ಎಸ್ಸೆಸ್ಸೆಲ್ಸಿ ಪರೀಕ್ಷೆ, ದಿನಾಂಕ, ವೇಳಾಪಟ್ಟಿ: ಅಂತಿಮ ನಿರ್ಧಾರ ಪ್ರಕಟಿಸಿದ ಸುರೇಶ್ ಕುಮಾರ್

By Suvarna NewsFirst Published May 15, 2020, 4:36 PM IST
Highlights

ಎಸ್ಸೆಸ್ಸೆಲ್ಸಿ ಪರೀಕ್ಷೆ, ದಿನಾಂಕ, ವೇಳಾಪಟ್ಟಿ ಯಾವಾಗ ಎನ್ನುವ ವಿದ್ಯಾರ್ಥಿಗಳ ಗೊಂದಲಗಳಿಗೆ ಸಚಿವ ಸುರೇಶ್ ಕುಮಾರ್ ತೆರೆ ಎಳೆದಿದ್ದಾರೆ.

ಚಾಮರಾಜನಗರ, (ಮೇ.15): ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಪರೀಕ್ಷೆ ನಡೆಸುವ ಬಗ್ಗೆ ಅಂದು ತೀರ್ಮಾನ ನಡೆಸಲಾಗುವುದು ಎಂದು ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು. 

ಚಾಮರಾಜನಗರದಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು ಸಾಧ್ಯವಾದರೆ ದಿನಾಂಕ ಹಾಗೂ ವೇಳಾಪಟ್ಟಿಯನ್ನೂ ಅಂದೇ ಅಂತಿಮಗೊಳಿಸಲಾಗುತ್ತದೆ ಸ್ಪಷ್ಟಪಡಿಸಿದರು.

ಕರ್ನಾಟಕ ಸಿಇಟಿ ಪರೀಕ್ಷೆ 2020: ವೇಳಾಪಟ್ಟಿ ಪ್ರಕಟ

ಪರೀಕ್ಷೆ ನಡೆಸಲೇಬೇಕು ಎಂಬುದು ಸರ್ಕಾರದ ನಿಲುವು. ಬಹುತೇಕ ಜನರು ಕೂಡ ಇದೇ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಕೆಲವು ಶಿಕ್ಷಣ ತಜ್ಞರು ಪರೀಕ್ಷೆ ಬೇಡ ಎಂಬ ಸಲಹೆಯನ್ನೂ ಕೊಟ್ಟಿದ್ದಾರೆ. ಈ ಬಗ್ಗೆ ಇಲಾಖೆ ಎಲ್ಲರೊಂದಿಗೂ ಮುಕ್ತವಾದ ಚರ್ಚೆ ನಡೆಸಲಾಗುವುದು ಎಂದರು.

ಹೆಚ್ಚು ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು, ಮಕ್ಕಳಿಗೆ ಮಾಸ್ಕ್‌ ವಿತರಿಸಿವುದು, ಸ್ಯಾನಿಟೈಸರ್‌ ಪೂರೈಕೆ, ಪರೀಕ್ಷೆಗಾಗಿ ಸಿದ್ಧತೆ ನಡೆಸುವ ಬಗ್ಗೆ ಸೋಮವಾರದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

10, 12ನೇ ತರಗತಿ ಪರೀಕ್ಷೆಗೆ ದಿನಾಂಕ ಘೋಷಣೆ: ವೇಳಾಪಟ್ಟಿಯೂ ಪ್ರಕಟ

ಲಾಕ್‌ಡೌನ್‌ನಿಂದಾಗಿ ಶೈಕ್ಷಣಿಕ ವರ್ಷದ ಎಷ್ಟು ಅವಧಿ ಕಡಿತ ಆಗುತ್ತದೆ. ಅದಕ್ಕೆ ತಕ್ಕಂತೆ ಎಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಬೇಕು ಎಂಬ ಬಗ್ಗೆ ಅಧ್ಯಯನ ಮಾಡುವ ಜಾವಾಬ್ದಾರಿಯನ್ನು ಡಿಎಸ್‌ಇಆರ್‌ಟಿಗೆ ನೀಡಲಾಗಿದೆ ಎಂದು ವಿವರಿಸಿದರು.

ಕೊರೋನಾ ಲಾಕ್‌ಡೌನ್‌ ಪರಿಣಾಮ ದೇಶದಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನ ಮುಂದೂಡಲಾಗಿದ್ದು, ತಮಿಳುನಾಡು ಸರ್ಕಾರ ಇದೇ ಜೂನ್ 01ರಿಂದ 12 ರವರೆಗೆ ನಡೆಸಲು ತೀರ್ಮಾನಿಸಿದೆ.

ಇನ್ನು ಕರ್ನಾಟಕದಲ್ಲಿ ಜೂನ್‌ ಕೊನೆಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆಗಳು ನಡೆದಿವೆ. ಈ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಈಗಾಗಲೇ ಸುರೇಶ್ ಕುಮಾರ್ ಅವರು ಆಯಾ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಒಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಯಾವಾಗ-ಯಾವಾ? ಎನ್ನುತ್ತಿದ್ದ ವಿದ್ಯಾರ್ಥಿಗಳಿಗೆ ಸೋಮವಾರ ಸಂಜೆ ವೇಳೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.

click me!