'ಕಳೆ' ಆಗಲಿದೆಯೇ ಭವಿಷ್ಯದ ಆಹಾರ?

By Web DeskFirst Published Oct 21, 2016, 4:04 PM IST
Highlights

ಉಪಯೋಗಕ್ಕೆ ಬಾರದು ಎಂದು ನಿರ್ಲಕ್ಷಿಸಿರುವ ಕಳೆ ನಮ್ಮ ಮುಂದಿನ ಭವಿಷ್ಯದ ಆಹಾರವಾಗಲಿದೆ. ಈ ನಿಟ್ಟಿನಲ್ಲಿ ಸಿಎಫ್‌ಟಿಆರ್‌ಐ ಉತ್ತರ ಭಾರತದಲ್ಲಿ ಎರಡು ಜಾತಿಯ ಕಳೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸಿಎಫ್‌ಟಿಆರ್ ನಿರ್ದೇಶಕ ಡಾ. ರಾಮ್ ರಾಜಶೇಖರನ್ ತಿಳಿಸಿದರು.

ಮೈಸೂರು (ಅ.21): ಉಪಯೋಗಕ್ಕೆ ಬಾರದು ಎಂದು ನಿರ್ಲಕ್ಷಿಸಿರುವ ಕಳೆ ನಮ್ಮ ಮುಂದಿನ ಭವಿಷ್ಯದ ಆಹಾರವಾಗಲಿದೆ. ಈ ನಿಟ್ಟಿನಲ್ಲಿ ಸಿಎಫ್‌ಟಿಆರ್‌ಐ ಉತ್ತರ ಭಾರತದಲ್ಲಿ ಎರಡು ಜಾತಿಯ ಕಳೆಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸಿಎಫ್‌ಟಿಆರ್ ನಿರ್ದೇಶಕ ಡಾ. ರಾಮ್ ರಾಜಶೇಖರನ್ ತಿಳಿಸಿದರು.

ಸಿಎಸ್‌ಐಆರ್- ಸಿಎಫ್‌ಟಿಆರ್‌ಐನಲ್ಲಿ ಶುಕ್ರವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅನಾದಿಕಾಲದಲ್ಲಿ ಕಳೆಯೇ ನಮ್ಮ ಆಹಾರವಾಗಿತ್ತು. ಅಂತಹ ಕಾಲ ಮತ್ತೆ ಬರುವ ದಿನಗಳು ದೂರ ಉಳಿದಿಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವ ಆಹಾರವನ್ನು ನಾವು ಸಂಶೋಧಿಸಿಕೊಳ್ಳಬೇಕಿದೆ. ಉತ್ತರ ಭಾರತದಲ್ಲಿ ಅಭಿವೃದ್ದಿಪಡಿಸುತ್ತಿರುವ ಎರಡು ಜಾತಿಯ ಕಳೆಯ ಪೈಕಿ ಒಂದರಿಂದ ಎಣ್ಣೆ ತಯಾರಿಸುವ ಕೆಲಸ ಮುಂದಿನ ವರ್ಷದಿಂದ ಆರಂಭವಾಗಲಿದೆ ಎಂದರು.

ಸಿಎಫ್‌ಟಿಆರ್‌ಐ ಮುಂದಡಿ ಇಟ್ಟಿರುವ ಈ ಹೆಜ್ಜೆಯಿಂದ ನಮ್ಮ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಅನುಕೂಲವಾಗಲಿದೆ. ಆಹಾರ ಒದಗಿಸುವ ಪ್ರಾಥಮಿಕ ಮೂಲವಾದ ರೈತನಿಗೂ ಉಪಯೋಗವಾಗಲಿದೆ. ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳು, ಮಸೀದಿ, ಮಂದಿರಗಳು ಸೇರಿದಂತೆ ಅನೇಕ ಸಂಸ್ಥೆಗಳು ಆರೋಗ್ಯ ಭಾಗ್ಯಕ್ಕಾಗಿ ಹಲವಾರು ಶಿಬಿರಗಳನ್ನು ನಡೆಸುತ್ತವೆ. ಈ ಪ್ರಮಾಣದ ಆರೋಗ್ಯ ತಪಾಸಣೆಯನ್ನು ತಪ್ಪಿಸಬೇಕೆಂದರೆ ನಾವು ಸೇವಿಸುವ ಆಹಾರ ಔಷಧಿಯೂ ಆಗಿರಬೇಕು ಎಂದು ರಾಮ್ ರಾಜಶೇಖರನ್ ಅಭಿಪ್ರಾಯಪಟ್ಟರು.

ಆಹಾರ ತಯಾರಿಸುವಾಗ ಅದು ಎಲ್ಲಾ ರೀತಿಯ ಚಟುವಟಿಕೆಗಳಿಗೆ ಸಹಾಯವಾಗಬೇಕು. ಮಧುಮೇಹ ನಿಯಂತ್ರಣ, ಅಧಿಕ ತೂಕ, ರಕ್ತದೊತ್ತಡ, ಜೀರ್ಣಗೊಳ್ಳುವುದು, ಎಚ್‌ಐವಿ, ಕ್ಯಾನ್ಸರ್ ತಡೆಗಟ್ಟುವಕಿಗೆ ಆಹಾರವೇ ಔಷಧಿಯಾಗಬೇಕು. ರೋಗಗಳನ್ನು ತಡೆಗಟ್ಟುವುದೇ ಅಲ್ಲ, ಆರೋಗ್ಯ ಸಂವೃದ್ಧಿಯಾಗುವ ಆಹಾರ ಪದ್ಧತಿಯನ್ನು ನಾವು ಅನುಸರಿಸಬೇಕು. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಔಷಧಿ ಒದಗಿಸಲು ಸಾಧ್ಯವಿಲ್ಲವಾದ್ದರಿಂದ ಆಹಾರವನ್ನೇ ಔಷಧಿ ರೂಪದಲ್ಲಿ ಸೇವಿಸುವಂತಾಗಬೇಕು ಎಂದು ಅವರು ತಿಳಿಸಿದರು.

ಮಣ್ಣಿಲ್ಲದೆ ಆಹಾರ ಉತ್ಪತ್ತಿ: ನಾವು ಸೇವಿಸುತ್ತಿರುವ ಆಹಾರ ಉತ್ಪಾದನೆ ಮಣ್ಣಿನ್ನು ಆಶ್ರಯಿಸಿದ್ದು, ಮುಂದಿನ ದಿನಗಳಲ್ಲಿ ಮಣ್ಣಿಲ್ಲದೆ ಆಹಾರ ಉತ್ಪಾದನೆ ಮಾಡುವ ಬಗ್ಗೆ ಚಿಂತಿಸಬೇಕಾಗಿದೆ. ಪ್ರಯೋಗಾಲಯದಲ್ಲಿ ಆಹಾರ ಉತ್ಪಾದನೆ ಮಾಡುವಂತೆ, ಅದು ಅಡುಗೆ ಮನೆಗೂ ವಿಸ್ತರಿಸುವಂತಾಗಬೇಕು. ನೂಡಲ್ ತಯಾರಿಸಿಕೊಳ್ಳುವ ಸಂಸ್ಕೃತಿ ಮುಂದಿನ ದಿನಗಳಲ್ಲಿ ಅನುಕೂಲಕ್ಕೆ ಬರಬಹುದು. ಆಹಾರ ಸಂಶೋಧನಾ ವಿಧಾನ ಬದಲಾಗಬೇಕು. ೩ಡಿ ಪ್ರಿಟಿಂಗ್ ರೀತಿಯಲ್ಲಿಯೇ ದೋಸೆ ಪ್ರಿಂಟ್, ಚಾಕಲೆಟ್ ಪ್ರಿಂಟ್ ಮಾಡಿಕೊಳ್ಳುವ ಕಾಲವೂ ಬರಬಹುದು ಎಂದು ರಾಜಶೇಖರನ್ ಭವಿಷ್ಯ ನುಡಿದರು.

 

click me!