
ಧಾರವಾಡ ಅ.17 : ಧಾರವಾಡದ ಗಾಳಿ, ಬೆಳಕು, ನೀರು ಹಾಗೂ ನೆಲದಲ್ಲಿ ವಿದ್ಯೆಯ ಕಂಪನ ಇದೆ. ಇಂತಹ ಸ್ಥಳದಲ್ಲಿ ವಿಶ್ವೇಶತೀರ್ಥ ಗುರುಗಳ ಹೆಸರಿನಲ್ಲಿ ಶಾಲೆ ಆರಂಭಿಸುತ್ತಿರುವುದು ಸಂತೋಷದ ಸಂಗತಿ ಎಂದು ಉಡುಪಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಪೇಜಾವರ ಅಧೋಕ್ಷಜ ಮಠದ ರಾಮ-ವಿಠ್ಠಲ್ ಟ್ರಸ್ಟ್ ವತಿಯಿಂದ ಇಲ್ಲಿನ ಹನುಮಂತನಗರದಲ್ಲಿ ಆರಂಭವಾಗುವ ಶ್ರೀ ವಿಶ್ವೇಶತೀರ್ಥ ಸಾರ್ವಜನಿಕ (ಪಬ್ಲಿಕ್) ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
Dharwad Floods: ಸಾಧಾರಣ ಮಳೆಗೂ ಮಹಾನಗರ ತಲ್ಲಣ!
ಈ ಶಾಲೆಯಲ್ಲಿ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡದೆ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡಲು ಹೆಚ್ಚಿನ ಮಹತ್ವ ನೀಡಲಾಗುವುದು. ಶಾಲೆ ನಿರ್ಮಾಣ ಬಹಳ ವರ್ಷಗಳ ಕನಸಾಗಿತ್ತು. ಇದೀಗ ಈಡೇರಿದೆ. ಕಟ್ಟಡ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಲು ಮುಂದೆ ಬಂದಿದ್ದಾರೆ. ಒಂದು ವರ್ಷದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದರು. ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಬಡ ಕುಟುಂಬಗಳು ನೆಲೆಸಿರುವ ಈ ಪ್ರದೇಶದಲ್ಲಿ ಈ ಶಾಲೆಯಿಂದ
ಅವರ ಶಿಕ್ಷಣಕ್ಕೆ ಸಾಕಷ್ಟುಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಶಾಲಾ ಕಟ್ಟಡ ನಿರ್ಮಾಣ ಸೇರಿ ಬಡಾವಣೆ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಪಾಲಿಕೆಯಿಂದ ರಸ್ತೆ ನಿರ್ಮಾಣಕ್ಕೆ . 10 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು.
ಪಾಲಿಕೆ ಸದಸ್ಯ ಶಿವು ಹಿರೇಮಠ ಮಾತನಾಡಿ, ಧಾರವಾಡದಲ್ಲಿ ಶಿಕ್ಷಣ ಸಂಸ್ಥೆಗಳು ಆರಂಭವಾಗಲು ಶ್ರೀವಿಶ್ವೇಶತೀರ್ಥ ಶ್ರೀಪಾದರೇ ನಾಂದಿ ಹಾಡಿದವರು. ಇದೀಗ ಅವರ ಹೆಸರಲ್ಲೇ ಸಂಸ್ಥೆ ಆರಂಭವಾಗುತ್ತಿರುವುದು ಹೆಮ್ಮೆಯ ಸಂಗತಿ. ಸ್ಥಳೀಯ ಸಚಿವರು, ಸಂಸದರು ಸೇರಿ ಎಲ್ಲರ ಸಹಕಾರದಿಂದ ಸಕಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಎಲ್ ಕೆ ಅಡ್ವಾಣಿ ಭೇಟಿ ಮಾಡಿದ ಪೇಜಾವರ ಶ್ರೀಗಳು
ವಿನೋದ ಅಣ್ಣಿಗೇರಿ ಪ್ರಾಸ್ತಾವಿಕ ಮಾತನಾಡಿ, ಸದ್ಯ ಮಾಳಮಡ್ಡಿಯ ಕಟ್ಟಡವೊಂದರಲ್ಲಿ ಜೂನ್ನಿಂದ ಶಾಲೆ ಆರಂಭವಾಗಲಿದೆ. ಮೌಲ್ಯಯುತ ಶಿಕ್ಷಣದೊಂದಿಗೆ ವೇದ ಗಣಿತ, ಸಂಸ್ಕೃತ ಸಹ ಕಲಿಸಲಾಗುವುದು ಎಂದು ತಿಳಿಸಿದರು. ಶಾಲೆ ಗೌರವಾಧ್ಯಕ್ಷ ಡಾ. ಎಸ್.ಆರ್. ಕೌಲಗುಡ್ಡ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ವಿಷ್ಣುತೀರ್ಥ ಕೊರ್ಲಹಳ್ಳಿ, ಮುಖಂಡರಾದ ಕೃಷ್ಣ ದೇಶಪಾಂಡೆ, ನೀಲಾಂಬರಿ ದೇಶಪಾಂಡೆ, ಎಸ್.ಬಿ. ದ್ವಾರಪಾಲಕ, ಆರ್.ಎಂ. ಕುಲಕರ್ಣಿ, ಪ್ರತಾಪ್ ಚವ್ಹಾಣ ಇದ್ದರು. ಸತ್ಯಮೂರ್ತಿ ಆಚಾರ್ ನಿರೂಪಿಸಿದರು.