ಕೊರೋನಾ ಕಂಟ್ರೋಲ್‌ಗೆ ಬರದಿದ್ರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದು: ಸಿಎಂ ಬಿಎಸ್‌ವೈ

By Suvarna NewsFirst Published Jun 4, 2021, 1:11 PM IST
Highlights

* ವಿದ್ಯಾರ್ಥಿಗಳು, ಪೋಷಕರು ಆತಂಕ ಪಡಬೇಡಿ, ಯಾವುದೇ ಗೊಂದಲವಿಲ್ಲ
* ಯಡಿಯೂರಪ್ಪ ಮತ್ತು ಜಾರಕಿಹೊಳಿ‌ ಸಹೋದರರ ನಡುವೆ ಮುಂದುವರೆದ ಮುನಿಸು
* ಸಿಎಂ ಯಡಿಯೂರಪ್ಪಗೆ ಪರೋಕ್ಷ ಸಂದೇಶ ರವಾನಿಸಿದ್ರಾ ಜಾರಕಿಹೊಳಿ‌ ಬ್ರದರ್ಸ್? 
 

ಬೆಳಗಾವಿ(ಜೂ.04): ಕೊರೋನಾ ಕಂಟ್ರೋಲ್‌ಗೆ ಬಂದರೆ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. 

ಇಂದು(ಶುಕ್ರವಾರ) ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಕಂಟ್ರೋಲ್‌ಗೆ ಬರದೆ ಇದ್ದರೇ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಲಾಗುವುದು. ವಿದ್ಯಾರ್ಥಿಗಳು ಪೋಷಕರು ಆತಂಕ ಪಡಬೇಡಿ. ಏನೂ ಗೊಂದಲವಿಲ್ಲ, ನಾನು ಸಚಿವ ಸುರೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಇನ್ನೂ ಒಂದೂವರೆ ಎರಡು‌ ತಿಂಗಳ ನಂತರ ವಾತಾವರಣ ಸುಧಾರಣೆ ಆದ್ರೇ ಯಾವುದು ಏನೂ ಅಂತಾ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಮಕ್ಕಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಸಕ್ಕರೆ ಕಾರ್ಖಾನೆಯವರು ಕಬ್ಬಿನ ಬಾಕಿ ಉಳಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಯಡಿಯೂರಪ್ಪ, ಕಬ್ಬಿನ ಬಿಲ್ ಶೀಘ್ರವಾಗಿ ರೈತರಿಗೆ ಮುಟ್ಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್‌ನಲ್ಲಿ SSLC ಎಕ್ಸಾಮ್: ಯಾರೂ ಫೇಲ್ ಆಗೋಲ್ಲ 

ಬೆಳಗಾವಿಯ ಅವ್ಯವಸ್ಥೆ ಆಗರ ಬಿಮ್ಸ್ ಆಸ್ಪತ್ರೆಗೆ ಸಮರ್ಥ ಐಎಎಸ್ ಅಧಿಕಾರಿಯನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡಲಾಗುವುದು. ಬಿಮ್ಸ್ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು‌ ತಿಳಿಸಿದ್ದಾರೆ. 

ಮೈಸೂರಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಜಗಳ ವಿಚಾರದ ಬಗ್ಗೆ ಮಾತನಾಡಿದ ಸಿಎಂ, ಐಎಎಸ್ ಅಧಿಕಾರಿಗಳ ಸರಿ ಪಡಿಸೋಕೆ ಏನೂ ಬೇಕೋ ಅದನ್ನ ಮಾಡುತ್ತೇವೆ. ಆ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ  ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಇಂದು ಮೈಸೂರಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದ ಮುನಿಸು

ಸಿಎಂ ಯಡಿಯೂರಪ್ಪ ಮತ್ತು ಜಾರಕಿಹೊಳಿ‌ ಸಹೋದರರ ನಡುವೆ ಮುನಿಸು ಮುಂದುವರೆದಿದೆ. ಸಿಎಂ ಬೆಳಗಾವಿಗೆ ಬಂದು ಸಭೆ ಮಾಡುತ್ತಿದ್ದರೂ ರಮೇಶ್ ಜಾರಕಿಹೊಳಿ‌, ಬಾಲಚಂದ್ರ ಜಾರಕಿಹೊಳಿ‌, ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ‌ ಸಿಎಂ ಬಿಎಸ್‌ವೈ ಸಭೆಗೆ ಹಾಜರಾಗಿದ್ದಾರೆ. 

ಸಿಡಿ ಕೇಸ್ ಬಳಿಕ ಸಿಎಂ ಯಡಿಯೂರಪ್ಪ ಜೊತೆಗೆ ಜಾರಕಿಹೊಳಿ ಸಹೋದರರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಸಂದರ್ಭದಲ್ಲೂ ಜಾರಕಿಹೊಳಿ ಬ್ರದರ್ಸ್ ಸಿಎಂಗೆ ಭೇಟಿಯಾಗಿರಲಿಲ್ಲ. ಕೋವಿಡ್ ನಿರ್ವಹಣೆ ಕುರಿತು ಸಿಎಂ ಯಡಿಯೂರಪ್ಪ ಬೆಳಗಾವಿಗೆ ಬಂದ್ರೂ ಜಾರಕಿಹೊಳಿ ಸಹೋದರರು ಮಾತ್ರ  ಮುನಿಸು ಬಿಡಡುವ ಹಾಗೆ ಕಾಣಿಸುತ್ತಿಲ್ಲ. ರಮೇಶ್ ಜಾರಕಿಹೊಳಿ‌ ಗೋಕಾಕ್‌ನಲೇ ಇದ್ರೂ ಸಿಎಂ ಕರೆದಿರುವ ಸಭೆಗೆ ಗೈರಾಗಿದ್ದಾರೆ. ಸಭೆಗೆ ಗೈರಾಗುವುದರ ಮೂಲಕ ಸಿಎಂ ಯಡಿಯೂರಪ್ಪಗೆ ಪರೋಕ್ಷ ಜಾರಕಿಹೊಳಿ‌ ಬ್ರದರ್ಸ್ ಸಂದೇಶ ರವಾನಿಸಿದ್ರಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ.
 

click me!