ಬ್ರಿಟನ್‌ನ 20 ವಿವಿ ಕುಲಪತಿಗಳ ನಿಯೋಗದಿಂದ ಜೂನ್ 9ರಂದು ಕರ್ನಾಟಕ ಭೇಟಿ

By Suvarna NewsFirst Published May 31, 2022, 11:44 AM IST
Highlights

 ಜೂನ್ 9ರಂದು ಬ್ರಿಟನ್ ನ 20 ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗ ಕರ್ನಾಟಕಕ್ಕೆ ಬರುತ್ತಿದ್ದು, ಬ್ರಿಟನ್ ಮತ್ತು ದಾವೋಸ್ ಪ್ರವಾಸ ಯಶಸ್ವಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಬೆಂಗಳೂರು (ಮೇ.31): ಬ್ರಿಟನ್ (United Kingdom or  Britain) ಮತ್ತು ದಾವೋಸ್ (Davos) ಪ್ರವಾಸ ಯಶಸ್ವಿಯಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪಾಲುದಾರಿಕೆ ವಹಿಸಲು ಹಲವು ರಾಷ್ಟ್ರಗಳು ಆಸಕ್ತಿ ತೋರಿವೆ. ಜೂನ್ 9ರಂದು ಬ್ರಿಟನ್ ನ 20 ವಿಶ್ವವಿದ್ಯಾಲಯಗಳ ಕುಲಪತಿಗಳ (vice chancellors ) ನಿಯೋಗ ಕರ್ನಾಟಕಕ್ಕೆ ಬರುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ (C N Ashwath Narayan) ಅವರು ಸೋಮವಾರ ಹೇಳಿದ್ದಾರೆ. 

ಆ ದೇಶದಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಶೈಕ್ಷಣಿಕ ಸಮಾವೇಶ ಮತ್ತು ವರ್ಲ್ಡ್ ಎಜುಕೇಷನ್ ಫೋರಂ (ಡಬ್ಲ್ಯುಇಎಫ್) ಅಧಿವೇಶನದಲ್ಲಿ ಭಾಗವಹಿಸಲು ತೆರಳಿದ್ದ ಸಚಿವರು, ಅಲ್ಲಿನ ಫಲಶ್ರುತಿ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. 

ರಾಜ್ಯದಲ್ಲಿರುವ ಉನ್ನತ ಶಿಕ್ಷಣ (higher education) ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಚಾಲನೆ ನೀಡುವುದು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳುವ ಉದ್ದೇಶದಿಂದ ಯುನೈಟೆಡ್ ಕಿಂಗ್ಡಂನ 20 ಕುಲಪತಿಗಳ ತಂಡವು ಜೂನ್ 9 ಮತ್ತು 10ರಂದು ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದು ಹೇಳಿದರು.

KUVEMPU ROW; ರೋಹಿತ್ ಚಕ್ರತೀರ್ಥ ಪದಚ್ಯುತಿಗೆ ಗಣ್ಯರಿಂದ ಸಿಎಂ ಮೇಲೆ ಒತ್ತಡ

ತಮ್ಮ ಇಂಗ್ಲೆಂಡ್ ಪ್ರವಾಸವು ಫಲಪ್ರದವಾಗಿದ್ದು, ರಾಜ್ಯದ ಉನ್ನತ ಶಿಕ್ಷಣ ವಲಯವನ್ನು ಜಾಗತಿಕ ಗುಣಮಟ್ಟಕ್ಕೆ ಕೊಂಡೊಯ್ಯಲು ಅಗತ್ಯವಿರುವ ಹಲವು ಉಪಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಕೈ ಜೋಡಿಸಲು ಯುನೈಟೆಡ್ ಕಿಂಗ್ಡಂನ ವಿ.ವಿ.ಗಳು ಕೂಡ ಉತ್ಸುಕವಾಗಿವೆ. ಇದಕ್ಕೆ ಪೂರಕವಾಗಿ ಆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಉನ್ನತಾಧಿಕಾರಿಗಳ ತಂಡವು ಈ ವರ್ಷದ ಸೆಪ್ಟೆಂಬರಿನಲ್ಲಿ ಕರ್ನಾಟಕಕ್ಕೆ ಬರಲಿದ್ದು, ಕೌಶಲ್ಯ ಪೂರೈಕೆ ಶಿಕ್ಷಣದ ಬಗ್ಗೆ ಚರ್ಚಿಸಲಿದೆ’ ಎಂದರು.

ಎನ್ಇಪಿ ಮೂಲಕ ಭಾರತೀಯ ಮಾದರಿಯ ಕಲಿಕೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರ ಜತೆಯಲ್ಲೇ ಜಾಗತಿಕ ಸ್ಪರ್ಧೆಗೂ ನಮ್ಮ ಮಕ್ಕಳನ್ನು ಅಣಿಗೊಳಿಸಬೇಕು. ಇದಕ್ಕಾಗಿ, ರಾಜ್ಯ ಮತ್ತು ಯು.ಕೆ.ಯಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಗಳ ನಡುವೆ ಬಹುವಾರ್ಷಿಕ ಯೋಜನೆಗಳಿಗೆ ಮುಂಬರುವ ದಿನಗಳಲ್ಲಿ ಅಂಕಿತ ಹಾಕಲಾಗುವುದು ಎಂದು ಅವರು ತಿಳಿಸಿದರು.

ಪ್ರವಾಸದ ಅವಧಿಯಲ್ಲಿ ತಮ್ಮ ನೇತೃತ್ವದ ರಾಜ್ಯದ ನಿಯೋಗವು ಹಲವು ಚರ್ಚಾಗೋಷ್ಠಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು. ಅಲ್ಲದೆ, ಅಲ್ಲಿನ ಸ್ಕಾಟ್ಲೆಂಡ್ ಮತ್ತು ವೇಲ್ಸ್ ನಲ್ಲಿನ ಅಧಿಕಾರಿಗಳು ಮತ್ತು ಸರಕಾರದೊಂದಿಗೆ ಫಲಪ್ರದ ಮಾತುಕತೆ ನಡೆಸಲಾಗಿದೆ. ನಿರ್ದಿಷ್ಟವಾಗಿ ಕರ್ನಾಟಕ ಮತ್ತು ಒಟ್ಟಾರೆಯಾಗಿ ಭಾರತವನ್ನು ವಿದೇಶಿ ವಿದ್ಯಾರ್ಥಿಗಳ ಪಾಲಿಗೆ ಆಕರ್ಷಕ ತಾಣವನ್ನಾಗಿ ಮಾಡುವ ಉದ್ದೇಶ ಇದರ ಹಿಂದಿದೆ ಎಂದು ಸಚಿವರು ಮಾಹಿತಿ ನೀಡಿದರು.

UPSC Result 2021 ಮೊದಲ ಯತ್ನದಲ್ಲೇ Davanagere ಅವಿನಾಶ್‌ಗೆ 31ನೇ ರ‍್ಯಾಂಕ್‌!

ರಾಜ್ಯ ನಿಯೋಗವು ಅಲ್ಲಿನ ಎಡಿನ್ಬರ್ಗ್ ವಿ.ವಿ.ಯ ರಾಯಲ್ ಸೊಸೈಟಿ, ದಂಡೀ ಯೂನಿವರ್ಸಿಟಿ, ಗ್ಲಾಸ್ಗೋ ಯೂನಿವರ್ಸಿಟಿ ಮತ್ತು ಯೂನಿವರ್ಸಿಟಿ ಆಫ್ ವೆಸ್ಟ್ ಆಫ್ ಸ್ಕಾಟ್ಲೆಂಡ್ ಗಳಿಗೆ ಭೇಟಿ ನೀಡಿತ್ತು. ಇಲ್ಲಿ ಕ್ರಮವಾಗಿ ಬಹುಶಿಸ್ತೀಯ ಅಧ್ಯಯನ ಕೇಂದ್ರ, ಜೀವವಿಜ್ಞಾನ ಸಂಶೋಧನೆ ಮತ್ತು ಸೈಬರ್ ಸೆಕ್ಯುರಿಟಿ, ಸಾಮಾಜಿ ವಿಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ನವೀಕರಿಸಬಹುದಾದ ಇಂಧನಗಳು ಹಾಗೂ ಸೆಮಿಕಂಡಕ್ಟರ್ಸ್ ಕ್ಷೇತ್ರಗಳ ಅಧ್ಯಯನ ಸಂರಚನೆಯ ಬಗ್ಗೆ ತಿಳಿದುಕೊಳ್ಳಲಾಯಿತು ಎಂದು ಅಶ್ವತ್ಥನಾರಾಯಣ ವಿವರಿಸಿದರು.

ಎನ್ಇಪಿ ಮೂಲಕ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಒತ್ತು ಕೊಡಲಾಗುತ್ತಿದೆ. ನಮ್ಮ ಶಿಕ್ಷಣವನ್ನು ವಿಶ್ವದರ್ಜೆಯದನ್ನಾಗಿ ಮಾಡಲು ಇದು ಅಗತ್ಯವಾಗಿದೆ. ಇದರ ಭಾಗವಾಗಿ ಪಠ್ಯಕ್ರಮದಲ್ಲೇ ಕೌಶಲ್ಯ ಕಲಿಕೆಗೂ ಆದ್ಯತೆ ಕೊಡಲಾಗುತ್ತಿದೆ. ಇದರಿಂದ ದೇಶದ ಉತ್ಪಾದಕತೆಯೂ ಹೆಚ್ಚುತ್ತದೆ. ಹೀಗಾಗಿ, ಎಡಿನ್ಬರ್ಗ್ ವಿ.ವಿ.ಯ ಒಂದು ಕ್ಯಾಂಪಸ್ಸನ್ನು ಬೆಂಗಳೂರಿನಲ್ಲಿ ತರೆಯುವಂತೆ ಕೋರಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಚಿವರೊಂದಿಗೆ ಯುನೈಟೆಡ್ ಕಿಂಗ್ಡಂಗೆ ತೆರಳಿದ್ದ ರಾಜ್ಯ ನಿಯೋಗದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಕುಲಪತಿ ಪ್ರೊ.ಭಾನುಮತಿ, ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಮತ್ತು ಆಡಳಿತಾಧಿಕಾರಿ ಡಾ.ಟಿ.ಎನ್. ತಾಂಡವ ಗೌಡ ಇದ್ದರು. 

click me!