
ಶಹಾಪುರ(ಜೂ.02): ತಾಲೂಕಿನ ಚಾಮನಾಳ ಗ್ರಾಮದ ಹೊಲವೊಂದರಲ್ಲಿ ಸೋಮವಾರ ಮೇ 30 ರಂದು ಯುವಕ ಸಚಿನ್ ಎಂಬಾತನನ್ನು ಸೀರೆಯೊಂದನ್ನು ಕುತ್ತಿಗೆಗೆ ಸುತ್ತಿ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಗೋಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರ ತಂಡ ಆರೋಪಿಗಳಿಬ್ಬರನ್ನು ಬುಧವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಿಬ್ಬರೂ ಕೊಲೆಯಾದ ಸಚಿನ್ ಮುರುಕುಂದ ಈತನ ಸ್ನೇಹಿತರೇ ಆಗಿದ್ದು, ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಚಿನ್ನನ್ನು ಕಲ್ಲಿನಿಂದ ಹೊಡೆದು ಸೀರೆಯಿಂದ ಕುತ್ತಿಗೆಗೆ ಸುತ್ತಿ ಉಸಿರು ಗಟ್ಟಿಸಿ ಕೊಲೆಗೈಯಲಾಗಿದೆ ಎಂದು ಎಸ್ಪಿ ಡಾ. ವೇದಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಂದ್ರಕಾಂತ ರಾಠೋಡ್ (28), ಹಳ್ಳೆಪ್ಪ ಮಾದರ (24) ಬಂಧಿತ ಆರೋಪಿಗಳು. ಆರೋಪಿ ಚಂದ್ರು ಚಾಮನಾಳ ಗ್ರಾಮದ ಸೀತಾರಾಮ ರಾಠೋಡ ಎಂಬ ರೈತನ ಹೊಲದಲ್ಲಿ ಬೆಳೆಸಲಾಗಿದ್ದ ಬದನೆ ಕಾಯಿಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಎನ್ನಲಾಗಿದೆ. ಈ ವಿಷಯ ತಿಳಿದಿದ್ದ ಸಚಿನ್ ಮಾಲೀಕ ಸೀತಾರಾಮ ಅವರಿಗೆ ಚಂದ್ರು ತಮ್ಮ ಹೊಲದಲ್ಲಿ ಬೆಳೆದ ಬದನೆಕಾಯಿ ಕಳುವು ಮಾಡಿಕೊಂಡು ಹೋಗಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ಆಗ ಬದನೆಕಾಯಿ ಮಾಲೀಕ ಸೀತಾರಾಮ ಆರೋಪಿ ಚಂದ್ರುಗೆ ತರಾಟೆಗೆ ತೆಗೆದುಕೊಂಡಿದ್ದ.
Belagavi Crime: ಹೊಡೆತಕ್ಕೆ ಪತ್ನಿ ಮೃತಪಟ್ಟಿದ್ದಾಳೆ ಎಂದು ತಿಳಿದು ಪತಿ ಆತ್ಮಹತ್ಯೆ!
ಈ ವಿಷಯಕ್ಕೆ ಸ್ನೇಹಿತರ ಮಧ್ಯೆ ಗಲಾಟೆ ಶುರುವಾಗಿದ್ದು, ಚಂದ್ರು ಮತ್ತು ಹಳ್ಳೆಪ್ಪ ಇಬ್ಬರು ಸಚಿನ್ ಜೊತೆ ಕುಡಿದ ಅಮಲಿನಲ್ಲಿ ಜಗಳವಾಡಿದ್ದಾರೆ. ಸಚಿನ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಕೊಲೆಗೈದಿರುವದಾಗಿ ಆರೋಪಿಗಳು ತಿಳಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಯಾದಗಿರಿ ಡಿವೈಎಸ್ಪಿ ಜೇಮ್ಸ್ ಮಿನೇಜೆಸ್ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ, ಗೋಗಿ ಠಾಣೆಯ ಪಿಎಸ್ಐ ಅಯ್ಯಪ್ಪ, ಭೀಗುಡಿ ಠಾಣೆಯ ಪಿಎಸ್ಐ ಸಂತೋಷ ರಾಠೋಡ ಸೇರಿದಂತೆ ಇತರೆ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ