2 ದಿನದಲ್ಲಿ ಶಾಲೆ ಆರಂಭದ ಬಗ್ಗೆ ಸ್ಪಷ್ಟರೂಪ: ಸಚಿವ ಸುರೇಶ್‌ ಕುಮಾರ್‌

Kannadaprabha News   | Asianet News
Published : Aug 29, 2020, 09:17 AM ISTUpdated : Aug 29, 2020, 10:05 AM IST
2 ದಿನದಲ್ಲಿ ಶಾಲೆ ಆರಂಭದ ಬಗ್ಗೆ ಸ್ಪಷ್ಟರೂಪ: ಸಚಿವ ಸುರೇಶ್‌ ಕುಮಾರ್‌

ಸಾರಾಂಶ

ಶಿಕ್ಷಕ ಸ್ನೇಹಿ ವರ್ಗ ನೀತಿ ಜಾರಿ: ಸುರೇಶ್‌ ಕುಮಾರ| ಕಡ್ಡಾಯ ವರ್ಗಾವಣೆ ‘ಶಿಕ್ಷೆ’ ಇನ್ನು ಇರಲ್ಲ| ಕಳೆದ ಒಂದು ವರ್ಷದಲ್ಲಿ ಅತ್ಯಂತ ಕಠಿಣ ಸವಾಲುಗಳನ್ನು ನಾವು ಎದುರಿಸಿದ್ದೇವೆ| ನೆರೆ ಹಾವಳಿ, ಕೊರೋನಾ ಹಾವಳಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಆನ್‌ಲೈನ್‌ ಶಿಕ್ಷಣ, ಶಿಕ್ಷಕರ ವರ್ಗಾವಣೆ ನೀತಿ ಸೇರಿದಂತೆ ಅನೇಕ ಸವಾಲುಗಳ ನಡುವೆ ಎಲ್ಲರ ಸಹಕಾರದಿಂದ ಇಲಾಖೆಯಲ್ಲಿ ಕೆಲವು ಸಾಧನೆ ಮಾಡಲು ಸಾಧ್ಯ| 

ಬೆಂಗಳೂರು(ಆ.29): ರಾಜ್ಯದಲ್ಲಿ ಶಾಲೆಗಳು ಯಾವಾಗಿನಿಂದ ಆರಂಭವಾಗಲಿವೆ ಎಂಬುದಕ್ಕೆ ಈ ಮಾಸಾಂತ್ಯದ ವೇಳೆಗೆ ಸ್ಪಷ್ಟರೂಪ ದೊರೆಯುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಶುಕ್ರವಾರ ಮತನಾಡಿದ ಅವರು, ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಇನ್ನೂ ಯಾವುದೇ ಸೂಚನೆಗಳಿಲ್ಲ. ಈ ಮಾಸಾಂತ್ಯದ ವೇಳೆಗೆ ಶಾಲೆಗಳು ಯಾವಾಗ ಅರಂಭಿಸಬಹುದು ಎಂಬುದಕ್ಕೆ ಒಂದು ಸ್ಪಷ್ಟರೂಪ ದೊರೆಯಬಹುದಾಗಿದೆ. ಆ ತನಕವೂ ನಾವು ಶಾಲೆಗಳನ್ನು ಆರಂಭಿಸಲು ಆತುರಪಡುವುದಿಲ್ಲ ಎಂದರು.

6ನೇ ತರಗತಿಯ ವಿವಾದಿತ ಪಾಠ ರದ್ದು: ಸುರೇಶ್‌ ಕುಮಾರ್‌

ಸೆ.2ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು

ಶಿಕ್ಷಕರ ವರ್ಗಾವಣೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿ ಮಾಡಲಾಗಿದ್ದು, ಸೆಪ್ಟೆಂಬರ ಎರಡರಿಂದ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ‘ಶಿಕ್ಷಕ ಮಿತ್ರ ಆ್ಯಪ್‌’ ಬಿಡುಗಡೆ, ‘ಶಿಕ್ಷಣ ಯಾತ್ರೆ’ ಮತ್ತು ‘ವಿದ್ಯಾ ವಿನೀತ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡ್ಡಾಯ ವರ್ಗಾವಣೆ ಶಿಕ್ಷೆ ಇನ್ನು ಮುಂದೆ ಇರುವುದಿಲ್ಲ. ಕಳೆದ ಬಾರಿ ಕಡ್ಡಾಯ ವರ್ಗಾವಣೆಗೊಳಗಾಗಿದ್ದವರಿಗೆ ಈ ಬಾರಿ ಆದ್ಯತೆ ಮೇಲೆ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ಶಿಕ್ಷಣ ವ್ಯವಸ್ಥೆಗೆ ಶಾಶ್ವತ ಕಾಯಕಲ್ಪ ದೊರಕಬೇಕಿದೆ. ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ವೃಂದ-ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು. ಒಂದು ಸಾವಿರ ಉಭಯ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ನೂತನ ರಾಷ್ಟ್ರೀಯ ನೀತಿಯನ್ನು ರಾಜ್ಯ ಅಳವಡಿಸಿಕೊಳ್ಳುವ ಬಗ್ಗೆ ಈಗಾಗಲೇ ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ ಎಂದು ನುಡಿದರು.

ಮಂಡಳಿಗಳ ವಿಲೀನ:

ಪರೀಕ್ಷಾ ಪ್ರಕ್ರಿಯೆ ಸುಲಲಿತವಾಗಿ ನಿರ್ವಹಣೆಯಾಗಲು ಪದವಿ ಪೂರ್ವ ಮತ್ತು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸಲಾಗುವುದು. ಸರ್ಕಾರಿ ಶಾಲೆಗಳನ್ನು ಸ್ವಾಭಿಮಾನಿ ಶಾಲೆಗಳನ್ನಾಗಿ ರೂಪಿಸಲಾಗುವುದು. ಈ ವರ್ಷದಿಂದ ಉತ್ತಮ ಶಾಲೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಉತ್ತಮ ಶಿಕ್ಷಕರನ್ನು ಗುರುತಿಸಿ ಅವರನ್ನು ಆದರ್ಶ ಶಿಕ್ಷಕ ಎಂದು ಗೌರವಿಸಲಾಗುತ್ತದೆ. ಅವರ ಬೋಧನಾ ಕ್ರಮಗಳನ್ನು ಇತರೆಡೆ ಅಳವಡಿಸಿಕೊಳ್ಳುವಲ್ಲಿ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಇದಲ್ಲದೇ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ದೊರಕಿಸುವ ನಿಟ್ಟಿನಲ್ಲಿ ಶಿಕ್ಷಣ ಪರಿಷತ್‌ ಸ್ಥಾಪನೆಗೆ ಕ್ರಮ ವಹಿಸಲಾಗುತ್ತದೆ ಎಂದು ವಿವರಿಸಿದರು.

ಕಳೆದ ಒಂದು ವರ್ಷದಲ್ಲಿ ಅತ್ಯಂತ ಕಠಿಣ ಸವಾಲುಗಳನ್ನು ನಾವು ಎದುರಿಸಿದ್ದೇವೆ. ನೆರೆ ಹಾವಳಿ, ಕೊರೋನಾ ಹಾವಳಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಆನ್‌ಲೈನ್‌ ಶಿಕ್ಷಣ, ಶಿಕ್ಷಕರ ವರ್ಗಾವಣೆ ನೀತಿ ಸೇರಿದಂತೆ ಅನೇಕ ಸವಾಲುಗಳ ನಡುವೆ ಎಲ್ಲರ ಸಹಕಾರದಿಂದ ಇಲಾಖೆಯಲ್ಲಿ ಕೆಲವು ಸಾಧನೆ ಮಾಡಲು ಸಾಧ್ಯವಾಗಿದೆ. ಇಡೀ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ವಿದ್ಯಾಗಮ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಕ್ಕಳ ಕಲಿಕೆಗೆ ತೊಂದರೆಯಾಗದ ಆಕರ್ಷಕ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವ ಮಾದರಿ ಉಪಕ್ರಮ ಇದಾಗಿದೆ ಎಂದರು.

"

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ