Districts
ಯಾಂತ್ರಿಕೃತದ ಮೂಲಕ ನಾಟಿ ಮಾಡುವುದನ್ನು ಹಾಗೂ ಕಳೆ ತೆಗೆಯುವ ಯಂತ್ರವನ್ನು ಪರಿಚಯಿಸಿದ್ದೇವೆ ಈ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಸುಧಾರಣೆ ಸಾಧ್ಯ ಎಂದ ಅವರು, ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಕೃಷಿ ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ 150 ಕೋಟಿ ರು.ಮಂಜೂರು ಮಾಡಿದೆ.
- ಕೃಷಿ ಸಚಿವ ಕೃಷ್ಣ ಭೈರೇಗೌಡ
ಶಿವಮೊಗ್ಗ(ಅ.21): ಕೃಷಿ ಮೇಳಗಳು ಜನರ ಜಾತ್ರೆಗಳಲ್ಲ. ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಿ ಆ ಮೂಲಕ ಕೃಷಿಯಲ್ಲಿ ಲಾಭದಾಯಕವಾಗಲಿ ಎಂಬ ಉದ್ದೇಶದಿಂದ ಆಯೋಜಿಸಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಇಂದು ನಗರದ ಹೊರವಲಯದಲ್ಲಿರುವ ನವುಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದವು ಆಯೋಜಿಸಿದ್ದ 4ನೇ ವರ್ಷದ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಸರ್ಕಾರ ಕೃಷಿ ವಿಶ್ವವಿದ್ಯಾಲಯಕ್ಕೆ ಚಾಲನೆ ನೀಡಿರುವುದರೊಂದಿಗೆ ಕೃಷಿ ಮೇಳವನ್ನು ಆರಂಭ ಮಾಡಿದೆ. ಪ್ರಾರಂಭದಲ್ಲಿ ಸಾಧಾರಣ ಮಟ್ಟದಲ್ಲಿ ರೈತರ ಸಂಖ್ಯೆ ಇದ್ದು ವರ್ಷದಿಂದ ವರ್ಷಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ರೈತರ ಸಂಖ್ಯೆಯು ಸಹ ಹೆಚ್ಚಾಗಿದೆ ಎಂದರು.
ಯಾಂತ್ರಿಕೃತದ ಮೂಲಕ ನಾಟಿ ಮಾಡುವುದನ್ನು ಹಾಗೂ ಕಳೆ ತೆಗೆಯುವ ಯಂತ್ರವನ್ನು ಪರಿಚಯಿಸಿದ್ದೇವೆ ಈ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕೃಷಿಯಲ್ಲಿ ಸುಧಾರಣೆ ಸಾಧ್ಯ ಎಂದ ಅವರು, ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಸಮೀಪದ ಇರುವಕ್ಕಿ ಗ್ರಾಮದಲ್ಲಿ ಕೃಷಿ ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ 150 ಕೋಟಿ ರು.ಮಂಜೂರು ಮಾಡಿದೆ ಎಂದರು.
ಕೃಷಿ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿದ ಮಾತನಾಡಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು, ಇತ್ತೀಚೆಗೆ ನೀರಾವರಿ ಹಾಗೂ ಫಲವತ್ತಾದ ಕೃಷಿ ಭೂಮಿಗಳಲ್ಲಿ ಭೂ ಪರಿವರ್ತನೆ ಮಾಡಿ ಲೇಔಟ್ಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ನೀರಾವರಿ ಭೂಮಿಗಳನ್ನು ಭೂ ಪರಿವರ್ತನೆಗೆ ಅನುಮತಿ ನೀಡಬೇಡಿ ಎಂದು ವೇದಿಕೆಯಲ್ಲಿ ಕುಳಿತ್ತಿದ್ದ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿ, ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಹಾಗೂ ಸಾಧಕ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.