
ಉಡುಪಿ (ಜ.15): ಕೃಷ್ಣನಗರಿ ಉಡುಪಿಯಲ್ಲಿ ಗಾಂಜಾ ಹಾಗೂ ಇನ್ನಿತರ ನಿಷೇಧಿತ ಮಾದಕ ವಸ್ತುವನ್ನು ಸೇವಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದ ನಾಲ್ವರನ್ನು ಜಿಲ್ಲಾ ಪೊಲೀಸರು ಮಣಿಪಾಲದ ವಿ.ಪಿ.ನಗರದ ಫ್ಲ್ಯಾಟ್ ನಲ್ಲಿ ಬಂಧಿಸಿದ್ದಾರೆ. ಒಟ್ಟು ಐವರು ಆರೋಪಿಗಳಿದ್ದು, ಅದರಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದಾನೆ.
ವಿವಿಧ ಜಿಲ್ಲೆಗಳ ಯುವಕರು ಸೇರಿಕೊಂಡು ಗಾಂಜಾ ಸೇವನೆಗೆ ಒಂದು ಗ್ಯಾಂಗ್ ಮಾಡಿಕೊಂಡಿದ್ದಾರೆ. ಇನ್ನು ದುಬಾರಿ ಬೆಲೆ ಬಾಳುವ ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಖರೀದಿ ಮಾಡಲು ಅನುಕೂಲ ಆಗುವಂತೆ ದರೋಡೆ ಮಾಡಲು ಮುಂದಾಗಿದ್ದಾರೆ. ನಂತರ, ಹಣ ಮಾಡುವುದಕ್ಕೆ ದರೋಡೆ ಮಾಡಿವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಗಾಂಜಾ ಸೇವನೆ ಮಾಡಿ ದರೋಡೆ ಮಾಡುವುದಕ್ಕೆ ಸ್ಕೆಚ್ ಹಾಕುತ್ತಿದ್ದರು. ನಂತರ, ನಗರದ ಹೊರ ಭಾಗಗಳಲ್ಲಿ ರಾತ್ರಿ- ಹಗಲೆನ್ನದೇ ದರೋಡೆ ಮಾಡುವ ಮೂಲಕ ಸಾರ್ವಜನಿಕರಿಗೆ ಮುಳ್ಳಾಗಿದ್ದರು. ಈಗ ಆರೋಪಿಗಳನ್ನು ಬಂಧಿಸಲಾಗಿದ್ದು, ಕೃಷ್ಣನಗರಿ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಬೆಂಗ್ಳೂರಲ್ಲಿ ದರೋಡೆ: 4 ಉಗ್ರರಿಗೆ 7 ವರ್ಷ ಜೈಲು
ನಾಲ್ವರು ಆರೋಪಿಗಳ ಬಂಧನ: ಕಾಪು ತಾಲೂಕು ಮಲ್ಲಾರು ಗ್ರಾಮದ ಕೋಟೆ ರಸ್ತೆಯ ಮುಝಾಮಿಲ್ ( 27), ಉದ್ಯಾವರ ಸಂಪಿಗೆ ನಗರದ ಸಾಜಾ ಕಂಪೌಂಡ್ ನ ಮೊಹಮ್ಮದ್ ಅನಾಸ್ ಸಾಹೇಬ್ (25), ಮಣಿಪಾಲ ಶಿವಳ್ಳಿ ಗ್ರಾಮದ ವಿ.ಪಿ ನಗರ ಅನಂತ ರೆಸಿಡೆನ್ಸಿ ಫ್ಲ್ಯಾಟ್ ನಂ. 201 ರ ಮಹಮ್ಮದ್ ರಫೀಕ್ (26), ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಸಬಾ ಬಾರೆಕಾಡುವಿನ ನಿಹಾಲ್ (18) ಬಂಧಿತ ಆರೋಪಿಗಳು ಆಗಿದ್ದಾರೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಿಗಳಿಂದ ಗಾಂಜಾ ವಶ: ಆರೋಪಿಗಳು ದರೋಡೆ ಮಾಡಲು ತಮ್ಮ ಬಳಿ ಇಟ್ಟುಕೊಂಡಿದ್ದ ಮಚ್ಚು -1, ಚೂರಿ -1, ಕಬ್ಬಿಣದ ಸುತ್ತಿಗೆ -1, ಮರದ ಸೋಂಟೆ -1, ಮೊಬೈಲ್ ಫೋನ್- 5 ಹಾಗೂ ಒಟ್ಟು 25 ಸಾವಿರ ರೂ. ಮೌಲ್ಯದ 6 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಮತ್ತು110 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧರಿಸಿ, ತಂಡವನ್ನು ರಚಿಸಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಆರೋಪಿಗಳಿಂದ ಉಂಟಾಗುತ್ತಿದ್ದ ಕುಕೃತ್ಯವನ್ನು ತಡೆಗಟ್ಟಲು ಇದರಿಂದ ಸಾಧ್ಯವಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚಿಂದ್ರ ಹಾಕೆ ಅವರು ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ಮಾರಕಾಸ್ತ್ರ ಹಿಡಿದು ನಿಂತಿದ್ದ ರಾಬರ್ಸ್: ಸಿನಿಮೀಯ ರೀತಿಯಲ್ಲಿ ಸೆರೆಯಾಗಿದ್ದು ಹೇಗೆ?
ದರೋಡೆ ಗ್ಯಾಂಗ್ ಬಂಧನದ ಪೊಲೀಸ್ ಪಡೆ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಅವರು ತಮ್ಮ ತಂಡದ ಸದಸ್ಯರಾದ ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ, ಮಣಿಪಾಲ ಪೋಲಿಸ್ ನಿರೀಕ್ಷಕ ದೇವರಾಜ ಟಿ.ವಿ, ಮಣಿಪಾಲ ಪಿ.ಎಸ್.ಐ ಅಬ್ದುಲ್ ಖಾದರ್, ಡಿ.ವಿ.ಬಿ.ಡಿ.ಸಿ ಕಚೇರಿಯ ಸಿಬ್ಬಂದಿ ವಸಂತ ಕುಮಾರ್ ಮತ್ತು ಮಣಿಪಾಲ ಪಿ.ಹೆಚ್.ಸಿ. ಯ ಸಿಬ್ಬಂದಿ ಪರಶುರಾಮ್, ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ನಾಗೇಶ್ ನಾಯಕ್, ಸಿಬ್ಬಂದಿಗಳಾದ ಸುಕುಮಾರ್ ಶೆಟ್ಟಿ, ಇಮ್ರಾನ್, ಪ್ರಸನ್ನ, ಸಲ್ಮಾನ್ ಖಾನ್, ಅರುಣ್ ಕುಮಾರ್, ಶುಭಾ, ಚೆನ್ನೇಶ್, ಆನಂದಯ್ಯ, ಚಾಲಕರಾದ ಸುದೀಪ್, ಮಲ್ಲನಗೌಡ ಅವರನ್ನು ಒಳಗೊಂಡ ಪೊಲೀಸರ ತಂಡವು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ