8100 ಶಾಲಾ ಕೊಠಡಿಗೆ ಇಂದು ಏಕಕಾಲಕ್ಕೆ ಶಂಕು ಸ್ಥಾಪನೆ

By Kannadaprabha NewsFirst Published Nov 14, 2022, 3:02 AM IST
Highlights
  • 8100 ಶಾಲಾ ಕೊಠಡಿಗೆ ಇಂದು ಏಕಕಾಲಕ್ಕೆ ಶಂಕು
  • ಇಂದು ಕಲಬುರಗಿಯಲ್ಲಿ ಸಿಎಂ ಶಂಕುಸ್ಥಾಪನೆ
  • ಯೋಜನೆ ಹೆಸರು ‘ವಿವೇಕ’
  • ಎಲ್ಲ ಕೊಠಡಿಗಳಿಗೆ ಕೇಸರಿ ಬಣ್ಣ?
  • ಹಲವರ ವಿರೋಧ

ಬೆಂಗಳೂರು (ನ.14) : ರಾಜ್ಯದ ಅನೇಕ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ 8100 ಹೊಸ ಕೊಠಡಿಗಳ ನಿರ್ಮಾಣಕ್ಕೆ ಸೋಮವಾರ ಏಕಕಾಲದಲ್ಲಿ ಸರ್ಕಾರ ಅಡಿಗಲ್ಲು ಹಾಕಲಿದ್ದು, ಈ ಮಹತ್ವದ ಯೋಜನೆಗೆ ‘ವಿವೇಕ’ ಎಂಬ ಹೆಸರಿಡಲಾಗಿದೆ. ಅಲ್ಲದೆ, ಕಾಮಗಾರಿ ಬಳಿಕ ಈ ಎಲ್ಲ ಕೊಠಡಿಗಳಿಗೂ ಏಕರೂಪವಾಗಿ ಮುಂಜಾವಿನ ಉದಯ ಸೂರ್ಯನ ಬಣ್ಣ ಅಥವಾ ಅರುಣೋದಯ ವರ್ಣ ಬಳಿಯಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ಆದರೆ, ಇದಕ್ಕೆ ಕೆಲವರಿಂದ ಆಕ್ಷೇಪಗಳು ವ್ಯಕ್ತವಾಗತೊಡಗಿವೆ. ಸರ್ಕಾರ ಉದಯ ರವಿಯ ಬಣ್ಣದ ಹೆಸರಲ್ಲಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿದೆ. ಬಿಜೆಪಿಯವರು ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸಿದ್ದು ಆಯಿತು, ಈಗ ಶಾಲಾ ಕಟ್ಟಡ, ಕೊಠಡಿಗಳನ್ನೂ ಕೇಸರಿಮಯಗೊಳಿಸಲು ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಏರ್‌ಪೋರ್ಟ್‌ಗೆ ಕೆಂಪೇಗೌಡ ಹೆಸರಿಟ್ಟಿದ್ದು ನಾವು: ಸಿಎಂ ಬೊಮ್ಮಾಯಿ

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅವರು ಕೊಠಡಿಗಳಿಗೆ ಏಕರೂಪದ ಬಣ್ಣ ಹೊಡೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ಯಾರೋ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇಷ್ಟಕ್ಕೂ ಕೊಠಡಿಗಳಿಗೆ ಏಕರೂಪ ಬಣ್ಣ ಬಳಿದರೆ ತಪ್ಪೇನು? ಬಣ್ಣಕ್ಕೂ ಜಾತಿ, ಧರ್ಮ ಹಚ್ಚಲು ಹೊರಟರೆ ನಾವೂ ನೋಡಿಕೊಂಡು ಕೂರಲಾಗುವುದಿಲ್ಲ. ಆರ್ಕಿಟೆಕ್ಟ್ ಹೇಳಿದರೆ ಕೇಸರಿ ಬಣ್ಣವನ್ನೇ ಬಳಿಯೋಣ. ನಾವೇನೂ ಕೇಸರಿ ವಿರೋಧಿಗಳಲ್ಲವಲ್ಲ ಎಂದಿದ್ದಾರೆ.

ಉದಯ ಸೂರ್ಯನ ಬಣ್ಣದ ಬಗ್ಗೆ ಇಲಾಖೆಯಲ್ಲಿ ಪ್ರಸ್ತಾಪವಾಗಿದೆಯಂತಲ್ಲ ಎಂಬ ಪ್ರಶ್ನೆಗೆ, ಬಣ್ಣದ ವಿಚಾರವಾಗಿ ಇದುವರೆಗೆ ಯಾವುದೇ ನಿರ್ಧಾರ ಆಗಿಲ್ಲ. ಉದಯ ಸೂರ್ಯನ ಬಣ್ಣ ಕೂಡ ಜ್ಞಾನದ ಸಂಕೇತವೇ ಆಗುತ್ತದೆ. ಆರ್ಕಿಟೆಕ್ಟ್ ಸಲಹೆ ಮಾಡಿದರೆ ಎಲ್ಲ ಕೊಠಡಿಗಳಿಗೂ ಅದೇ ಬಣ್ಣ ಬಳಿಯಲಾಗುವುದು ಎಂದರು.

ಮುಖ್ಯಮಂತ್ರಿಗಳ ಸಹಕಾರದಿಂದ ಏಕಕಾಲಕ್ಕೆ 7500 ಶಾಲಾ ಕೊಠಡಿಗಳು, 600ಕ್ಕೂ ಹೆಚ್ಚು ಪಿಯು ಕಾಲೇಜು ಕೊಠಡಿಗಳನ್ನು ನಿರ್ಮಿಸುವ ಮಹತ್ತರ ಯೋಜನೆ ಸಾಧ್ಯವಾಗುತ್ತಿದೆ. ಸೋಮವಾರ ಕಲಬುರಗಿಯ ತಾಂಡವೊಂದರಲ್ಲಿ ಮುಖ್ಯಮಂತ್ರಿಗಳು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಇನ್ನಿತರೆ ಜಿಲ್ಲೆಗಳಲ್ಲಿ ಸ್ಥಳೀಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಅಡಿಗಲ್ಲು ಹಾಕಲಿದ್ದಾರೆ.

ವಿವೇಕಾನಂದರು ಜ್ಞಾನದ ಸಂಕೇತ. ವಿವೇಕಾನಂದರನ್ನು ನೆನಪಿಸುವುದು ಮತ್ತು ಮಕ್ಕಳಲ್ಲಿ ವಿವೇಕದ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ ಈ ಯೋಜನೆಗೆ ವಿವೇಕ ಎಂಬ ಹೆಸರಿಡಸಲಾಗಿದೆ ಎಂದು ವಿವರಿಸಿದರು.

ಅಭಿವೃದ್ಧಿಗೆ ಪ್ರೇರಣೆ ಆಗಲಿ ಎಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ

ಆರ್ಕಿಟೆಕ್ಟ್ ಹೇಳಿದರೆ ಕೊಠಡಿಗಳಿಗೆ ಕೇಸರಿ ಬಣ್ಣ

ಕೊಠಡಿಗಳಿಗೆ ಏಕರೂಪದ ಬಣ್ಣ ಹೊಡೆಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಆಗಿಲ್ಲ. ಈ ವಿಚಾರದಲ್ಲಿ ಅನಗತ್ಯವಾಗಿ ಯಾರೋ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇಷ್ಟಕ್ಕೂ ಕೊಠಡಿಗಳಿಗೆ ಏಕರೂಪ ಬಣ್ಣ ಬಳಿದರೆ ತಪ್ಪೇನು? ಬಣ್ಣಕ್ಕೂ ಜಾತಿ, ಧರ್ಮ ಹಚ್ಚಲು ಹೊರಟರೆ ನಾವೂ ನೋಡಿಕೊಂಡು ಕೂರಲಾಗುವುದಿಲ್ಲ. ಆರ್ಕಿಟೆಕ್ಟ್ ಹೇಳಿದರೆ ಕೇಸರಿ ಬಣ್ಣವನ್ನೇ ಬಳಿಯೋಣ. ನಾವೇನೂ ಕೇಸರಿ ವಿರೋಧಿಗಳಲ್ಲವಲ್ಲ.

-ನಾಗೇಶ್‌, ಶಿಕ್ಷಣ ಸಚಿವ

click me!