿ ಹಣವನ್ನ ಕೊಡಬೇಕಿತ್ತು. ಆದ್ರೆ ಏಕಾಏಕಿ ಅವರನ್ನ ಕೆಲಸದಿಂದ ತೆಗೆದು ಹಾಕಿದ್ದಲ್ಲದೆ, ಅವರಿಗೆ ನಿವೃತ್ತಿ ಹಣ ಕೂಡ ನೀಡಿಲ್ಲ. ಸರ್ಕಾರಕ್ಕೆ ಸಾಕಷ್ಟು ಭಾರಿ ಮನವಿ ಮಾಡಿದ್ದರು. ನಮ್ಮ ಮನವಿಯನ್ನ ಸರ್ಕಾರ ಈಡೇರಿಸಿಲ್ಲ ಎಂದು ಬಿಸಿಯೂಟ ನೌಕರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ರಾಜ್ಯಾದ್ಯಂತ ಸುಮಾರು 50 ಲಕ್ಷ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಬೇಯಿಸಿ ಹಾಕಲಾಗುತ್ತಿದೆ.

ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಬಿಸಿಯೂಟ ನೌಕರರ ಪಾತ್ರವು ಪ್ರಮುಖವಾಗಿದೆ. ಇನ್ನೂ 2001 ರಲ್ಲಿ ಅಡುಗೆ ಕೆಲಸಕ್ಕೆ ಸೇರ್ಪಡೆ ‌ಮಾಡಿಕೊಂಡಾಗ ವಿದ್ಯಾಭ್ಯಾಸ ಹಾಗೂ ವಯಸ್ಸಿನ ಅರ್ಹತೆ ಮಾತ್ರ ನಿಗದಿ ಮಾಡಿತ್ತು. 2016 ರಿಂದ ಅಕ್ಷರ ದಾಸೋಹ ನೌಕರರ ಸಂಘ ವಯಸ್ಸಿನ ಆಧಾರದ ಮೇಲೆ ನಿವೃತ್ತಿ ಸೌಲಭ್ಯ ಕೊಡಬೇಕೆಂದು ಸರ್ಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡರೂ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಅಂತ ಬಿಸಿಯೂಟ ನೌಕರರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಿಸಿಯೂಟ ನೌಕರರ ಬೇಡಿಕೆಗಳೇನು

60 ವರ್ಷ ಮೇಲ್ಪಟ್ಟ ಬಿಸಿಯೂಟ ನೌಕರರನ್ನ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ಅಥವಾ ಹಿಡಿಗಂಟು 1 ಲಕ್ಷ ಹಣ ನೀಡಿ ಬಿಡುಗಡೆ ‌ಮಾಡಬೇಕು

ಮಾರ್ಚ್ 31, 2022 ಕ್ಕೆ ಬಿಸಿಯೂಟ ನೌಕರರನ್ನು  ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನ ಸರ್ಕಾರ ಬದಲಾಯಿಸಿ ಏಪ್ರಿಲ್ 10, 2022 ಕ್ಕೆ ಮರು ಆದೇಶ ನೀಡಬೇಕು

ಬಜೆಟ್ ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ 1000 ಸಾವಿರ ವೇತನವನ್ನ ಜನವರಿ 2022ರ ಅನ್ವಯದಂತೆ ಜಾರಿ ಮಾಡಬೇಕು

ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು, ಖಾಯಂ ಮಾಡುವ ತನಕ  45 ಹಾಗೂ 46 ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಿಸ್ಸಿನಂತೆ ಇವರನ್ನ ಕಾರ್ಮಿಕರೆಂದು ಗುರುತಿಸಬೇಕು

ಕೇಂದ್ರಿಕೃತ ಅಡುಗೆ ಮಾದರಿ ಬೇಡ, ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು

ನಮ್ಮ ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಿಸ್ಸಿನಂತೆ 5 ಸಾವಿರದಿಂದ 6 ಸಾವಿರದವರೆಗೆ ವೇತನ ಹೆಚ್ಚಳ ಮಾಡಬೇಕು

ಬೇಸಿಗೆ ಹಾಗೂ ದಸರಾ ರಜೆಗಳಲ್ಲಿ ವೇತನ  ಕೊಡಬೇಕು

ಎಲ್ಲರಿಗೂ ಅನ್ವಯ ವಾಗದೇ ಇರುವ  ಮಾನ್ ಧನ್ ಯೋಜನೆ ಮಾಡಿಸಲು ಇಲಾಖೆಯಿಂದ ಒತ್ತಾಯಿಸಬಾರದು

ಶಾಲಾ ಅವಧಿಯ ನಂತರ ನರೇಗಾ ಯೋಜನೆ ಅಡಿಯಲ್ಲಿ ಶಾಲಾ ಕೈತೋಟದ ಕೆಲಸ ನೀಡಬೇಕು

ಬಿಸಿಯೂಟ ‌ನೌಕರರನ್ನ ಖಾಯಂ ಮಾಡಿ, ಸರ್ಕಾರಿ ಸೌಲಭ್ಯ ಜಾರಿ ಮಾಡಬೇಕು

ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳ ದಿನಾಂಕ  5 ರೊಳಗೆ ವೇತನ ಪಾವತಿಯಾಗಬೇಕು

ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರಬೇಕು

ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿ  ನೇಮಕ ಮಾಡಬೇಕು
 

click me!