
ಲಿಂಗಸುಗೂರು(ರಾಯಚೂರು) (ಜು.22)
ಜಿಲ್ಲೆಯಲ್ಲಿ ಇತ್ತೀಚೆಗೆ ಪೌಷ್ಟಿಕ ಹಾಲಿನ ಪುಡಿ ದನದ ಕೊಟ್ಟಿಗೆಯಲ್ಲಿ ಪತ್ತೆಯಾದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಘಟನೆ ನಾಗರಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿತರಿಸಬೇಕಾದ 50,000ಕ್ಕೂ ಅಧಿಕ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಶಿಕ್ಷಣ ಇಲಾಖೆಯ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಲಿಂಗಸುಗೂರು ತಾಲೂಕಿನ ಗುರುಗುಂಟಾದ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಬೇಕಾದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮಾತ್ರೆಗಳನ್ನು ಶೌಚಾಲಯದಲ್ಲಿ ಎಸೆದಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಮಾಕಾಪುರ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಡಬ್ಲೂಐಎಫ್ಎಸ್ ಮಾತ್ರೆಗಳಾದ ಪಿಂಕ್ ಮತ್ತು ಬ್ಲೂ ಮಾತ್ರೆಗಳು 2015ಅ.15ರಿಂದ 2017ಸೆ.17ರವರೆಗೆ ಅವಧಿ ಹೊಂದಿದ್ದು, ಬ್ಯಾಚ್ ಸಂಖ್ಯೆ ಐಎಫ್ಒ 039 ಎಂಬುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ವಶಕ್ಕೆ ಪಡೆದ ಮಾತ್ರೆಗಳನ್ನು ಮುಂದಿನ ಆದೇಶದವರೆಗೂ ಗುರುಗುಂಟಾದಲ್ಲಿರುವ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರದಲ್ಲಿ ಇರಿಸಲಾಗಿದೆ. ಐರನ್ ಮಾತ್ರೆಗಳನ್ನು ಮಕ್ಕಳಿಗೆ ನೀಡದೇ ಶೌಚಾಲಯದಲ್ಲಿ ಬೇಕಾಬಿಟ್ಟಿ ಎಸೆದ ಪ್ರಕರಣ ಶಿಕ್ಷಕರ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ.
ಘಟನೆ ಸಂಬಂಧ ಮಕ್ಕಳಿಗೆ ಮಾತ್ರೆಗಳು ಏಕೆ ವಿತರಣೆ ಮಾಡಿಲ್ಲ ಎಂದು ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಜು.13ರಂದು ನೋಟಿಸ್ ನೀಡಿದ್ದಾರೆ.