ಕಂಠಪಾಠದ ಕಲಿಕೆಯಿಂದ ಮಕ್ಕಳನ್ನು ಹೊರತರಬೇಕು

By Kannadaprabha NewsFirst Published Sep 5, 2022, 2:53 PM IST
Highlights

ಪ್ರಾಥಮಿಕ ಕಲಿಕಾ ಹಂತದಿಂದಲೇ ಕೇವಲ ಪಠ್ಯಗಳ ಕಂಠಪಾಠದ ಕಲಿಕೆಯಿಂದ ಮಕ್ಕಳನ್ನು ಮೊದಲು ಹೊರ ತರಬೇಕು. ಅನುಭವಾತ್ಮಕ ಚಟುವಟಿಕೆಗಳ ಮೂಲಕ ಕಲಿಯುವ ಪ್ರಕ್ರಿಯೆಗೆ ಆದ್ಯತೆ ನೀಡಬೇಕು. ಪ್ರಯೋಗಶೀಲ ಹಾಗು ಪರಿಸರದಿ ಕುತೂಹಲ ಗುಣ ಬೆಳೆಸಲು ಆರಂಭಿಕ ತರಗತಿಯಿಂದಲೇ ಕಿರು ಪ್ರಯೋಗಾಲಯಗಳ ಲಭ್ಯತೆಯನ್ನು ಶಾಲೆಗಳು ಖಾತರಿ ಪಡಿಸಬೇಕು.

ಲೇಖನ: ಟಿ.ಪಿ.ಉಮೇಶ್‌, ರಾಷ್ಟ್ರಪ್ರಶಸ್ತಿ ಪಡೆದ ಶಿಕ್ಷಕ, ಚಿತ್ರದುರ್ಗ

ಶಿಕ್ಷಣ ಯಾವತ್ತೂ ನಿರಂತರವಾದ ಪ್ರಕ್ರಿಯೆ. ಅದು ನಿಂತ ನೀರಲ್ಲ, ಹರಿವ ತೊರೆ. ಅನವರತ ಬೀಸುವ ಗಾಳಿ. ನಿತ್ಯ ಹೊಸತಾಗುವ ಚಿಗುರು. ಕಾಲಕ್ಕೆ ತಕ್ಕಂತೆ ಮಾನವನ ಬುದ್ಧಿಶಕ್ತಿ ಮನೋಭಾವಕ್ಕೆ ತಕ್ಕಂತೆ ನಾಗರೀಕತೆಯ ಅವಶ್ಯಕತೆಗಳಿಗೆ ತಕ್ಕಂತೆ ಶಿಕ್ಷಣವು ಬದಲಾಗಲೇಬೇಕು. ಒಂದು ದೃಷ್ಟಿಯಿಂದ ಶಿಕ್ಷಣದಿಂದಲೇ ಸಮಾಜ ಮತ್ತು ನಾಗರೀಕತೆಯ ಪ್ರಗತಿಯುತ ಬದಲಾವಣೆಯೂ ಸಾಧ್ಯ

Teachers Day 2022: ಶಿಕ್ಷಕರು ಜೀವನದಲ್ಲಿ ಯಾಕೆ ಮುಖ್ಯ ಗೊತ್ತಾ?

ಶಿಕ್ಷಣದಿಂದ ಬದಲಾವಣೆಯೆಷ್ಟುಆಗುವುದೋ ಹಾಗೆಯೇ ಬದಲಾವಣೆಗಾಗಿ ಶಿಕ್ಷಣದ ಸ್ಪಂದನೆಯೂ ಅವಶ್ಯ. ಬೋಧನೆಯಲ್ಲಿ ನಾವಿನ್ಯಯುತ ವಿಧಾನಗಳ ಕಂಡುಕೊಂಡು ಮಕ್ಕಳ ಮನೋ ದೈಹಿಕ ಭಾವನಾತ್ಮಕ ಜ್ಞಾನಾತ್ಮಕ ವಿಕಾಸಕ್ಕೆ ಇಂದು ಶ್ರಮಿಸಬೇಕಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕನಾಗಿರುವ ನಾನು ಇಂದಿನ ನಾಗಲೋಟದಿ ಬೆಳೆಯುತ್ತಿರುವ ತಾಂತ್ರಿಕತೆ, ನಗರೀಕರಣ, ಕೈಗಾರೀಕರಣ, ಸಂವಹನ ಸಂಪರ್ಕ ಮಾಧ್ಯಮಗಳಲ್ಲಾಗುತ್ತಿರುವ ವೇಗ, ಆರ್ಥಿಕತೆ, ಸೈನಿಕ ಬಲವನ್ನೇ ಅವಲಂಬಿಸಿದ ದೇಶಗಳ ಬಲಾಬಲಗಳ ಲೆಕ್ಕಾಚಾರ, ಎಲ್ಲ ಕ್ಷೇತ್ರಗಳ ಹರಡಿಕೊಂಡಿರುವ ವ್ಯಾವಹಾರಿಕತೆ ಎಲ್ಲವನ್ನೂ ಗಮನಿಸುತ್ತಿದ್ದೇನೆ. ಜೊತೆಗೆ ಕೌಟುಂಬಿಕ ಗೌರವ ಘನತೆಗಳಲ್ಲಿ ಕಾಣುತ್ತಿರುವ ಅತೀವ ವಿಘಟನೆ, ಮಾನವೀಯ ಸಂಬಂಧಗಳಲ್ಲಿನ ಶಿಥಿಲತೆ, ಧರ್ಮ ರಾಜಕಾರಣದ ಬಲಿಷ್ಟತೆ ಮುಂತಾದ ದೇಶದ ಮತ್ತು ವಿಶ್ವದ ಪ್ರಸ್ತುತ ಜೀವನದ ಚಲನೆಯಲ್ಲಿ ಆಗುತ್ತಿರುವ ಬದಲಾವಣೆಯಲ್ಲಿ ಶಿಕ್ಷಣವು ತನ್ನ ಮೂಲಭೂತ ಪರಿಕಲ್ಪನೆಯಲ್ಲಿ ಪರಿವರ್ತನೆ ಹೊಂದಲೇಬೇಕಿದೆಯೆಂದು ಈ ಅಂಶಗಳ ಮೂಲಕ ಗುರುತಿಸುತ್ತೇನೆ.

ಕಂಠಪಾಠದ ಕಲಿಕೆಯಿಂದ ಕಂಟಕ: ಪ್ರಾಥಮಿಕ ಕಲಿಕಾ ಹಂತದಿಂದಲೇ ಕೇವಲ ಪಠ್ಯಗಳ ಕಂಠಪಾಠದ ಕಲಿಕೆಯಿಂದ ಮಕ್ಕಳನ್ನು ಮೊದಲು ಹೊರ ತರಬೇಕು. ಅನುಭವಾತ್ಮಕ ಚಟುವಟಿಕೆಗಳ ಮೂಲಕ ಕಲಿಯುವ ಪ್ರಕ್ರಿಯೆಗೆ ಆದ್ಯತೆ ನೀಡಬೇಕು. ಪ್ರಯೋಗಶೀಲ ಹಾಗು ಪರಿಸರದಿ ಕುತೂಹಲ ಗುಣ ಬೆಳೆಸಲು ಆರಂಭಿಕ ತರಗತಿಯಿಂದಲೇ ಕಿರು ಪ್ರಯೋಗಾಲಯಗಳ ಲಭ್ಯತೆಯನ್ನು ಶಾಲೆಗಳು ಖಾತರಿ ಪಡಿಸಬೇಕು. ಪ್ರಾಥಮಿಕ ಕಲಿಕಾ ಹಂತದಿಂದಲೇ ಓದುವಿಕೆ ಕೇವಲ ಪಠ್ಯಗಳಿಗೆ ಸೀಮಿತವಾಗದೆ ವಿಭಿನ್ನ ಪಠ್ಯೇತರ ಮಾನವ ಜೀವನ ಸ್ಪೂರ್ತಿಯ ವಿವಿಧ ಆಯಾಮಗಳ ಓದಿಗೆ ಸಂಪನ್ಮೂಲ ಕೃತಿಗಳ ಅವಲೋಕನಕ್ಕೆ ಕಿರು ಗ್ರಂಥಾಲಯಗಳ ಸ್ಥಾಪನೆಗೆ ಒತ್ತು ನೀಡಬೇಕು.

ಸಾಮಾಜಿಕ ಗುಣಗಳ ಬೆಳೆಸಲು ವಿವಿಧ ಜನಸಮುದಾಯಗಳ ಭೇಟಿ ಹಾಗು ಅವರಲ್ಲಿ ಕೊಂಚ ಸಮಯ ವಾಸ ಅವರ ರೀತಿ ರಿವಾಜುಗಳ ಅಭ್ಯಾಸ ರೂಢಿಸಬೇಕು. ಪ್ರತಿ ಜನಾಂಗವೂ ತನ್ನದೇ ಆದ ಘನತರ ಇತಿಹಾಸ ಜೀವನ ಪದ್ಧತಿ ಹೊಂದಿವೆ. ಅವುಗಳ ಸ್ವಲ್ಪ ಓದಿನಿಂದಷ್ಟೇ ಅರಿವು ಮತ್ತು ಸ್ಪಂದನೆ ಬೆಳೆಯದು. ಅವರಲ್ಲಿದ್ದು ಬದುಕುವ ನಿಜವಾದ ಸಹನೆಯನ್ನು ಪ್ರಸ್ತುತ ಶಿಕ್ಷಣ ಆರಂಭಿಕ ಹಂತದಿಂದಲೇ ಬೆಳೆಸಬೇಕು. ಮನುಷ್ಯ ಮನುಷ್ಯರ ನಡುವೆ ಪರಸ್ಪರ ಪ್ರೀತಿ ಗೌರವ ವಿಶ್ವಾಸ ಮೂಡಿಸುವ ಸಾಂಸ್ಕೃತಿಕ ಸಾಹಿತ್ಯಿಕ ಸಂಘಟನಾತ್ಮಕ ಕಾರ್ಯಗಳ ಕಾಲಾನುಕಾಲ ಶೈಕ್ಷಣಿಕ ಸಂಸ್ಥೆಗಳು ನಡೆಸುತ್ತಿರಬೇಕು.

ಏಕರೂಪದ ಶಿಕ್ಷಣ, ಪಠ್ಯಕ್ರಮ ಅಗತ್ಯ: ರೈತ, ಸೈನಿಕ, ವಿಜ್ಞಾನಿ, ಶಿಕ್ಷಕರು ದೇಶದ ನಾಲ್ಕು ದಿಕ್ಕುಗಳು. ಆರ್ಥಿಕ ಸಬಲತೆ ಜೊತೆ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಉಳಿಸಲು ಬೆಳೆಸಲು ಅಬಲ, ದುರ್ಬಲ ವರ್ಗಗಳ ಉದ್ಧಾರಕ್ಕೆ ಅಗತ್ಯ ನೆರವು ನೀಡುವ ಸೃಜನಶೀಲ ಉದಾರತೆಯನ್ನು ಶಿಕ್ಷಣ ಹೊಂದಬೇಕು. ನೌಕರಿ ಗಳಿಕೆಯೊಂದೇ ಓದಿನ ಅಥವಾ ಶಿಕ್ಷಣದ ಗುರಿಯಲ್ಲ. ಡಾಕ್ಟರ್‌, ಲಾಯರ್‌, ಪ್ರೊಫೆಸರ್‌, ಎಂಜಿನಿಯರ್‌, ಪತ್ರಕರ್ತ, ರಾಜಕಾರಣಿ ಜೊತೆ ಜೊತೆಗೆ ಉತ್ತಮ ಅಣ್ಣ ತಮ್ಮ, ಅಕ್ಕ ತಂಗಿ, ಬಂಧು ಬಳಗ, ನೆರೆಹೊರೆ, ಗಂಡು ಹೆಣ್ಣುಗಳ ನಿರ್ಮಾಣವೂ ಶಿಕ್ಷಣದ ಅವಿಭಾಜ್ಯ ಗುರಿಯಾಗಬೇಕು. ಮಾನವ ಕಲ್ಯಾಣಕ್ಕಾಗಿಯೇ ಶಿಕ್ಷಣ. ಆಧುನಿಕ ಕಾಲದ ಬಹು ಆಯಾಮದ ಬೇಡಿಕೆಗಳಿಗೆ ಶಿಕ್ಷಣವು ಸಕಾಲಿಕ ಸ್ಪಂದಿಸಲು, ಸರ್ಕಾರಿ ಖಾಸಗಿ ಶಿಕ್ಷಣದ ಮೇಲು-ಕೀಳು ದೂರ ಮಾಡಲು ಏಕರೂಪದ ಶಿಕ್ಷಣ ಹಾಗು ಪಠ್ಯಕ್ರಮ ಜಾರಿಯಾಗಬೇಕು.

Teachers Day : ನಿಮ್ಮ ಫೆವರಿಟ್ ಟೀಚರ್ ಗೆ ಕೊಡಬಹುದಾದ ಬೆಸ್ಟ್ ಗಿಫ್ಟ್!

ಭಾಷೆಗಳ ಕಲಿಕೆಯಲ್ಲಿ ಮುಕ್ತ ಅವಕಾಶ ಸ್ವತಂತ್ರತೆ ಅಳವಡಿಸಬೇಕು. ಮಕ್ಕಳಿಂದ ಮಾನವ ಹಾಗಾಗಿ ಇಂದಿನ ಮಕ್ಕಳ ಬಹುಮುಖ ಪ್ರತಿಭೆಯ ವಿಕಾಸಕ್ಕೆ ಶಿಕ್ಷಕರು ಮತ್ತು ಅವರ ಬೋಧನೆಯೇ ದಾರಿದೀಪ. ಮಕ್ಕಳ ಪ್ರಗತಿಗಾಗಿ ಶ್ರಮಿಸುವುದೇ ಶಿಕ್ಷಕರ ಧರ್ಮ. ಸಮಾಜ ಸರ್ಕಾರ ಶಿಕ್ಷಕರಿಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಶಿಕ್ಷಕರಾದ ನಾವು ಈ ಸಮಾಜದ ಸುಸ್ಥಿರತೆಗೆ ಸರ್ಕಾರದ ಸುಭದ್ರತೆಗೆ ಮಾನವ ಕುಲದ ಏಳ್ಗೆಗೆ ಏನು ನೀಡುತ್ತಿದ್ದೇವೆ ಎಂದು ಸದಾ ಚಿಂತಿಸುತ್ತ ಮುನ್ನಡೆಯಬೇಕು. ಹೀಗಾದರೆ ಮಾತ್ರ ಎಂಥ ಜಟಿಲ ಸಮಸ್ಯೆ, ಸವಾಲುಗಳನ್ನು ನಿರಾತಂಕವಾಗಿ ಎದುರಿಸುವ ಚೈತನ್ಯ ಮೈಗೂಡುವುದು.

click me!