PUC Supplementary Exam Results: ಪಿಯು ಪೂರಕ ಪರೀಕ್ಷೆಯಲ್ಲಿ 37.08% ವಿದ್ಯಾರ್ಥಿಗಳು ಪಾಸ್‌

By Kannadaprabha NewsFirst Published Sep 13, 2022, 10:10 AM IST
Highlights

ಬಾಲಕಿಯರು, ನಗರದ ವಿದ್ಯಾರ್ಥಿಗಳು ಮೇಲುಗೈ, ಸ್ಕ್ಯಾನಿಂಗ್‌ ಪ್ರತಿಗೆ ಅರ್ಜಿ ಸಲ್ಲಿಸಲು ಸೆ.15 ಕೊನೆ ದಿನ

ಬೆಂಗಳೂರು(ಸೆ.13):  ಆಗಸ್ಟ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ನಿನ್ನೆ(ಸೋಮವಾರ) ಪ್ರಕಟವಾಗಿದ್ದು, ಶೇ.37.08ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಕಳೆದ ಏಪ್ರಿಲ್‌/ಮೇ ತಿಂಗಳಿನಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಆ.12ರಿಂದ 25ರವರೆಗೆ ಪರೀಕ್ಷೆ ನಡೆಸಲಾಗಿತ್ತು. ನೋಂದಣಿ ಮಾಡಿಕೊಂಡ 1,85,415 ಅಭ್ಯರ್ಥಿಗಳ ಪೈಕಿ 1,75,905 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 65,233 ಮಂದಿ (ಶೇ.37.08) ಉತ್ತೀರ್ಣರಾಗಿದ್ದಾರೆ. ಫಲಿತಾಂಶವನ್ನು ಪಿಯು ಇಲಾಖೆ ವೆಬ್‌ಸೈಟ್‌ http://pue.karnataka.gov.in ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಬಳಸಿ ಫಲಿತಾಂಶ ವೀಕ್ಷಿಸಬಹುದು ಎಂದು ಪಿಯು ಇಲಾಖೆ ತಿಳಿಸಿದೆ.

Latest Videos

ಸಿಇಟಿ ಕೌನ್ಸೆಲಿಂಗ್‌ ಆ.18ವರೆಗೆ ಇಲ್ಲ: ಹೈಕೋರ್ಟ್‌ನಲ್ಲಿ ದಾವೆ

ಪರೀಕ್ಷೆ ಬರೆದಿದ್ದ 1.04 ಲಕ್ಷ ಬಾಲಕರಲ್ಲಿ 36637 ಮಂದಿ (ಶೇ.34.91) ಹಾಗೂ 70 ಸಾವಿರ ಬಾಲಕಿಯರ ಪೈಕಿ 28,596 ಮಂದಿ (ಶೇ.40.30) ತೇರ್ಗಡೆಯಾಗಿದ್ದಾರೆ. ಇನ್ನು ನಗರ ಪ್ರದೇಶದ ಶೇ.37.28 ಮತ್ತು ಗ್ರಾಮೀಣ ಭಾಗದ ಶೇ.36.36 ರಷ್ಟುವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.34.66, ವಾಣಿಜ್ಯ ವಿಭಾಗದಲ್ಲಿ 34.64 ಮತ್ತು ವಿಜ್ಞಾನ ವಿಭಾಗದಲ್ಲಿ 43.76ರಷ್ಟುಫಲಿತಾಂಶ ಬಂದಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.34.89 ರಷ್ಟುವಿದ್ಯಾರ್ಥಿಗಳು ಹಾಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ.39.35ರಷ್ಟುಮಂದಿ ಉತ್ತೀರ್ಣರಾಗಿದ್ದಾರೆ.

ಸ್ಕ್ಯಾನಿಂಗ್‌ ಪ್ರತಿಗೆ ಅರ್ಜಿ:

ಫಲಿತಾಂಶ ಪಡೆದಿರುವ ಅಭ್ಯರ್ಥಿಗಳು ತಮ್ಮ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್‌ ಪ್ರತಿಗೆ ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನವಾಗಿದೆ. ಸೆ.21ರಿಂದ 24ರೊಳಗೆ ಇಲಾಖೆ ವೆಬ್‌ಸೈಟ್‌ http://pue.karnataka.gov.in ನಲ್ಲಿ ಸ್ಕ್ಯಾನಿಂಗ್‌ ಪ್ರತಿಯನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಸ್ಕ್ಯಾನಿಂಗ್‌ ಪ್ರತಿ ಪಡೆದವರು ಸೆ.21ರಿಂದ 25ರ ವರೆಗೆ ಮರು ಮೌಲ್ಯಮಾಪನ ಹಾಗೂ ಮರು ಎಣಿ ಎಣಿಕೆಗೆ ಅರ್ಜಿ ಸಲ್ಲಿಸಬಹುದು. ಸ್ಕ್ಯಾನಿಂಗ್‌ ಪ್ರತಿ ಪಡೆಯಲು 530 ರು. ಮತ್ತು ಮರು ಮೌಲ್ಯಮಾಪನಕ್ಕೆ 1,670 ರು. ಶುಲ್ಕ ನಿಗದಿಪಡಿಸಿದೆ. ವಿದ್ಯಾರ್ಥಿಗಳಿಗೆ ಫಲಿತಾಂಶ ಕುರಿತಂತೆ ಯಾವುದೇ ಅನುಮಾನ ಮತ್ತು ಗೊಂದಲಗಳಿದ್ದರೆ 080 2308 3860/2308 3864 ಸಂಖ್ಯೆಗೆ ಕರೆ ಮಾಡಬಹುದು ಎಂದು ಪಿಯು ಇಲಾಖೆ ನಿರ್ದೇಶಕ ಆರ್‌.ರಾಮಚಂದ್ರನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!