
ಉತ್ತರ ಕನ್ನಡ (ಮೇ 22): ಇದೊಂದು ಟ್ರೈಯಾಂಗಲ್ ಲವ್ ಸ್ಟೋರಿ ಆಗಿದೆ. ಒಂದೇ ಹುಡುಗಿಗೆ ಇಬ್ಬರು ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅದರಲ್ಲಿ ಯುವತಿಯ ಹಾಲಿ ಪ್ರಿಯಕರ ಹಾಗೂ ಮದುವೆ ಮಾಡಿಕೊಳ್ಳುವ ಯುವಕನಿಗೆ ಮಾಜಿ ಪ್ರೇಮಿಯೇ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ನಡೆದಿದೆ.
ಹೌದು, ಇದೊಂದು ಪಕ್ಕಾ ಟ್ರೈಯಾಂಗಲ್ ಲವ್ ಸ್ಟೋರಿ ಆಗಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಮಣಕಿ ಮೈದಾನದ ಬಳಿ ಘಟನೆ ನಡೆದಿದೆ. ಮಾಜಿ ಪ್ರಿಯಕರ ಬಂದು ಹಾಲಿ ಪ್ರಿಯಕರನ ಕಣ್ಣಿಗೆ ಕಾರದ ಪುಡಿ ಎರಚಿ, ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಹಾಲಿ ಪ್ರೇಮಿ ದುಂಡಕುಳಿಯ ನಿವಾಸಿ ಸಂತೋಷ ಪಾಂಡುರಂಗ ಅಂಬಿಗ (27) ಆಗಿದ್ದಾನೆ. ಈತನಿಗೆ ಚಾಕು ಇರಿದ ಮಾಜಿ ಪ್ರಿಯಕರ ಹೆಗಡೆ ಚಿಟ್ಟಿಕಂಬಿ ನಿವಾಸಿ ರಾಜೇಶ ರಮೇಶ ಅಂಬಿಗ (27) ಎಂದು ತಿಳಿದುಬಂದಿದೆ.
ಇನ್ನು ಆರೋಪಿ ರಾಜೇಶ ಅಂಬಿಗ ವಾಟರ್ ಸರ್ವಿಸ್ ಸ್ಟೇಷನ್ನಲ್ಲಿ ಕೆಲಸ ಮಾಡಿಕೊಂಡಿದ್ದನು. ರಾಜೇಶ ತನಗೆ ಪರಿಚಯದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದನು. ಆದರೆ, ಈತನ ವರ್ತನೆ ಸರಿಯಿರದ ಕಾರಣ ಯುವತಿ ತನ್ನ ಮಾವನ ಮಗ ರಿಕ್ಷಾ ಚಾಲಕ ಸಂತೋಷನನ್ನು ಪ್ರೀತಿಸ್ತಿದ್ದಳು. ಅಲ್ಲದೇ, ಇಬ್ಬರೂ ಮದುವೆಯಾಗಲೂ ಇಚ್ಛಿಸಿದ್ದರು. ಇದಕ್ಕೆ ಸಿಟ್ಟಾದ ಆರೋಪಿ ರಾಜೇಶ ಕುಮಟಾದ ಮಣಕಿ ಮೈದಾನದ ಲೈಬ್ರೆರಿ ಬಳಿ ಸಂತೋಷನನ್ನು ಕರೆಯಿಸಿಕೊಂಡಿದ್ದನು. ತಾನು ಪ್ರೀತಿಸ್ತಿದ್ದ ಯುವತಿಯನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ಯಾ ಎಂದು ಗಲಾಟೆ ತೆಗೆದಿದ್ದನು.
ಈ ವೇಳೆ ಸಂತೋಷನಿಗೆ ಅವಾಚ್ಯ ಶಬ್ದಗಳಿಂದ ಬೈದು ಆತನ ಎದೆಗೆ ಕೈಯಿಂದ ಹೊಡೆದಿದ್ದನು. ಅಲ್ಲದೇ, ಕಣ್ಣಿಗೆ ಕಾರದ ಪುಡಿ ಎರಚಿದರೂ ಸಂತೋಷ ತಪ್ಪಿಸಿಕೊಂಡು ಓಡಲೆತ್ನಿಸಿದ್ದನು. ಈ ವೇಳೆ ನೀನು ನನ್ನಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಸಂತೋಷನ ಎಡ ಕುತ್ತಿಗೆ ಭಾಗಕ್ಕೆ ತಿವಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಆಗ ಸಂತೋಷನ ಸ್ನೇಹಿತರು ಬಂದು ಆತನನ್ನು ಕರೆದುಕೊಂಡು ಹೋಗಿದ್ದಾರೆ. ಸಂತೋಷನನ್ನು ಕರೆದುಕೊಂಡು ಹೋಗುವಾಗ ನೀನು ನನ್ನ ಹುಡುಗಿಯನ್ನು ಹೇಗೆ ಮದುವೆಯಾಗ್ತೀಯ ನೋಡಿಕೊಳ್ತೇನೆ. ಇನ್ನೊಮ್ಮೆ ಸಿಕ್ಕಾಗ ಕೊಲೆ ಮಾಡಿ ನಾಪತ್ತೆ ಮಾಡೋದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಗಾಯಾಳು ಸಂತೋಷನನ್ನು ಸ್ಥಳೀಯರು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಗಾಯಾಳುವನ್ನು ರವಾನೆ ಮಾಡಲಾಗಿದೆ. ಆರೋಪಿ ರಾಜೇಶ್ ರಮೇಶ ಅಂಬಿಗನನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ