Bengaluru university: ಪಿಎಚ್‌ಡಿ ಎಂಟ್ರಿ ಟೆಸ್ಟಲ್ಲಿ ಲೋಪ, ವಿಸಿಗೆ ಪತ್ರ ಬರೆದು ವಿದ್ಯಾರ್ಥಿಗಳು ಅಸಮಾಧಾನ

By Kannadaprabha NewsFirst Published Jul 17, 2023, 7:56 AM IST
Highlights

ಭಾನುವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 2023-24ನೇ ಸಾಲಿನ ಪಿಎಚ್‌ಡಿ ಪದವಿ ಪ್ರವೇಶ ಪರೀಕ್ಷೆಯಲ್ಲಿ ಲೋಪದೋಷಗಳ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ಕುಲಪತಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಬೆಂಗಳೂರು (ಜು.17) :  ಭಾನುವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 2023-24ನೇ ಸಾಲಿನ ಪಿಎಚ್‌ಡಿ ಪದವಿ ಪ್ರವೇಶ ಪರೀಕ್ಷೆಯಲ್ಲಿ ಲೋಪದೋಷಗಳ ಆರೋಪ ಕೇಳಿಬಂದಿದ್ದು, ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ಕುಲಪತಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಒಂದು ಕೇಂದ್ರದಲ್ಲಿ ತಡವಾಗಿ ಪರೀಕ್ಷೆ ಆರಂಭವಾಗಿರುವುದು, ಒಎಂಆರ್‌ ಶೀಟ್‌ನಲ್ಲಿ ಕಾರ್ಬನ್‌ ಶೀಟ್‌ ಇಲ್ಲದಿರುವುದು ಸೇರಿದಂತೆ ಹಲವು ಲೋಪಗಳಾಗಿದ್ದು, ಇದು ಅಕ್ರಮಗಳಿಗೂ ಸಹಕಾರಿಯಾಗಬಹುದು ಎಂದು ವಿದ್ಯಾರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Latest Videos

 

ಬೆಂಗಳೂರು ಉತ್ತರ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಚಾಲನೆ, 172 ಎಕರೆ ಪ್ರದೇಶದಲ್ಲಿ ನಿರ್ಮಾಣ

ಪಿಎಚ್‌.ಡಿಗೆ ಅರ್ಜಿ ಸಲ್ಲಿಸಿದ್ದ ಎರಡು ಸಾವಿರ ಅಭ್ಯರ್ಥಿಗಳ ಪೈಕಿ 1,700 ಅಭ್ಯರ್ಥಿಗಳು ಭಾನುವಾರ ನಾಗರಬಾವಿ ಕೆಎಲ್‌ಇ ಕಾಲೇಜು ಮತ್ತು ಕೆಂಗೇರಿಯ ಶೇಷಾದ್ರಿಪುರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ ಪರೀಕ್ಷೆ ಬರೆದರು. ಕೆಎಲ್‌ಇ ಕಾಲೇಜಿನಲ್ಲಿ ಅಭ್ಯರ್ಥಿ ಒಬ್ಬ ಫೋನ್‌ ಇಟ್ಟುಕೊಂಡು ಪರೀಕ್ಷೆ ಬರೆದಿದ್ದು, ಆಭ್ಯರ್ಥಿಯನ್ನು ಡಿಬಾರ್‌ ಮಾಡಿ, ನಕಲು ಯತ್ನದ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಶೇಷಾದ್ರಿಪುರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳಿಗೆ 10-15 ನಿಮಿಷ ತಡವಾಗಿ ಪ್ರಶ್ನೆ ಪತ್ರಿಕೆ ತಲುಪಿದೆ. ತಡವಾಗಿದ್ದ ಕಾರಣಕ್ಕೆ ವಿದ್ಯಾರ್ಥಿಗಳಿಗೆ 15 ನಿಮಿಷಗಳ ಹೆಚ್ಚಿನ ಸಮಯವಕಾಶವನ್ನು ನೀಡಲಾಗಿದೆ. ಬಹಳ ಮುಖ್ಯವಾಗಿ ಪ್ರತಿ ಬಾರಿ ಒಎಂಆರ್‌ ಶೀಟ್‌ನಲ್ಲಿ ಕಾರ್ಬನ್‌ ಕಾಪಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೇವಲ ಒಎಂಆರ್‌ ಶೀಟ್‌ ಮಾತ್ರ ನೀಡಿದ್ದು, ಕಾರ್ಬನ್‌ ಕಾಪಿ ನೀಡಿಲ್ಲ. ಇದರಿಂದ ಅಭ್ಯರ್ಥಿಗಳು ತಾವು ಬರೆದ ಉತ್ತರಗಳಲ್ಲಿ ಸರಿ ತಪ್ಪನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಿಕೊಳ್ಳಲು ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

 

ಪದವಿ ಪರೀಕ್ಷೆ ಬರೆದು 10 ವರ್ಷಗಳ ಬಳಿಕ ಫಲಿತಾಂಶ.!: ಬೆಂಗಳೂರು ವಿವಿ ಎಡವಟ್ಟು

ಅಧಿಕಾರಿಗಳು ಏನಂತಾರೆ

ಪ್ರತಿ ವಿದ್ಯಾರ್ಥಿಯನ್ನೂ ತಪಾಸಣೆ ನಡೆಸಿ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ. ಆದರೆ, ಒಬ್ಬ ವಿದ್ಯಾರ್ಥಿ ಸಣ್ಣ ಮೊಬೈಲ್‌ವೊಂದನ್ನು ಕೇಂದ್ರದೊಳಗೆ ಕೊಂಡೊಯ್ದಿದ್ದ. ನಂತರ ಸಿಕ್ಕಿ ಬಿದ್ದಿದ್ದು ಆತನ ಮೇಲೆ ನಕಲು ಪ್ರಕರಣ ದಾಖಲಿಸಲಾಗಿದೆ. ಶೇಷಾದ್ರಿಪುರ ಕಾಲೇಜು ಸೆಂಟರ್‌ಗೆ ಪ್ರಶ್ನೆ ಪತ್ರಿಕೆ ತಲುಪಲು ಕೆಲ ನಿಮಿಷ ತಡವಾಯಿತು. ಇದಕ್ಕೆ ಹೆಚ್ಚುವರಿ ಸಮಯ ನೀಡಲಾಗಿತ್ತು. ಇನ್ನು, ಕಳೆದ ಬಾರಿ ಕೂಡ ಒಎಂಆರ್‌ ಶೀಟ್‌ನಲ್ಲಿ ಕಾರ್ಬನ್‌ ಶೀಟ್‌ ನೀಡಿರಲಿಲ್ಲ. ಹಾಗಾಗಿ ಈ ಬಾರಿಯೂ ನೀಡಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಸಿ.ಶ್ರೀನಿವಾಸ್‌ ಹೇಳಿದ್ದಾರೆ.

click me!