ಕೊರೋನಾ ವ್ಯಾಧಿ ರೂಪದಲ್ಲಿ ಒಕ್ಕರಿಸಿದ ಕೊರೋನಾ ಓಡಿಸಲು ಲಕ್ಷ್ಮಿ ಪೂಜೆ

By Suvarna NewsFirst Published Nov 13, 2020, 6:48 PM IST
Highlights

ಈ ಸಲ ಎಲ್ಲ ಕಡೆಯಲ್ಲಿಯೂ ಕೊರೋನಾ ರೂಪದಲ್ಲಿ ವ್ಯಾಧಿಲಕ್ಷ್ಮಿಯು ಬಂದು ಆವರಿಸಿಕೊಂಡಿದ್ದಾಳೆ. ಆಕೆಗೆ ಬಾಯ್ ಅನ್ನೋಣ. ಅದೃಷ್ಟಲಕ್ಷ್ಮಿಯನ್ನು ಸ್ವಾಗತಿಸೋಣ. ಅದಕ್ಕಾಗಿ ಈ ಬಾರಿ ಲಕ್ಷ್ಮೀಪೂಜೆ ಮಾಡೋಣ.

ಪುರೋಹಿತರು ದೇವಿಯನ್ನು ಸ್ತೋತ್ರ ಮಾಡುವಾಗ 'ಯಾ ದೇವಿ ಸರ್ವಭೂತೇಷು ವ್ಯಾಧಿರೂಪೇಣ ಸಂಸ್ಥಿತಾ' ಎಂದು ಹೇಳುವುದನ್ನು ನೀವು ಕೇಳಿರಬಹುದು. ವ್ಯಾಧಿ ಎಂದರೆ ಕಾಯಿಲೆ, ಕಸಾಲೆ, ರೋಗ ರುಜಿನ ಇತ್ಯಾದಿ. ಅಂದರೆ ದೇವಿಯು ವ್ಯಾಧಿಯ ರೂಪದಲ್ಲಿಯೂ ಇರುತ್ತಾಳೆ ಎಂದರ್ಥ. ವ್ಯಾಧಿಯಲ್ಲಿಯೂ ದೇವಿಯ ಅಂಶಗಳಿವೆ.

ಅದ್ಯಾಕೆ ದೇವಿ ವ್ಯಾಧಿ ರೂಪದಲ್ಲಿರುತ್ತಾಳೆ?

ಯಾಕೆಂದರೆ ಅದು ದೈವಕೃಪೆಯೂ ಆಗಿದೆ, ದೈವದ ಅವಕೃಪೆಯೂ ಆಗಿದೆ. ದೈವದ ಅವಕೃಪೆ ಇದ್ದಾಗ ನಮಗೆ ವ್ಯಾಧಿ ಬರುವುದು ಸ್ವಾಭಾವಿಕ. ಅದು ನಮ್ಮ ಪೂರ್ವ ಕುಕರ್ಮಗಳಿಗೆ ದೇವರು ನೀಡುತ್ತಿರುವ ಶಿಕ್ಷೆ ಎಂದು ತಿಳಿಯಬಹುದು. ಹಾಗೇ ಅದು ದೈವಕೃಪೆ ಕೂಡ. ಕೃಪೆ ಯಾಕೆ ಅಂದರೆ, ನಾವು ದೇವನಾಮೋಚ್ಚಾರಣೆಯನ್ನು ಮಾಡಿ, ದೇವರ ಕೃಪೆ ಮಾಡುವಂತೆ ವ್ಯಾಧಿ ಮಾಡುತ್ತದೆ. ಆದ್ದರಿಂದ ವ್ಯಾಧಿ ಬಂದಾಗ ದೇವನಾಮ ಸ್ಮರಣೆಯನ್ನು ಮಾಡಬೇಕು. ಆದರೆ ವ್ಯಾಧಿ ಬಂದಾಗ ಮಾತ್ರವೇ ದೇವರನ್ನು ನೆನೆಯುವುದಲ್ಲ. ಸದಾ ಮಾಡುತ್ತಿರಬೇಕು.

ಈಗ ಕೊರೊನಾ ವೈರಸ್ ಎಂಬ ವ್ಯಾಧಿ, ಕಾಯಿಲೆ ನಮ್ಮನ್ನು ಪೀಡಿಸುತ್ತಿದೆ. ದೇವಿಯನ್ನು ಮಾರಿ ಎಂದೂ ಪೂಜಿಸುವವರು ನಾವು ಹಿಂದೂಗಳು. ಈ ಕಾಯಿಲೆ ರೂಪದ ಮಾರಿ ಹೋಗಿ, ಲಕ್ಷ್ಮಿರೂಪದ ದೇವಿ ನಮ್ಮಲ್ಲಿ ಕೃಪೆ ತೋರಿ ನೆಲೆಸಲಿ ಎಂಬುದು ನಮ್ಮೆಲ್ಲರ ಆಶಯವಾಗಿರಲಿ. ನಾವೆಲ್ಲರೂ ಲಕ್ಷ್ಮೀದೇವಿಯನ್ನು ಭಕ್ತಿ ಭಾವಗಳಿಂದ ಪೂಜಿಸಿ ಅರ್ಚಿಸಿದರೆ ಆ ಲಕ್ಷ್ಮಿದೇವಿ ಖಂಡಿತವಾಗಿಯೂ ಕೃಪೆ ತೋರುತ್ತಾಳೆ.

ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ದೀಪಾವಳಿಯ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ. ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.

ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ.

ಮಾನವ ಜನ್ಮ ಆ ತಾಯಿಯ ಅನುಗ್ರಹ, ಅದನ್ನು ಸಾರ್ಥಕಗೊಳಿಸಿಕೊಳ್ಳೋಣ ...

ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯವನ್ನು ಅರ್ಪಿಸುತ್ತಾರೆ. ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ. (ಕೈಯಲ್ಲಿನ ದೀವಟಿಗೆಯನ್ನು ದಕ್ಷಿಣ ದಿಕ್ಕಿಗೆ ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.) ಹಸಿದವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’

ಪಂಚಾಂಗ: ಆರ್ಥಿಕ ಸದೃಢತೆಗಾಗಿ ಮಹಾಲಕ್ಷ್ಮಿಯ ಈ ಮಂತ್ರವನ್ನು 16 ಬಾರಿ ಜಪಿಸಿ ...

ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ.

ಆನಂತರ ಕಲಾಪ್ರೇಮಿ ಜನರಿಗೆ ಪ್ರಿಯವಾಗಿರುವ ಹಂಸವಾಹಿನಿ, ಜ್ಞಾನಸ್ವರೂಪಿಣಿ, ಜ್ಞಾನಿಯರಿಗೆ ವಿದ್ಯಾದಾನವನ್ನು ಮಾಡುವ ಮತ್ತು ಬಂದಿರುವ ಲಕ್ಷ್ಮೀಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಲು ವಿವೇಕವನ್ನು ಜಾಗೃತಗೊಳಿಸುವ ಶ್ರೀಸರಸ್ವತಿ ದೇವಿಯ ಪೂಜೆಯನ್ನು ಮಾಡಬೇಕು.

ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷ್ಮಿಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ ‘ಲಕ್ಷ್ಮೀ’ ಎನ್ನುತ್ತಾರೆ.

ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು! ...
 

 

click me!