ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳು ಕಡ್ಡಾಯ?!

By Suvarna NewsFirst Published Feb 22, 2021, 12:45 PM IST
Highlights

ಇತ್ತೀಚೆಗೆ ನಡೆದ ಗೋ ಎಲೆಕ್ಟ್ರಿಕ್ ಅಭಿಯಾನದಲ್ಲಿ ಮಾತನಾಡಿದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುವುದಾಗಿ ಹೇಳಿಕೊಂಡಿದ್ದಾರೆ. ತೈಲೋತ್ಪನಗಳ ಮೇಲಿನ ಅವಲಂಬನೆ ತಗ್ಗಿಸುವುದಕ್ಕಾಗಿ ವಿದ್ಯುತ್ ಚಾಲಿತ ವಾಹನಗಳು ಪರ್ಯಾಯವಾಗಿವೆ. ಈ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯ ಗಳಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಆಧರಿತ ವಾಹನಗಳ ಯುಗಾಂತ್ಯವಾಗುವ ಸನ್ನಿಹತವಾಗುತ್ತಿದೆ ಎನ್ನಿಸುತ್ತಿದೆ. ಯಾಕೆಂದರೆ, ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳಿಗೆ ನೀಡುತ್ತಿರುವ ಉತ್ತೇಜನ ಅಂಥದೊಂದು ಅನುಮಾನ ಹುಟ್ಟು ಹಾಕುತ್ತಿದೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಮಾತುಗಳು ಇದನ್ನು ಪುಷ್ಟಿಕರಿಸುತ್ತವೆ.

ಭಾರತದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ಜನಪ್ರಿಯತೆಗೊಳಿಸುವ ಸಂಬಂಧ ಹೆದ್ದಾರಿಗಳು ಮತ್ತು ರಸ್ತೆ ಸಾರಿಗ ಸಚಿವಾಲಯ ಅಗತ್ಯ ಹೆಜ್ಜೆಗಳನ್ನಿಟ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಆಧರಿತ ವಾಹನಗಳ ಬದಲಿಗೆ ಜನರು ಎಲೆಕ್ಟ್ರಿಕ್ ಆಧರಿತ ವಾಹನಗಳನ್ನು ಬಳಸಬೇಕು ಎಂದು ಸಚಿವ ನಿತಿನ್ ಗಡ್ಕರಿ ಅವರು ಸಲಹೆ ನೀಡಿದ್ದಾರೆ.

ಹೊಸ ಬಜಾಜ್ ಪಲ್ಸರ್ 180 ಬಿಡುಗಡೆಯಾಗಿದೆ, ಹೀಗಿದೆ ನೋಡಿ

ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಸಚಿವಾಲಯದ ಅಧಿಕಾರಿಗಳ ವರ್ಗಕ್ಕೆ ಇ-ವಾಹನಗಳನ್ನು ಕಡ್ಡಾಯಗೊಳಿಸಲಾಗುವುದು ಎಂದು ಸಚಿವರು ಅವರು ಹೇಳಿದ್ದಾರೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಸಾರಿಗೆ ಮತ್ತು ಇವಿ ಚಾರ್ಜಿಂಗ್ ಮೂಲಸೌಕರ್ಯಗಳ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ 'ಗೋ ಎಲೆಕ್ಟ್ರಿಕ್' ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು  ತಮ್ಮ ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಅಭಿಯಾನವು ದೇಶದಲ್ಲಿ ವಿದ್ಯುತ್‌ಚಾಲಿತ ಅಡುಗೆಯ ಅನುಕೂಲಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸಹ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದರು.

ಒಂದು ವೇಳೆ ಹತ್ತು ಸಾವಿರ ಎಲೆಕ್ಟ್ರಿಕ್ ವಾಹನಗಳನ್ನು ದಿಲ್ಲಿಗೆ ತಂದರೆ ತಿಂಗಳಿಗೆ ಇಂಧನಕ್ಕಾಗಿ 30 ಕೋಟಿ ರೂಪಾಯಿ ವೆಚ್ಚ ಮಾಡುವುದನ್ನು ತಪ್ಪಿಸಬಹುದು. ಜೊತೆಗೆ ಪರಿಸರ ಮಾಲಿನ್ಯ ಕೂಡ ರಕ್ಷಣೆಯಾಗುತ್ತದೆ. ನನ್ನ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸುತ್ತೇನೆ ಎಂದು ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು.

Indian Chief: ಭಾರತದಲ್ಲಿ ಬಿಡುಗಡೆಯಾಗಲಿದೆ ಇಂಡಿಯನ್ ಚೀಫ್ ಬೈಕ್

8 ಲಕ್ಷ ಕೋಟಿ ರೂ.ಗಳ ಆಮದು ವೆಚ್ಚಕ್ಕೆ ಕಾರಣವಾಗುವ ಪಳೆಯುಳಿಕೆ ಇಂಧನಗಳಿಗೆ ವಿದ್ಯುತ್ ಇಂಧನವು ಪ್ರಮುಖ ಪರ್ಯಾಯವಾಗಿದೆ. ಸಾಂಪ್ರದಾಯಿಕ ಇಂಧನಗಳಿಗೆ ಹೋಲಿಸಿದಾಗ, ವಿದ್ಯುತ್ ಇಂಧನವು ಕಡಿಮೆ ವೆಚ್ಚವನ್ನು ಹೊಂದಿರುತ್ತದೆ, ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಇದು ಸ್ಥಳೀಯವೂ ಆಗಿದೆ ಎಂದು ಗಡ್ಕರಿ ಅವರು ಅಭಿಪ್ರಾಯಪಟ್ಟರು.

ಇದೇ ಸಮಾರಂಭದಲ್ಲಿ ಹಾಜರಿದ್ದ ಇಂಧನ ಸಚಿವ ಆರ್ ಕೆ ಸಿಂಗ್ ಅವರಿಗೂ ಒತ್ತಾಯಿಸಿದ ಗಡ್ಕರಿ, ಅವರ ಇಲಾಖೆಯ ಅಧಿಕಾರಿಗಳಿಗೂ ಎಲೆಕ್ಟ್ರಿಕ್ ಆಧರಿತ ವಾಹನಗಳನ್ನು ಕಡ್ಡಾಯ ಮಾಡುವಂತೆ ಹೇಳಿದರು. ಇದೇ ವೇಳೆ, ದೇಶದಲ್ಲಿ ಅಡುಗೆಗೂ ವಿದ್ಯುತ್ ಅನ್ನು ಪರ್ಯಾಯ ಇಂಧನವನ್ನಾಗಿ ಬಳಸಲು ಆರಂಭಿಸಿದರೆ ಗ್ಯಾಸ್ ಆಮದು ಮೇಲಿನ ಅವಲಂಬನೆಯನ್ನು ತಪ್ಪಿಸಲು ಸಾಧ್ಯವಾಗುತ್ತದೆ. ನೀವು ಈಗಾಗಲೇ ಅಡುಗೆ ಅನಿಲ ಸಿಲೆಂಡರ್‌ಗಳಿಗೆ ಸಬ್ಸಿಡಿ ಕೂಡುತ್ತಿದ್ದೇವೆ. ನಾವ್ಯಾಕೆ ಎಲೆಕ್ಟ್ರಿಕ್ ಕುಕ್ಕಿಂಗ್ ಉಪಕರಣಗಳ ಮೇಲೆ ಸಬ್ಸಿಡಿಯನ್ನು ನೀಡಬಾರದು ಎಂದು ಕೇಳಿದರು.

ದೇಶದಲ್ಲೀಗ ವಿದ್ಯುತ್ ಚಾಲಿತ ವಾಹನಗಳನ್ನು ಜನಪ್ರಿಯಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿರುವ ಈ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಜನರನ್ನು ಪ್ರೇರೇಪಿಸಲಾಗುತ್ತಿದೆ. ಆದರೆ, ತೈಲ ಆಧರಿತ ವಾಹನಗಳಿಗೆ ಹೋಲಿಸಿದರೆ ವಿದ್ಯುತ್ ಚಾಲಿತ ವಾಹನಗಳು ಹೆಚ್ಚು ತುಟ್ಟಿ. ಇದೇ ಕಾರಣದಿಂದಾಗಿ ಹೆಚ್ಚಿನ ಜನರು ಈ ವಾಹನಗಳನ್ನು ಖರೀದಿಸಲು ಮುಂದಾಗುತ್ತಿಲ್ಲ. ತೈಲ ಆಧರಿತ ವಾಹನಗಳು ಮಾರಾಟವಾಗುವ ದರದಲ್ಲೇ ವಿದ್ಯುತ್ ಚಾಲಿತ ವಾಹನಗಳು ಮಾರಾಟಕ್ಕೆ ಸಿದ್ಧವಾದರೆ ಅವಗಳ ಬಳಕೆಯೂ ಹೆಚ್ಚಾಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ದೇಶದ ಮೊದಲ ಸಿಎನ್‌ಜಿ ಟ್ರಾಕ್ಟರ್ ಬಿಡುಗಡೆ: ಈ ಟ್ರಾಕ್ಟರ್ ಯಾರದ್ದು ಗೊತ್ತಾ?

click me!