
ಗಾಜಿಯಾಬಾದ್: ಕೊರಿಯನ್ ಆಟ ಹಾಗೂ ಅಲ್ಲಿನ ಜೀವನಶೈಲಿಯತ್ತ ಅತಿಯಾಗಿ ಆಕರ್ಶಿತರಾಗಿ, ಅದಕ್ಕೆ ಅಡ್ಡಿಯಾದಾಗ ಆತ್ಮ*ತ್ಯೆಗೆ ಶರಣಾದ ಮೂವರು ಸಹೋದರಿಯರ ಡೈರಿಯು ಇನ್ನೂ ಅನೇಕ ವಿಷಯಗಳ ಮೇಲೆ ಬೆಳಕು ಚೆಲ್ಲಿದೆ. ಅದರಲ್ಲಿ ಅವರಿಗೆ ಮನೆಯಲ್ಲಾಗುತ್ತಿದ್ದ ಹಿಂಸೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಸದ್ಯ ಪೊಲೀಸರ ವಶದಲ್ಲಿರುವ 9 ಪುಟಗಳ ಪುಟ್ಟ ಡೈರಿಯಲ್ಲಿ ಆ ಮೂವರಿಗೆ ಕೊರಿಯಾದ ಮೇಲಿನ ಪ್ರೀತಿ ಎಂಥದ್ದೆಂದು ಅನಾವರಣವಾಗಿದೆ. ‘ನಮಗೆ ಕೊರಿಯಾ ಎಂದರೆ ಪ್ರಾಣ. ಕೆ-ಪಾಪ್ (ಕೊರಿಯಾ ಸಂಗೀತ) ನಮ್ಮ ಪ್ರೀತಿ, ಅದೇ ಜೀವ. ಮನೆಯವರು ಮತ್ತು ಪರಿವಾರಕ್ಕಿಂತ ಹೆಚ್ಚಾಗಿ ನಮಗೆ ಕೊರಿಯಾದ ನಟರು ಮತ್ತು ಗಾಯಕರು ಇಷ್ಟವಿದ್ದರು. ಆದರೆ ನೀವು (ತಂದೆ) ನಮ್ಮನ್ನು ಇದೆಲ್ಲದರಿಂದ ದೂರವಿಡಲು ಯತ್ನಿಸಿದಿರಿ. ಹಾಗಾಗಿ, ನಿಮ್ಮ ಹೊಡೆತಕ್ಕಿಂತ ನಮಗೆ ಸಾವೇ ಮೇಲಾಗಿ ಕಂಡಿತು’ ಎಂದು ಸಹೋದರಿಯರಾದ ನಿಶಿಕಾ, ಪ್ರಾಚಿ, ಪಾಖಿ ಬರೆದಿದ್ದಾರೆ. ಜತೆಗೆ ಕೊರಿಯನ್ ಹೊರತಾಗಿ ಥಾಯ್, ಚೈನೀಸ್, ಜಪಾನೀಸ್, ಹಾಲಿವುಡನ್ ಸಂಗೀತ, ಚಲನಚಿತ್ರ ಮತ್ತು ಕಾರ್ಟೂನ್ಗಳ ಪಟ್ಟಿಯೂ ಅದರಲ್ಲಿ ಕಂಡುಬಂದಿದೆ.
ತಮ್ಮನ್ನು ತಾವು ಕೊರಿಯಾದ ರಾಜಕುಮಾರಿಯರು ಎಂದು ಭಾವಿಸಿದ್ದ ಆ ಮೂವರು, ‘ನಾವು ಭಾರತೀಯರಲ್ಲ’ ಎಂದು ನಿರ್ಧರಿಸಿಬಿಟ್ಟಿದ್ದರು. ಇದಕ್ಕೆ ಪುಷ್ಟಿ ಕೊಡುವಂತೆ ಕೆಲ ಆಘಾತಕಾರಿ ಸಾಲುಗಳೂ ಡೈರಿಯಲ್ಲಿ ಪತ್ತೆಯಾಗಿದೆ. ‘ನೀವು (ಮನೆಯವರು) ನಮ್ಮನ್ನು ಭಾರತೀಯರಿಗೆ ಮದುವೆ ಮಾಡಿಸಲು ಬಯಸಿದಿರಿ. ಆದರೆ ನಮ್ಮ ಪ್ರೀತಿಯಿದ್ದುದು ಕೊರಿಯನ್ನರ ಕಡೆಗೆ. ನಮ್ಮ ಆತ್ಮಹತ್ಯೆಗೆ ಇದೇ ಕಾರಣ. ನಮ್ಮ ಇನ್ನೊಬ್ಬ ಸಹೋದರಿಯಾಗಿರುವ ದೇವೂಳನ್ನು ನಾವು ದೂರವಿಟ್ಟು, ಶತ್ರುವಿನಂತೆ ಕಾಣುತ್ತಿದ್ದೆವು. ಕಾರಣ, ನೀವು ಆಕೆಯನ್ನು ನಮ್ಮಂತಾಗಲು ಬಿಡದೆ ಬಾಲಿವುಡ್ನ ಹುಚ್ಚು ಹಿಡಿಸಿದಿರಿ. ಅದು ನಮಗೆ ಹಿಡಿಸಲಿಲ್ಲ’ ಎಂದು ಬರೆಯಲಾಗಿದೆ.
ಗಾಜಿಯಾಬಾದ್: ಫಾರೆಕ್ಸ್ (ಕರೆನ್ಸಿ ವಹಿವಾಟು) ಟ್ರೇಡಿಂಗ್ ವಹಿವಾಟು ನಡೆಸುತ್ತಿದ್ದ ಮೃತ ಸಹೋದರಿಯರ ತಂದೆ ಚೇತನ್ ಅವರಿಗೆ ವ್ಯವಹಾರದಲ್ಲಿ 20-30 ಲಕ್ಷ ರು. ನಷ್ಟವಾಗಿ, 2 ಕೋಟಿ ರು. ಸಾಲ ಅವರ ತಲೆಯಮೇಲಿತ್ತು ಎಂದು ತಿಳಿದುಬಂದಿದೆ. ಒಂದು ಕಡೆ ಆರ್ಥಿಕ ಸಂಕಷ್ಟವಿದ್ದರೆ ಇನ್ನೊಂದು ಕಡೆ ಮಕ್ಕಳ ಕೊರಿಯನ್ ಹುಚ್ಚು ಮಿತಿಮೀರಿತ್ತು. ಇದೆರಡಕ್ಕೂ ಪರಿಹಾರವಾಗಿ ಅವರು ಮಕ್ಕಳ ಮೊಬೈಲ್ ಕಸಿದು ಅದನ್ನು 3,500 ರು.ಗೆ ಮಾರಿದ್ದರು ಎನ್ನಲಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಪರಿವಾರದ ಆರ್ಥಿಕ ಸ್ಥಿತಿಯ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ