
ಧರ್ಮಸ್ಥಳ (ಜು.30) ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಸಂಬಂಧ ನಡೆಯುತ್ತಿರುವ ಎಸ್ಐಟಿ ತನಿಖೆ ಹಾಗೂ ಕಾರ್ಯಾಚರಣೆ ಚುರುಕುಗೊಂಡಿದೆ. 2ನೇ ದಿನ ಕಾರ್ಯಾಚರಣೆಯಲ್ಲಿ ನಾಲ್ಕು ಸ್ಥಳವನ್ನು ಅಗೆದು ಪರಿಶೀಲಿಸಲಾಗಿದೆ. ದೂರುದಾರ ಸೂಚಿಸಿದ ನಾಲ್ಕೂ ಸ್ಥಳದಲ್ಲಿ ಯಾವುದೇ ಕಳೇಬರಹ ಪತ್ತೆಯಾಗಿಲ್ಲ. ಇದುವರೆಗೆ ಒಟ್ಟು 5 ಸ್ಥಳಗಳನ್ನು ಅಗೆದು ಪರಿಶೀಲಿಸಲಾಗಿದೆ. ಐದರಲ್ಲೂ ಯಾವುದೇ ಕಳೇಬರಹ ಪತ್ತೆಯಾಗಿಲ್ಲ.
ದೂರುದಾರ ಮೊದಲ ದಿನದ ಸ್ಥಳ ಮಹಜರಿನಲ್ಲಿ13 ಸ್ಥಳಗಳನ್ನು ಗುರುತಿಸಿದ್ದ. ಈ ಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವುದಾಗಿ ಆರೋಪಿಸಿದ್ದರು. ಪ್ರಭಾವಿಗಳ ಸೂಚನೆ ಮೇರೆಗೆ ರಹಸ್ಯವಾಗಿ ಶವಗಳನ್ನು ಹೂತುಹಾಕಿರುವುದಾಗಿ ಹೇಳಿದ್ದ. ದೂರುದಾರ ಸೂಚಿಸಿದ 13 ಸ್ಥಳಗಳ ಪೈಕಿ 5 ಸ್ಥಳಗಳನ್ನು ಎಸ್ಐಟಿ ಅಧಿಕಾರಿಗಳು ಉತ್ಖನನ ಮಾಡಿದ್ದಾರೆ. ಇಂದು ನಾಲ್ಕು ಸ್ಥಳಗಳಲ್ಲಿ ಉತ್ಖನನ ಮಾಡಲಾಗಿದ್ದು, ಎಸ್ಐಟಿ ಅಧಿಕಾರಿಗಳು ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ.
ಎರಡನೇ ದಿನದ ಉತ್ಖನನದಲ್ಲೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.ಇದೀಗ ಉತ್ಖನನ ಮೂರನೇ ದಿನದಲ್ಲಿ ಮುಂದುವರಿಯಲಿದೆ. ನಾಳೆ ಎಸ್ಐಟಿ ಅಧಿಕಾರಿಗಳು ಮತ್ತೆ ದೂರುದಾರನ ಕರೆದುಕೊಂಡು ನೇತ್ರಾವತಿ ಸ್ನಾನಘಟ್ಟದ ತನಿಖಾ ಸ್ಥಳಕ್ಕೆ ತೆರಳಲಿದ್ದಾರೆ. ಬಳಿಕ ಉತ್ಖನನ ನಡೆಯಲಿದೆ. ನಾಳೆ ದೂರುದಾರ ಗುರುತಿಸಿದ 8 ಸ್ಥಳದಲ್ಲಿ ಉತ್ಖನನ ನಡೆಯಲಿದೆ.
ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ ಅನನ್ಯ ಭಟ್ ಪರ ವಕೀಲ ಮಂಜುನಾಥ್ ನೀಡಿರು ಹೇಳಿಕೆ ಕುರಿತು ಇದೀಗ ಹಲವು ಅನುಮಾನಗಳು ವ್ಯಕ್ತವಾಗುತ್ತಿದೆ. ದೂರುದಾರ ಗುರುತಿಸಿದ್ದ ಆರಂಭಿಕ 5 ಸ್ಥಳದಲ್ಲಿ 12 ಶವಗಳನ್ನೂ ಹೂಳಲಾಗಿದೆ ಎಂದು ವಕೀಲ ಮಂಜುನಾಥ್ ಹೇಳಿದ್ದರು. ಆದರೆ ಆರಂಭಿಕ 5 ಸ್ಥಳದಲ್ಲಿ ಯಾವುದೇ ಅವಶೇಷ ಪತ್ತೆಯಾಗಿಲ್ಲ. 13ನೇ ಸ್ಥಳದಲ್ಲಿ ಹೆಚ್ಚಿನ ಶವಗಳನ್ನೂ ಹೂಳಲಾಗಿದೆ ಎಂದು ವಕೀಲರು ಹೇಳಿದ್ದಾರೆ.
ದೂರುದಾರ ಗುರುತಿಸಿದ್ದ ಮೊದಲ ಸ್ಥಳದಲ್ಲಿ ಎಸ್ಐಟಿ ಅಧಿಕಾರಿಗಳು ಒಟ್ಟು 8 ಅಡಿ ಆಳದವರೆಗೆ ಗುಂಡಿ ತೆಗೆಯಲಾಗಿತ್ತು. ನಾಲ್ಕು ಅಡಿವೆರೆಗೆ ಕಾರ್ಮಿಕರು ಗುಂಡಿ ಅಗೆದಿದ್ದರು. ಯಾವುದೇ ಕಳೇಬರ ಪತ್ತೆಯಾಗಿರಲಿಲ್ಲ. ಈ ವೇಳೆ ಮತ್ತೆ ದೂರುದಾರನ ಪ್ರಶ್ನಿಸಿದ ಎಸ್ಐಟಿ ಅಧಿಕಾರಿಗಳಿಗೆ 4 ರಿಂದ 6 ಅಡಿಯಲ್ಲಿ ಶವ ಹೂತಿರುವುದಾಗಿ ಹೇಳಿದ್ದ. ಭಾರಿ ಮಳೆ, ನೀರಿನ ಒರತದಿಂದ ಜೆಸಿಬಿ ಮೂಲಕ ಗುಂಡಿ ಅಗೆಯಲಾಗಿತ್ತು. ಜೆಸಿಬಿ ಮೂಲಕ ಮತ್ತೆ ನಾಲ್ಕು ಅಡಿ ಆಳಕ್ಕೆ ಗುಂಡಿ ಅಗೆಯಲಾಗಿತ್ತು. ಹೀಗಾಗಿ ಮೊದಲ ಸ್ಥಳವನ್ನು ಒಟ್ಟು 8 ಅಡಿ ಆಳದವರೆಗೆ ಗುಂಡಿ ಅಗೆಯಲಾಗಿತ್ತು. ಇನ್ನುಳಿದ ನಾಲ್ಕು ಸ್ಥಳಗಳನ್ನು 6 ಅಡಿ ವರೆಗೆ ಅಗೆಯಲಾಗಿದೆ.
ದೂರುದಾರ ತಾನು ಧರ್ಮಸ್ಥಳ ಮಾಜಿ ಸ್ವಚ್ಚತನಾ ನೌಕರ ಎಂದು ಹೇಳಿಕೊಂಡಿದ್ದಾನೆ. ತನ್ನ ಕೆಲಸದ ಅವಧಿಯಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದಾರೆ. ಜೀವಭಯದಿಂದ ಧರ್ಮಸ್ಥಳ ಬಿಟ್ಟು ಬೇರೆ ರಾಜ್ಯದಲ್ಲಿ ಕಟುಂಬದ ಜೊತೆ ನೆಲೆಸಿದ್ದೇನೆ. ಈ ಶವಗಳ ಪ್ರಕರಣ ಹಿಂದೆ ಪ್ರಭಾವಿಗಳಿದ್ದಾರೆ. ತನಗೂ ಹಾಗೂ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿದರೆ ಹೆಸರು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಈ ಆರೋಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಆದೇಶ ನೀಡಿತ್ತು. ಪ್ರಣವ್ ಮೊಹಂತಿ ನೇತೃತ್ವದಲ್ಲಿ ಎಸ್ಐಟಿ ತಂಡ ರಚನೆಯಾಗಿತ್ತು. ಇದರಂತೆ ದೂರುದಾರನ ಕರೆಯಿಸಿ ವಿಚಾರಣೆ ನಡೆಸಿದ ಎಸ್ಐಟಿ, ಬಳಿಕ ಧರ್ಮಸ್ಥಳ ಸುತ್ತ ಸ್ಥಳ ಮಹಜರು ನಡೆಸಿತ್ತು.