ನಿಜವಾಯ್ತು ಪೂಜಾರಿ ಭವಿಷ್ಯ, ಘಟಾನುಘಟಿಗಳು ಬಂದ್ರು 'ಕೈ' ಹಿಡಿಯಲಿಲ್ಲ ಜನ..!

By Kannadaprabha NewsFirst Published Nov 15, 2019, 8:50 AM IST
Highlights

ಪಾಲಿಕೆ ಚುನಾವಣಾ ದಿನಾಂಕ ನಿಗದಿಯಾಗ್ತಿದ್ದಂತೆ ಕಾಂಗ್ರೆಸ್ ಪಕ್ಷದ ಘಟನುಘಟಿಗಳು ಬಂದು ಪ್ರಚಾರ ನಡೆಸಿದ ಮೇಲೂ ಜನ ಮಾತ್ರ ಕೈ ಹಿಡಿದಿಲ್ಲ. ಕಳೆದ ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ ಹೀನಾಯ ಸೋಲು ಅನುಭವಿಸಿದೆ.

ಮಂಗಳೂರು(ನ.15): ಪಾಲಿಕೆ ಚುನಾವಣಾ ದಿನಾಂಕ ನಿಗದಿಯಾಗ್ತಿದ್ದಂತೆ ಕಾಂಗ್ರೆಸ್ ಪಕ್ಷದ ಘಟನುಘಟಿಗಳು ಬಂದು ಪ್ರಚಾರ ನಡೆಸಿದ ಮೇಲೂ ಜನ ಮಾತ್ರ ಕೈ ಹಿಡಿದಿಲ್ಲ. ಕಳೆದ ಬಾರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ ಹೀನಾಯ ಸೋಲು ಅನುಭವಿಸಿದೆ.

ಘಟಾನುಘಟಿ ನಾಯಕರು ಬಂದರೂ ಕೈ ಸೋಲು

ಪಾಲಿಕೆ ಚುನಾವಣೆಯನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಕೂಡ ಗಂಭೀರವಾಗಿ ಪರಿಗಣಿಸಿದ್ದರು. ಕರಾವಳಿಯಲ್ಲಿ ಏಕೈಕ ಆಶಾಕಿರಣವಾಗಿದ್ದ ಪಾಲಿಕೆಯಲ್ಲಿ ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಸ್ವತಃ ಸಿದ್ದರಾಮಯ್ಯ, ಪಕ್ಷದ ರಾಜ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಹಿತ ಅನೇಕ ನಾಯಕರು ಆಗಮಿಸಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಇದ್ಯಾವುದೂ ‘ಕೈ’ಹಿಡಿದಿಲ್ಲ.

ಗೆದ್ದ ಪ್ರಮುಖರು

ಎಂ. ಶಶಿಧರ ಹೆಗ್ಡೆ (ಕಾಂಗ್ರೆಸ್‌), ಭಾಸ್ಕರ ಮೊಯ್ಲಿ (ಕಾಂಗ್ರೆಸ್‌), ಜೆಸಿಂತಾ ವಿಜಯ್‌ ಆಲ್ಫೆ್ರಡ್‌ (ಕಾಂಗ್ರೆಸ್‌), ಸುಮಿತ್ರಾ ಕರಿಯ (ಬಿಜೆಪಿ), ಪ್ರೇಮಾನಂದ ಶೆಟ್ಟಿ(ಬಿಜೆಪಿ), ಸುಧೀರ್‌ ಶೆಟ್ಟಿ(ಬಿಜೆಪಿ), ಲ್ಯಾನ್ಸಿಲಾಟ್‌ ಪಿಂಟೊ (ಕಾಂಗ್ರೆಸ್‌), ನವೀನ್‌ ಡಿಸೋಜ (ಕಾಂಗ್ರೆಸ್‌), ಪ್ರವೀಣ್‌ಚಂದ್ರ ಆಳ್ವ (ಕಾಂಗ್ರೆಸ್‌)

ಸೋತ ಪ್ರಮುಖರು

ಹರಿನಾಥ್‌ ಬೊಂದೆಲ್‌ (ಕಾಂಗ್ರೆಸ್‌), ಕೆ. ಅಶ್ರಫ್‌ (ಮಾಜಿ ಮೇಯರ್‌), ರೇವತಿ ಪುತ್ರನ್‌ (ಪಕ್ಷೇತರ- ಮಾಜಿ ಕಾರ್ಪೊರೇಟರ್‌), ಗುಲ್ಜಾರ್‌ ಬಾನು (ಪಕ್ಷೇತರ- ಮಾಜಿ ಮೇಯರ್‌), ಪ್ರತಿಭಾ ಕುಳಾಯಿ (ಕಾಂಗ್ರೆಸ್‌), ಕೆ. ಮಹಮ್ಮದ್‌ (ಕಾಂಗ್ರೆಸ್‌), ಪ್ರಕಾಶ್‌ ಬಿ. ಸಾಲ್ಯಾನ್‌ (ಕಾಂಗ್ರೆಸ್‌), ಅಶೋಕ್‌ ಕುಮಾರ್‌ ಡಿ.ಕೆ. (ಕಾಂಗ್ರೆಸ್‌), ಆಶಾ ಡಿಸಿಲ್ವ (ಬಿಜೆಪಿಗೆ ಪಕ್ಷಾಂತರ ಮಾಡಿದವರು), ವಿಜಯ ಕುಮಾರ್‌ ಶೆಟ್ಟಿ(ಬಿಜೆಪಿ).

ಅತಿ ಹೆಚ್ಚು ಅಂತರದ ವಿಜಯ

ವಾರ್ಡ್‌ ನಂ. 9ರ ಕುಳಾಯಿಯಲ್ಲಿ ಅತಿ ಹೆಚ್ಚು ಅಂತರದ ವಿಜಯ ದಾಖಲಾಗಿದೆ. ಬಿಜೆಪಿಯ ಜಾನಕಿ ಯಾನೆ ವೇದಾವತಿ 3140 ಮತ ಗಳಿಸಿದ್ದರೆ, ಕಾಂಗ್ರೆಸ್‌ನ ಗಾಯತ್ರಿ ಅರಾನ್ನ 768 ಮತ ಮಾತ್ರ ಪಡೆದಿದ್ದಾರೆ. 32 ನೋಟಾ ಮತಗಳು ಬಿದ್ದಿವೆ. ಇಲ್ಲಿನ ಗೆಲುವಿನ ಅಂತರ 2372. ಇದು ಅತಿ ಹೆಚ್ಚು ಅಂತರದ ಗೆಲುವು. ವಾರ್ಡ್‌ ನಂ. 37ರಲ್ಲಿ ಅತಿ ಕಡಿಮೆ ಅಂತರದ ಜಯ ದಾಖಲಾಗಿದೆ. ಕಾಂಗ್ರೆಸ್‌ನ ಕೇಶವ 2037 ಮತ ಗಳಿಸಿದ್ದರೆ, ಬಿಜೆಪಿಯ ಕಿರಣ್‌ ಮರೋಳಿ 2011 ಮತ ಗಳಿಸಿದ್ದಾರೆ. ಇಲ್ಲಿನ ಗೆಲುವಿನ ಅಂತರ 26 ಮತ ಮಾತ್ರ.

ಪೂಜಾರಿ ಭವಿಷ್ಯ ನಿಜವಾಯ್ತು!

ಚುನಾವಣಾ ಪೂರ್ವದಲ್ಲಿ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಬೆಂಬಲಿಗರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿಲ್ಲ ಎಂಬ ವಿಚಾರದ ಕುರಿತು ಅಪಸ್ವರ ಕೇಳಿಬಂದಿತ್ತು. ವಯೋಸಹಜ ಅನಾರೋಗ್ಯದ ನಡುವೆಯೂ ಸ್ವತಃ 2 ಬಾರಿ ಸುದ್ದಿಗೋಷ್ಠಿ ನಡೆಸಿದ್ದ ಪೂಜಾರಿ ‘ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ’ ಎಂಬ ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿ ಬಿಟ್ಟಿದೆ. ಕಾಂಗ್ರೆಸ್‌ ಪಾಲಿಗೆ ಪೂಜಾರಿ ನಿಜವಾಗಿಯೂ ಬಿಸಿ ತುಪ್ಪವಾಗಿದ್ದಾರೆ.

ಮಂಗಳೂರು: ಪಾಲಿಕೆ ನೂತನ ಸದಸ್ಯರಿವರು..!

click me!